ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣಕ್ಕೆ ಮೇ 4ರಂದು ನಡೆದಿದ್ದ ನೀಟ್‌ (ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ) ಪರೀಕ್ಷೆ ರದ್ದು ಮಾಡಿದ್ದ ಕೇಂದ್ರ ಸರ್ಕಾರ, ಜೂ.21ಕ್ಕೆ ಮರುಪರೀಕ್ಷೆ ನಡೆಸಲು ನಿರ್ಧರಿಸಿದೆ.

ಬಯಸಿದ ನಗರದಲ್ಲಿ ಪರೀಕ್ಷೆ । ಹೆಚ್ಚುವರಿ 15 ನಿಮಿಷ ಟೈಂ

22 ಲಕ್ಷ ವಿದ್ಯಾರ್ಥಿಗಳು ಮತ್ತೆ ಶುಲ್ಕ ಕಟ್ಟಬೇಕಿಲ್ಲ: ಸರ್ಕಾರ

ಒಎಂಆರ್‌ ಶೀಟ್‌ ಬದಲು ಇನ್ನು ಕಂಪ್ಯೂಟರ್‌ನಲ್ಲೇ ಪರೀಕ್ಷೆ

ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣಕ್ಕೆ ಮೇ 4ರಂದು ನಡೆದಿದ್ದ ನೀಟ್‌ (ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ) ಪರೀಕ್ಷೆ ರದ್ದು ಮಾಡಿದ್ದ ಕೇಂದ್ರ ಸರ್ಕಾರ, ಜೂ.21ಕ್ಕೆ ಮರುಪರೀಕ್ಷೆ ನಡೆಸಲು ನಿರ್ಧರಿಸಿದೆ. ಅಲ್ಲದೆ ಮರುಪರೀಕ್ಷೆಗೆ 22 ಲಕ್ಷ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸದೇ ಇರುವ, ಪರೀಕ್ಷೆ ಬರೆಯಲು ವೇಳೆ ಹೆಚ್ಚುವರಿ 15 ನಿಮಿಷ ಸಮಯ ನೀಡುವ ಮತ್ತು ವಿದ್ಯಾರ್ಥಿಗಳು ಬಯಸಿದ ನಗರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡುವುದಾಗಿ ಪ್ರಕಟಿಸಿದೆ.ಕೇಂದ್ರ ಶಿಕ್ಷಣ ಖಾತೆ ಸಚಿವ ಧರ್ಮೇಂದ್ರ ಪ್ರಧಾನ ಈ ಮಾಹಿತಿ ನೀಡಿದ್ದಾರೆ. ಅಲ್ಲದೆ ಪರೀಕ್ಷಾ ವ್ಯವಸ್ಥೆ ಸುಧಾರಣೆಯ ಭಾಗವಾಗಿ ಮುಂದಿನ ವರ್ಷದಿಂದ ಪರೀಕ್ಷೆಗಳನ್ನು ಒಎಂಆರ್‌ ಶೀಟ್‌ ಬದಲು ಪೂರ್ಣ ಪ್ರಮಾಣದಲ್ಲಿ ಕಂಪ್ಯೂಟರ್‌ ಮೂಲಕವೇ ನಡೆಸಲಾಗುತ್ತದೆ ಎಂದು ಪ್ರಕಟಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪ್ರಧಾನ್‌, ‘ವಿದ್ಯಾರ್ಥಿಗಳ ಭವಿಷ್ಯ ಸರ್ಕಾರದ ಅತ್ಯಂತ ಪ್ರಮುಖ ಆದ್ಯತೆಯಾಗಿರಲಿದೆ. ನೀಟ್‌- ಯುಜಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ವಿಷಯದಲ್ಲಿ ಕೇಂದ್ರ ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿರಲಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಪರೀಕ್ಷಾ ಮಾಫಿಯಾ ಅಥವಾ ಹಣ ಬಲ ವಿದ್ಯಾರ್ಥಿಗಳ ಸೀಟನ್ನು ಕಿತ್ತುಕೊಳ್ಳುವುದು ನಾವು ಒಪ್ಪುವುದು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಪರೀಕ್ಷೆ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ತಿಳಿಸಿದರು.ಮರುಪರೀಕ್ಷೆಗೆ ಹೊಸದಾಗಿ ನೋಂದಣಿಯ ಅಗತ್ಯ ಇರುವುದಿಲ್ಲ. ಪರೀಕ್ಷೆ ಬರೆಯಲು ಹೆಚ್ಚುವರಿ 15 ಸಮಯ ನೀಡಲಾಗುವುದು. ಜೂ.14ರವೇಳೆಗೆ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಲಭ್ಯವಾಗುವುದನ್ನು ಖಚಿತಪಡಿಸಲಾಗುವುದು. ಪರೀಕ್ಷೆ ದಿನ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ ರಾಜ್ಯ ಸರ್ಕಾರಗಳ ಜೊತೆ ಸಮನ್ವಯ ಸಾಧಿಸಲಾಗುವುದು. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಯಾವುದೇ ಭಯ ಇಟ್ಟುಕೊಳ್ಳದೇ ಪರೀಕ್ಷೆ ಹಾಜರಾಗಬೇಕು ಎಂದು ಪ್ರಧಾನ್‌ ಮನವಿ ಮಾಡಿದರು. ಅಲ್ಲದೆ ಮತ್ತೆ ಇಂಥ ಪ್ರಕರಣ ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.