ಸಾರಾಂಶ
ಜಮೀನಿಗೆ ನೀರು ಹಾಯಿಸುವ ವಿಚಾರದಲ್ಲಿ ದಾಯಾದಿ ತನ್ನ ಸ್ನೇಹಿತರೊಂದಿಗೆ ಸೇರಿ ತನ್ನ ಅಣ್ಣನ ಮಗನಿಂದ ಹತ್ಯೆ ಮಾಡಿರುವ ಘಟನೆ ತಾಲೂಕಿನ ದೇಶಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮದ್ದೂರು : ಜಮೀನಿಗೆ ನೀರು ಹಾಯಿಸುವ ವಿಚಾರದಲ್ಲಿ ದಾಯಾದಿ ತನ್ನ ಸ್ನೇಹಿತರೊಂದಿಗೆ ಸೇರಿ ತನ್ನ ಅಣ್ಣನ ಮಗನಿಂದ ಹತ್ಯೆ ಮಾಡಿರುವ ಘಟನೆ ತಾಲೂಕಿನ ದೇಶಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಮರಿಲಿಂಗಯ್ಯನ ಪುತ್ರ ಡಿ.ಎಂ.ಪ್ರಜ್ವಲ್, ಈತನ ಸ್ನೇಹಿತರಾದ ಕೊಪ್ಪ ಹೋಬಳಿ ಮುಳ್ಳಹಳ್ಳಿ ಪ್ರಜ್ವಲ್ ಹಾಗೂ ಕೋಣಸಾಲೆ ಗ್ರಾಮದ ಕೆ.ಆರ್.ಪ್ರೀತಂರನ್ನು ಬಂಧಿಸಲಾಗಿದೆ.
ಗ್ರಾಮದ ಬಳಿ ಕಳೆದ ಏ.10 ರಂದು ತಮ್ಮ ಜಮೀನಿನಲ್ಲಿ ನೀರು ಹಾಯಿಸಲು ಹೋಗಿದ್ದ ಗುರುಲಿಂಗಯ್ಯ ಅವರೊಂದಿಗೆ ಪಂಪ್ ಸೆಟ್ ನಲ್ಲಿ ಡೀಸೆಲ್ ಖಾಲಿಯಾಗಿದೆ ಎಂಬ ಕಾರಣಕ್ಕೆ ಗುರುಲಿಂಗಯ್ಯ ಅವರ ಅಣ್ಣ ಮರಲಿಂಗಯ್ಯನ ಪುತ್ರ ಡಿ.ಎಂ.ಪ್ರಜ್ವಲ್ ಜಗಳ ತೆಗೆದು ಗಲಾಟೆ ಮಾಡಿದ್ದಾನೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಪ್ರಜ್ವಲ್ ಗುರುಲಿಂಗಯ್ಯ ಅವರ ಮೇಲೆ ತನ್ನ ಸ್ನೇಹಿತರಾದ ಕೆ.ಆರ್.ಪ್ರೀತಮ್ ಹಾಗೂ ಪ್ರಜ್ವಲ್ ಅವರೊಂದಿಗೆ ಸೇರಿ ಹಲ್ಲೆನಡೆಸಿ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಮೃತ ಗುರುಲಿಂಗಯ್ಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತ್ನಿ ಕೆ.ಪುಷ್ಪಲತಾ ಬೆಸಗರಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಠಾಣೆ ಪಿಎಸ್ಐ ಮಲ್ಲಪ್ಪ ಸಂಗಪ್ಪ ಕಂಬಾರ ಅವರು ಪ್ರಕರಣ ದಾಖಲು ಮಾಡಿಕೊಂಡಿದ್ದರು. ನಂತರ ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ತನಿಖೆ ಕಾರ್ಯ ಕೈಗೊಂಡು ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ನಿಡಘಟ್ಟದ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ವಿಚಾರಣೆ ನಡೆಸಿದ ನಂತರ ಜೆಎಂಎಫ್ ಸಿ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.