ಮನೆ ಕೆಲಸಗಳನ್ನು ನಿರ್ವಹಿಸುವ ಗೃಹಿಣಿಯ ಮಾಸಿಕ ಕಾಲ್ಪನಿಕ ಆದಾಯ ₹30 ಸಾವಿರ ಎಂದು ಪರಿಗಣಿಸಿರುವ ಹೈಕೋರ್ಟ್, ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರ ಸಾವಿಗೆ ₹59.69 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿದೆ.

ಬೆಂಗಳೂರು : ಮನೆ ಕೆಲಸಗಳನ್ನು ನಿರ್ವಹಿಸುವ ಗೃಹಿಣಿಯ ಮಾಸಿಕ ಕಾಲ್ಪನಿಕ ಆದಾಯ ₹30 ಸಾವಿರ ಎಂದು ಪರಿಗಣಿಸಿರುವ ಹೈಕೋರ್ಟ್, ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರ ಸಾವಿಗೆ ₹59.69 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿದೆ.

ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ ನೀಡಿರುವ ಪರಿಹಾರ ಆದೇಶ ರದ್ದು ಮಾಡಬೇಕು ಎಂದು ಕೋರಿ ವಿಮಾ ಕಂಪನಿ ಹಾಗೂ ಪರಿಹಾರ ಹೆಚ್ಚಳ ಮಾಡುವಂತೆ ಕೋರಿ ಮೃತರ ಸಂಬಂಧಿಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜಯಂತ್ ಬ್ಯಾನರ್ಜಿ ಹಾಗೂ ನ್ಯಾ.ತಾರಾ ವಿತಾಸ್ತ ಗಂಜು ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

₹59,69,000 (ಶೇ.9 ಬಡ್ಡಿ ಸಹಿತ) ನೀಡುವಂತೆ ವಿಮಾ ಕಂಪನಿಗೆ ಸೂಚನೆ

₹11.18 ಲಕ್ಷ ಪರಿಹಾರ ನೀಡಬೇಕು ಎಂದು ನ್ಯಾಯಾಧಿಕರಣ ಮಾಡಿದ್ದ ಆದೇಶ ರದ್ದುಗೊಳಿಸಿರುವ ಹೈಕೋರ್ಟ್, ಮೃತರ ಮಗನಿಗೆ ಪರಿಷ್ಕೃತ ಒಟ್ಟು ₹59,69,000 (ಶೇ.9 ಬಡ್ಡಿ ಸಹಿತ) ನೀಡುವಂತೆ ವಿಮಾ ಕಂಪನಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಮೃತರು ಗೃಹಿಣಿಯಾಗಿದ್ದರು. ಗೃಹಿಣಿಯರ ಶ್ರಮ ಮತ್ತು ಕುಟುಂಬಕ್ಕೆ ನೀಡುವ ಕೊಡುಗೆಯನ್ನು ಕೇವಲ ಕನಿಷ್ಠ ಆದಾಯದ ಆಧಾರದಲ್ಲಿ ಅಳೆಯಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ನ ‘ಶಿಶು ಪಾಲ್ ವಿರುದ್ಧ ಸುರ್ಜೀತ್’ ಪ್ರಕರಣದ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ. ಗೃಹಿಣಿಯ ಮಾಸಿಕ ಕಾಲ್ಪನಿಕ ಆದಾಯ ₹30 ಸಾವಿರ ಎಂದು ಪರಿಗಣಿಸಿ, ಭವಿಷ್ಯದ ಗಳಿಕೆಯ ಶೇ.40 ಭಾಗ ಸೇರಿಸಿ ಒಟ್ಟು ಪರಿಹಾರವನ್ನು ₹59.69 ಲಕ್ಷಗೆ ಹೆಚ್ಚಿಸಿ ಆದೇಶಿಸಿದೆ.

ಬೈಕ್‌ಗೆ ಹಸು ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ. ಕ್ರಿಮಿನಲ್ ನ್ಯಾಯಾಲಯದಲ್ಲಿ ಬೈಕ್ ಚಲಾಯಿಸುತ್ತಿದ್ದವರನ್ನು ಖುಲಾಸೆಗೊಳಿಸಲಾಗಿದೆ. ಹೀಗಾಗಿ, ಇದರಲ್ಲಿ ವಿಮಾ ಕಂಪನಿಯ ಹೊಣೆಗಾರಿಕೆ ಇಲ್ಲ ಎಂಬ ವಿಮಾ ಕಂಪನಿ ಪರ ವಕೀಲರ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ.\

ಪ್ರಕರಣದ ಹಿನ್ನೆಲೆ:

2011ರ ಅಕ್ಟೋಬರ್‌ನಲ್ಲಿ ಪುಟ್ಟತಾಯಮ್ಮ(37) ಅವರು ತಮ್ಮ ಪತಿ ಮಾಯಣ್ಣ ಗೌಡ ಜೊತೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ರಾಮನಗರ ಜಿಲ್ಲೆಯ ಬಿಡದಿ ಬಳಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. 45 ದಿನ ಆಸ್ಪತ್ರೆಯಲ್ಲಿ ಪಡೆದಿದ್ದ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದರು. ಚಿಕಿತ್ಸೆ ವೆಚ್ಚ ಹಾಗೂ ಪರಿಹಾರ ನೀಡಬೇಕು ಎಂದು ಕೋರಿ ವಾಹನ ಅಪಘಾತಗಳ ಪರಿಹಾರ ನ್ಯಾಯಮಂಡಳಿಯಲ್ಲಿ ಮೃತರ ಸಂಬಂಧಿಕರು ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ, ಚಿಕಿತ್ಸಾ ವೆಚ್ಚ ಸೇರಿ ಒಟ್ಟು ₹11.18 ಲಕ್ಷ ಪರಿಹಾರ ನಿಗದಿಪಡಿಸಿ ನ್ಯಾಷನಲ್ ಇನ್ಶೂರೆನ್ಸ್ ಕಂಪನಿಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಇನ್ಶೂರೆನ್ಸ್ ಕಂಪನಿ ಹಾಗೂ ಮೃತರ ಸಂಬಂಧಿಕರು ಹೈಕೋರ್ಟಿಗೆ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.