ಮೇಲುಕೋಟೆ:
ಕಳ್ಳತನ ಆರೋಪದ ಹಿನ್ನೆಲೆಯಲ್ಲಿ ಯೋಗನರಸಿಂಹಸ್ವಾಮಿ ಬೆಟ್ಟದ ಅರ್ಚಕ ಎಸ್.ನಾರಾಯಣಭಟ್ಟ ಸೇರಿ 6 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದ ಹಿನ್ನೆಲೆಯಲ್ಲಿ 6 ಮಂದಿಯನ್ನೂ ಜಿಲ್ಲಾಧಿಕಾರಿಗಳು ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಅರ್ಚಕರಾಗಿ ರಾಮಾನುಜರ ಸನ್ನಿಧಿಯ ಅರ್ಚಕ ವಿದ್ವಾನ್ ಬಿ.ವಿ. ಆನಂದಾಳ್ವಾರ್ ಜವಾಬ್ದಾರಿ ವಹಿಸಿಕೊಂಡು ಗುರುವಾರ ರಾತ್ರಿಯೇ ದೇಗುಲದಲ್ಲಿ ಪೂಜೆ ಆರಂಭಿಸಿದರು. ಇವರೊಟ್ಟಿಗೆ ಬದಲಿಯಾಗಿ ನಿಯೋಜಿಸಿದ ಇತರ ನೌಕರರೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ದೇವಸ್ಥಾನದ ಅರ್ಚಕರಾಗಿದ್ದ ನಾರಾಯಣ ಭಟ್ಟ ಸೇರಿದಂತೆ 6 ಮಂದಿ ವಿರುದ್ಧ ಚೆಲುವನಾರಾಯಣಸ್ವಾಮಿ ದೇಗುಲದ ಇಒ ಶೀಲಾ ನೀಡಿದ ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಆರೋಪದ ಸಂಬಂಧ ಎಫ್ಐಆರ್ ದಾಖಲಾಗಿತ್ತು.ದೇವಾಲಯದ ವ್ಯವಸ್ಥಾಪನಾ ಸಮಿತಿ ಜೂನ್ 16ರಂದು ತುರ್ತು ಸಭೆ ಸೇರಿ ಅರ್ಚಕ ನಾರಾಯಣಭಟ್ಟ ಪಾರುತ್ತೇಗಾರ್ ಶ್ರೀಧರ, ಅರ್ಚಕ ನಾರಾಯಣಭಟ್ಟ, ಪರಿಚಾರಕ ತಿರುವೇಂಗಡಾಚಾರ್, ಕಾವಲುಗಾರ ಎಂ.ಬಿ ಗಂಗಾಧರ, ಬಸವರಾಜು, ಮಣೇಗಾರ್ ಕಸ್ತೂರಿ ಶ್ರೀನಿವಾಸನ್ ರನ್ನು ಧಾರ್ಮಿಕದತ್ತಿ ಕಾಯ್ದೆ ನಿಯಮಾವಳಿಗಳಂತೆ ಅಮಾನತ್ತುಗೊಳಿಸಿ ತೆರವಾದ ಹುದ್ದೆಗಳಿಗೆ ಬೇರೆ ವ್ಯವಸ್ಥೆಮಾಡಿ ಇಲಾಖೆ ತನಿಖೆ ನಡೆಸಬಹುದೆಂದು ಶಿಪಾರಸ್ಸು ಮಾಡಿತ್ತು.
ಒಂದೇ ದಿನದಲ್ಲಿ ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿ ಕುಮಾರ್ ಅಮಾನತ್ತು ಆದೇಶ ಮಾಡಿದ್ದಾರೆ. ಹೀಗಾಗಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಸಮಕ್ಷಮದಲ್ಲಿ ಯೋಗಾನರಸಿಂಹಸ್ವಾಮಿ ಬೆಟ್ಟದ ಸುಗಮ ಆಡಳಿತ ನಿರ್ವಹಣೆಗಾಗಿ ಪಾರುಪತ್ತೇಗಾರ್ ಶ್ರೀಧರ ಬದಲಿಗೆ ಸ್ಥಾನೀಕ ಶ್ರೀರಾಮನ್, ಪರಿಚಾರಕರ ಬದಲಿಗೆ ಸ್ಥಾನೀಕಂ ಸಂಪತ್ ಕುಮಾರನ್, ಮಣೆಗಾರ ಹುದ್ದೆಗೆ ನರಸಿಂಹನ್ ಕಾಮಲುಗಾರ ಎಂ.ಬಿ.ಗಂಗಾಧರ ಮತ್ತು ಬಸವರಾಜು ಬದಲಿಗೆ ನಾರಾಯಣ ಮತ್ತು ಕಿಶೋರನ್ನು ನೇಮಿಸಿ ಗುರುವಾರ ಸಂಜೆಯೇ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.
ಮೇಲುಕೋಟೆ ಇನ್ಸ್ ಪೆಕ್ಟರ್ ಪೊಲೀಸ್ ಭದ್ರತೆ ನೀಡಿದ್ದರು.
ಪೊಲೀಸರಿಂದ ವಿಚಾರಣೆ ಆರಂಭ:ದೇವಾಲಯದ ಹುಂಡಿಯಲ್ಲಿ ಭಕ್ತರು ಹಾಕಿದ ಚಿನ್ನ, ಬೆಳ್ಳಿ ಸೇರಿದಂತೆ ನಗದು ಕಳ್ಳತನ, ಗರ್ಭಗೃಹ ಹಾಗೂ ಇತರ ಕಡೆಗಳಲ್ಲಿ ರಹಸ್ಯ ಕ್ಯಾಮೆರಾ ನಾಶ, ಡಿವಿಆರ್ ಸುಟ್ಟುಹಾಕಿದ್ದ ಆರೋಪದ ಕುರಿತು ದೇಗುಲದ ಇಒ ಶೀಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಭಕ್ತರು ನೀಡಿರುವ ಒಡವೆ ವಸ್ತ್ರಗಳನ್ನು ದಾಖಲೆಗೆ ತೋರಿಸದೆ ಕದ್ದಿರುವ ಶಂಕೆಯೂ ಇದ್ದು ಪೊಲೀಸು ವಿಚಾರಣೆಯನ್ನು ಸಹ ಆರಂಭಿಸಿದ್ದಾದೆ.