ಸಾರಾಂಶ
ನಾಗಮಂಗಲ : ಸಾಲಬಾಧೆಯಿಂದ ಬೇಸತ್ತು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಲಾಳನಕೆರೆ ಗ್ರಾಮದ ಕಾಂತೇಗೌಡರ ಪುತ್ರ ಜಯರಾಮೇಗೌಡ (65) ಆತ್ಮಹತ್ಯೆ ಮಾಡಿಕೊಂಡವರು.
ಗ್ರಾಮದಲ್ಲಿ 2.20 ಗುಂಟೆ ಜಮೀನು ಹೊಂದಿದ್ದ ರೈತ ಜಯರಾಮೇಗೌಡರು ಕೃಷಿ ಚಟುವಟಿಕೆ ಉದ್ದೇಶಕ್ಕಾಗಿ ಟ್ರ್ಯಾಕ್ಟರ್ ಸಾಲ ಸೇರಿದಂತೆ ಬೆಳೆ ಬೆಳೆಯುವ ಸಲುವಾಗಿ ಸ್ಥಳೀಯ ಸಹಕಾರ ಸಂಘ ಮತ್ತು ಖಾಸಗಿ ವ್ಯಕ್ತಿಗಳಿಂದ ಕೈ ಸಾಲ ಸೇರಿ ಒಟ್ಟು 8 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ.
ಮಾಡಿದ್ದ ಸಾಲವನ್ನು ತೀರಿಸಲಾಗದೆ ಆತ್ಮಸ್ಥೈರ್ಯ ಕಳೆದುಕೊಂಡಿದ್ದ ಜಯರಾಮೇಗೌಡ ಆ.29ರಂದು ಮದ್ಯದೊಂದಿಗೆ ಕ್ರಿಮಿನಾಶಕ ಬೆರಸಿ ಸೇವನೆ ಮಾಡಿ ತುರುವೇಕೆರೆ ತಾಲೂಕಿನ ಬಿ.ಪುರ ಗ್ರಾಮದ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದರು.
ಈ ವೇಳೆ ಹೊಟ್ಟೆ ಉರಿ ಎಂದು ಬಳಲುತ್ತಿದ್ದ ಇವರನ್ನು ದಬ್ಬೇಘಟ್ಟದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಬಳಿಕ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತಷ್ಟು ಚಿಕಿತ್ಸೆ ಕೊಡಿಸಿ ಸ್ವಗ್ರಾಮ ಲಾಳನಕೆರೆಗೆ ಕರೆತರಲಾಗಿತ್ತು.
ಸೋಮವಾರ ಮುಂಜಾನೆ 5.30ರ ಸಮಯದಲ್ಲಿ ಹೊಟ್ಟೆ ಉರಿ ಹೆಚ್ಚಾಗಿ ನರಳುತ್ತಿದ್ದ ರೈತ ಜಯರಾಮೇಗೌಡರನ್ನು ಆಂಬ್ಯುಲೆನ್ಸ್ ಮೂಲಕ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿಕೊಟ್ಟ ಬಿಂಡಿಗನವಿಲೆ ಪೊಲೀಸ್ ಠಾಣೆಯ ಪಿಎಸ್ಐ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಜಯರಾಮೇಗೌಡರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಘಟನೆ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.