ಮೋಜಿನ ಜೀವನಕ್ಕಾಗಿ ಸರ ಕದಿಯುತ್ತಿದ್ದ ಆಟೋ ಚಾಲಕರ ಸೆರೆ

| Published : Apr 21 2024, 02:17 AM IST / Updated: Apr 21 2024, 07:03 AM IST

ಮೋಜಿನ ಜೀವನಕ್ಕಾಗಿ ಸರ ಕದಿಯುತ್ತಿದ್ದ ಆಟೋ ಚಾಲಕರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಮೋಜಿನ ಜೀವನಕ್ಕಾಗಿ ಮನೆ ಕಳ್ಳತನ, ಸರ ಕಸಿದು ಪರಾರಿ ಆಗುತ್ತಿದ್ದ ಮೂವರು ಆಟೋ ಡ್ರೈವರ್‌ಗಳು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ನಗರದಲ್ಲಿ ಮನೆಗಳ್ಳತನ ಹಾಗೂ ಸರಗಳ್ಳತನ ಕೃತ್ಯಗಳಲ್ಲಿ ತೊಡಗಿದ್ದ ಮೂವರು ಆಟೋ ಚಾಲಕರು ಸೇರಿದಂತೆ ಆರು ಮಂದಿ ಕಿಡಿಗೇಡಿಗಳನ್ನು ಪ್ರತ್ಯೇಕವಾಗಿ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೊರಟೆಗೆರೆ ದೊಡ್ಡಿ ಗ್ರಾಮದ ನಾಗೇಶ್ ಅಲಿಯಾಸ್ ಕುಳ್ಳ ನಾಗ, ಶಿವಲಿಂಗೇಗೌಡ ಹಾಗೂ ಕನಕನಗರದ ಪಿ.ಪ್ರತಾಪ್, ಆಟೋ ಚಾಲಕರಾದ ಉತ್ತರಹಳ್ಳಿಯ ಎಂ.ಪುನೀತ್ ಕುಮಾರ್‌, ಕಮಲಾನಗರದ ಆಕಾಶ್‌, ಮಲ್ಲಸಂದ್ರದ ಪ್ರಸನ್ನಕುಮಾರ್ ಅಲಿಯಾಸ್ ಬಿಳಿಯ, ಬಂಧಿತರು. ಆರೋಪಿಗಳಿಂದ ₹10.82 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಹಣದಾಸೆಗೆ ಸರಗಳ್ಳತನ ಕೃತ್ಯದಲ್ಲಿ ಆರೋಪಿಗಳು ತೊಡಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಪುಟ್ಟೇನಹಳ್ಳಿ 1ನೇ ಅಡ್ಡರಸ್ತೆ, ಬ್ರಿಗೇಡ್ ಸಿಗ್ನಲ್ ಹಾಗೂ ಜರಗನಹಳ್ಳಿಯ ಚಿಕ್ಕಸ್ವಾಮಿ ಲೇಔಟ್‌ನ ಮನೆಯಲ್ಲಿ ಕಳ್ಳತನ ಕೃತ್ಯಗಳು ನಡೆದಿದ್ದರು. ಈ ಪ್ರಕರಣಗಳ ತನಿಖೆ ನಡೆಸಿದ ಪುಟ್ಟೇನಹಳ್ಳಿ ಠಾಣೆ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪ್ರತ್ಯೇಕವಾಗಿ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. 

ಈ ಬಂಧಿತರ ಪೈಕಿ ಪುನೀತ್‌, ನಾಗೇಶ್‌ ಹಾಗೂ ಪ್ರಸನ್ನ ಆಟೋ ಚಾಲಕರಾಗಿದ್ದರು. ಅಲ್ಲದೆ ಶಿವಲಿಂಗೇಗೌಡ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿದ್ದ, ಇನ್ನುಳಿದ ಆಕಾಶ್ ಸ್ಕೂಟರ್ ಮೆಕ್ಯಾನಿಕ್ ಹಾಗೂ ಖಾಸಗಿ ಕಂಪನಿಯಲ್ಲಿ ಕಚೇರಿ ಸಹಾಯಕನಾಗಿ ಪ್ರತಾಪ್ ದುಡಿಯುತ್ತಿದ್ದ. ಮೋಜಿನ ಜೀವನಕ್ಕೆ ಸುಲಭವಾಗಿ ಹಣ ಸಂಪಾದಿಸಲು ಆರೋಪಿಗಳು ಹಾದಿ ತಪ್ಪಿ ಸರಗಳ್ಳತನ ಆರಂಭಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಅಲ್ಲದೆ ಪುನೀತ್‌, ಆಕಾಶ್ ಹಾಗೂ ಪ್ರತಾಪ್ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಈ ಮೂವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬೀಗ ಹಾಕಿದ ಮನೆಗಳಲ್ಲಿ ಆತ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.