ಬ್ಯಾಟರಾಯನಪುರ ವಾರ್ಡ್‌ನಲ್ಲಿ ನಾಯಿಗಳ ದಾಳಿಗೆ ವೃದ್ಧ ಬಲಿ : ವರದಿಗೆ ಸೂಚನೆ

| N/A | Published : Jul 31 2025, 01:48 AM IST / Updated: Jul 31 2025, 09:52 AM IST

stray dog attack
ಬ್ಯಾಟರಾಯನಪುರ ವಾರ್ಡ್‌ನಲ್ಲಿ ನಾಯಿಗಳ ದಾಳಿಗೆ ವೃದ್ಧ ಬಲಿ : ವರದಿಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಟರಾಯನಪುರ ವಾರ್ಡ್‌ನಲ್ಲಿ ಬೀದಿ ನಾಯಿಗಳ ದಾಳಿಗೆ ಸೀತಪ್ಪ ಮೃತಪಟ್ಟ ಘಟನೆ ಸಂಬಂಧ ಸ್ವತಂತ್ರ ತನಿಖೆ ನಡೆಸಿ ನಾಲ್ಕು ದಿನಗೊಳಗೆ ವರದಿ ನೀಡುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ್‌ ಅವರು ಎಸ್‌ಪಿ ಡಾ. ವಂಶಿಕೃಷ್ಣ ಅವರಿಗೆ ಸೂಚಿಸಿದ್ದಾರೆ.

 ಬೆಂಗಳೂರು :  ಬ್ಯಾಟರಾಯನಪುರ ವಾರ್ಡ್‌ನಲ್ಲಿ ಬೀದಿ ನಾಯಿಗಳ ದಾಳಿಗೆ ಸೀತಪ್ಪ ಮೃತಪಟ್ಟ ಘಟನೆ ಸಂಬಂಧ ಸ್ವತಂತ್ರ ತನಿಖೆ ನಡೆಸಿ ನಾಲ್ಕು ದಿನಗೊಳಗೆ ವರದಿ ನೀಡುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ್‌ ಅವರು ಎಸ್‌ಪಿ ಡಾ. ವಂಶಿಕೃಷ್ಣ ಅವರಿಗೆ ಸೂಚಿಸಿದ್ದಾರೆ.

ಈ ಘಟನೆ ಸಂಬಂಧ ಬುಧವಾರ ಬಿಬಿಎಂಪಿ ವಲಯ ಆಯುಕ್ತರು, ಜಂಟಿ ಆಯುಕ್ತರು, ಪಶು ಸಂಗೋಪನೆ, ಆರೋಗ್ಯ ಇಲಾಖೆ ಸೇರಿ ಸಂಬಂಧಿತ ಅಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಿದರು. ಜು.28ರಂದು ಮುಂಜಾನೆ ಸುಮಾರು 3.30ಕ್ಕೆ ಸೀತಪ್ಪ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಏಳೆಂಟು ಬೀದಿ ನಾಯಿಗಳು ಕಚ್ಚಿ ಸಾಯಿಸಿವೆ ಎಂದು ಅಧಿಕಾರಿಗಳು ಘಟನೆ ಕುರಿತು ಮಾಹಿತಿ ನೀಡಿದರು. ಇದಕ್ಕೆ ಲೋಕಾಯುಕ್ತ ನ್ಯಾಯಮೂರ್ತಿಗಳು ಇಂತಹ ಘಟನೆಗಳು ಮರುಕಳಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳ ವಿರುದ್ಧ ಅಸಮಾಧಾನ:

ಈ ಹಿಂದೆ ಇದೇ ಮಾದರಿಯ ಪ್ರಕರಣ ನಡೆದಾಗ ನೀಡಲಾಗಿದ್ದ ನಿರ್ದೇಶನಗಳನ್ನು ಪಾಲಿಸದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕ್ರೂರ ನಾಯಿಗಳನ್ನು ಗುರುತಿಸಿ ಅವುಗಳ ಮೇಲೆ ನಿಗಾವಹಿಸಿ ಈ ರೀತಿ ನಡೆದುಕೊಳ್ಳಲು ಕಾರಣ ತಿಳಿದುಕೊಂಡು ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಬ್ಸರ್ವೇಷನ್‌ನಲ್ಲಿ 33 ಬೀದಿ ನಾಯಿ :ಬಿಬಿಎಂಪಿ ಜಂಟಿ ನಿರ್ದೇಶಕ ಡಾ.ಚಂದ್ರಯ್ಯ ಮಾತನಾಡಿ, ಯಲಹಂಕ ವಲಯದಲ್ಲಿ ಅಬ್ಸರ್ವೇಷನ್‌ ಹೋಮ್‌ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, 15 ದಿನಗಳೊಳಗೆ ಪೂರ್ಣಗೊಳ್ಳಲಿದೆ. ಈಗಾಗಲೇ 33 ಬೀದಿ ನಾಯಿಗಳನ್ನು ಹಿಡಿದು ಅಬ್ಸರ್ವೇಷನ್‌ ಹೋಂನಲ್ಲಿ ಇರಿಸಲಾಗಿದೆ. ಸೀತಪ್ಪನಿಗೆ ಕಚ್ಚಿದ ನಾಯಿಗಳ ಗುರುತು ಪತ್ತೆಯಾಗಿಲ್ಲ ಎಂದು ತಿಳಿಸಿದರು. ಇದಕ್ಕೆ ಲೋಕಾಯುಕ್ತ ನ್ಯಾಯಮೂರ್ತಿಗಳು ಆ ನಾಯಿಗಳನ್ನು ಗುರುತಿಸಿ ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಅಬ್ಸರ್ವೇಷನ್‌ ಹೋಮ್‌ನಲ್ಲಿ ಇರಿಸುವಂತೆ ಸೂಚಿಸಿದರು.

ಇದೇ ವಾರ್ಡ್‌ನಲ್ಲಿ ತಿಂಗಳಿಗೆ 15-20 ಪ್ರಕರಣ :ಬಿಬಿಎಂಪಿ ಯಲಹಂಕ ವಲಯದ ಆರೋಗ್ಯಾಧಿಕಾರಿ ಡಾ.ಸಿದ್ಧಪ್ಪಾಜಿ ಮಾತನಾಡಿ, ಬ್ಯಾಟರಾಯನಪುರ ವಾರ್ಡ್‌ನಲ್ಲಿ ಪ್ರತಿ ತಿಂಗಳು 15-20 ನಾಯಿ ಕಚ್ಚುವ ಪ್ರಕರಣಗಳು ಬರುತ್ತಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ಸಹ ಇದೇ ವಾರ್ಡ್‌ನಲ್ಲಿ ಬೀದಿ ನಾಯಿ ಕಚ್ಚಿ ವೃದ್ಧ ಸಾವನಪ್ಪಿದ್ದರು ಎಂದು ಮಾಹಿತಿ ನೀಡಿದರು. ಇದಕ್ಕೆ ಲೋಕಾಯುಕ್ತ ನ್ಯಾಯಮೂರ್ತಿಗಳು, ಬೀದಿ ನಾಯಿ ಕಚ್ಚಿದವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. 2025ರ ಜನವರಿಂದ ಈವರೆಗೆ ಯಲಹಂಕ ವಲಯದಲ್ಲಿ ಬೀದಿ ನಾಯಿ ಕಚ್ಚಿರುವ ಪ್ರಕರಣಗಳ ಬಗ್ಗೆ ವಿವರವಾದ ವರದಿ ನೀಡುವಂತೆ ಸೂಚಿಸಿದರು.

Read more Articles on