ಕನ್ನಡಪ್ರಭ ವಾರ್ತೆ ಬೆಂಗಳೂರು
ಗರ್ಭಿಣಿಯಾಗಿರುವ ಅಪ್ರಾಪ್ತೆಯನ್ನು ಮದುವೆಯಾದ ಆರೋಪದ ಮೇಲೆ ಯುವಕ ಮತ್ತು ಆತನ ಪಾಲಕರ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರೀವಿಕ್ಷಣಾ ಅಧಿಕಾರಿ ತಿಲಕೇಶ್ ಕುಮಾರ್ ಎಂಬುವರು ನೀಡಿದ ದೂರಿನನ್ವಯ ಆರೋಪಿ ನಟರಾಜ್(20), ಈತನ ಪಾಲಕರ ವಿರುದ್ಧ ಹಾಗೂ ಬಾಲಕಿಯ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ನಟರಾಜ್ ತಮಿಳುನಾಡು ಮೂಲದವನಾಗಿದ್ದು, ಫುಡ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಬಾಲಕಿಯ ಕುಟುಂಬ ಸದಸ್ಯರಿಗೆ ಪರಿಚಿತನಾಗಿದ್ದನು. ಬಾಲಕಿಯು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿದ್ದು, ಮನೆಯಲ್ಲಿಯೇ ಇದ್ದಳು. ನಟರಾಜ್ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇಬ್ಬರ ಸಂಬಂಧದ ಬಗ್ಗೆ ಬೆಳಕಿಗೆ ಬರುತ್ತಿದಂತೆ ಎರಡು ಕುಟುಂಬದ ಸದಸ್ಯರು ಇಬ್ಬರಿಗೂ ವಿವಾಹ ಮಾಡಲು ನಿರ್ಧರಿಸಿದ್ದರು. ಅಂದರಂತೆ ಇತ್ತೀಚೆಗೆ ವಿವಾಹ ಕೂಡ ಮಾಡಿದ್ದರು.ಬಾಲಕಿ ಇಷ್ಟಪಟ್ಟಿದ್ದ ಯುವಕನಿಂದ ಪ್ರಕರಣ ಬೆಳಕಿಗೆ
ಈ ಬಾಲಕಿಯನ್ನು ವಿವಾಹವಾಗಲು ಬಯಸಿದ್ದ ಮತ್ತೊಬ್ಬ ಯುವಕ ಅಸಮಾಧಾನ ಹಾಗೂ ನಿರಾಶೆಯಿಂದ ಬಾಲಕಿಯ ವಿವಾಹದ ಬಗ್ಗೆ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದ. ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲಕಿಯ ಶಾಲೆಗೆ ಭೇಟಿ ನೀಡಿ ಆಕೆಯ ವಯಸ್ಸಿನ ಬಗ್ಗೆ ದೃಢೀಕರಣ ಪಡೆದು ನೋಡಿದ್ದಾಗ ಆಕೆಗೆ 17.6 ವರ್ಷ ಎಂಬುದು ಖಚಿತವಾಯಿತು. ಜತೆಗೆ ಬಾಲಕಿ ಕುಟುಂಬ ಸದಸ್ಯರ ಸಮ್ಮುಖದಲ್ಲಿಯೇ ವಿವಾಹವಾಗಿರುವ ಫೋಟೋ ಕೂಡ ಲಭ್ಯವಾಗಿತ್ತು.
ಆರೋಪಿಗಳಿಗಾಗಿ ಶೋಧ
ಬಾಲಕಿ ಅಪ್ರಾಪ್ತಳೆಂದು ತಿಳಿದಿದ್ದರೂ ಸಹ ಬಾಲ್ಯ ವಿವಾಹವಾಗಿರುವ ಆರೋಪಿ ನಟರಾಜ್, ಈತನ ಪಾಲಕರು ಹಾಗೂ ಬಾಲಕಿಯ ಪಾಲಕರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.