ಸಾರಾಂಶ
ಸೈಬರ್ ವಂಚಕರು ಖಾಸಗಿ ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ನಗರದ ಸಾಫ್ಟ್ವೇರ್ ಎಂಜಿನಿಯರೊಬ್ಬರಿಗೆ ಕರೆ ಮಾಡಿ ಹೊಸ ಮೊಬೈಲ್ ಗಿಫ್ಟ್ ಕಳುಹಿಸಿ ಬಳಿಕ ಅವರ ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ ₹2.80 ಕೋಟಿ ದೋಚಿದ್ದಾರೆ.
ಬೆಂಗಳೂರು : ಸೈಬರ್ ವಂಚಕರು ಖಾಸಗಿ ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ನಗರದ ಸಾಫ್ಟ್ವೇರ್ ಎಂಜಿನಿಯರೊಬ್ಬರಿಗೆ ಕರೆ ಮಾಡಿ ಹೊಸ ಮೊಬೈಲ್ ಗಿಫ್ಟ್ ಕಳುಹಿಸಿ ಬಳಿಕ ಅವರ ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ ₹2.80 ಕೋಟಿ ದೋಚಿದ್ದಾರೆ.
ವೈಟ್ಫೀಲ್ಡ್ ನಿವಾಸಿ ದೇಬಾಶಿಷ್ ರಾಯ್ ವಂಚನೆಗೆ ಒಳಗಾದವರು. ಈ ಸಂಬಂಧ ವೈಟ್ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ಐಟಿ ಕಾಯ್ದೆ ಕಲಂ 66(ಸಿ), ಬಿಎನ್ಎಸ್ ಕಲಂ 318(4), 319(2) ಅಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಏನಿದು ಪ್ರಕರಣ?: ದೇಬಾಶಿಷ್ಗೆ ನ.27ರಂದು ಮೋಹಿತ್ ಜೈನ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ವಾಟ್ಸಾಪ್ ಕರೆ ಮಾಡಿದ್ದು, ಸಿಟಿ ಯೂನಿಯನ್ ಬ್ಯಾಂಕ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮಗೆ ಫ್ರೀ ಕ್ರೆಡಿಟ್ ಕಾರ್ಡ್ ಅಪ್ರೂವ್ ಆಗಿದೆ. ಏರ್ಟೆಲ್ ಶಾಪ್ಗೆ ತೆರಳಿ ಹೊಸ ಸಿಮ್ ಕಾರ್ಡ್ ಖರೀದಿಸುವಂತೆ ಸೂಚಿಸಿದ್ದಾನೆ.
ಹೊಸ ಮೊಬೈಲ್ ಗಿಫ್ಟ್: ಅಪರಿಚಿತನ ಸೂಚನೆಯಂತೆ ದೇಬಾಶಿಷ್, ಹೊಸ ಏರ್ಟೆಲ್ ಸಿಮ್ ಕಾರ್ಡ್ ಖರೀದಿಸಿದ್ದಾರೆ. ಬಳಿಕ ಅಪರಿಚಿತರು ಡಿ.1ರಂದು ಬ್ಯಾಂಕ್ ಹೆಸರಿನಲ್ಲಿ ದೇಬಾಶಿಷ್ ವಿಳಾಸಕ್ಕೆ ಗಿಫ್ಟ್ ರೂಪದಲ್ಲಿ ರೆಡ್ಮೀ 13ಸಿ ಮೊಬೈಲ್ ಕೊರಿಯರ್ ಕಳುಹಿಸಿದ್ದಾರೆ. ಅವರ ಸೂಚನೆ ಮೇರೆಗೆ ದೇಬಾಶಿಷ್ ಆ ಮೊಬೈಲ್ಗೆ ಹೊಸ ಸಿಮ್ ಕಾರ್ಡ್ ಹಾಕಿ ಆಕ್ಟಿವೇಟ್ ಮಾಡಿ ಕೆಲ ಮಾಹಿತಿ ಅಪ್ಲೋಡ್ ಮಾಡಿದ್ದಾರೆ. ಆದರೆ, ಮೊಬೈಲ್ಗೆ ಯಾವುದೇ ಇ-ಮೇಲ್ ಅಥವಾ ಸಂದೇಶಗಳು ಬಂದಿಲ್ಲ.
ಈ ಬಗ್ಗೆ ಅನುಮಾನಗೊಂಡ ದೇಬಾಶಿಷ್ ಡಿ.5ರಂದು ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗ ತಮ್ಮ 2 ಖಾತೆಗಳಿಂದ ವಿವಿಧ ಹಂತಗಳಲ್ಲಿ ಒಟ್ಟು ₹2.80 ಕೋಟಿ ಕಡಿತವಾಗಿರುವುದು ಬೆಳಕಿಗೆ ಬಂದಿದೆ.
ಸೈಬರ್ ವಂಚಕರು ಗಿಫ್ಟ್ ರೂಪದಲ್ಲಿ ಕಳುಹಿಸಿದ್ದ ಮೊಬೈಲ್ನಲ್ಲಿ ವಂಚನೆಗೆ ಅಗತ್ಯವಿರುವ ಕ್ಲೋನಿಂಗ್ ಮತ್ತು ಕೆಲ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿದ್ದರು. ದೇಬಾಶಿಷ್ ಮೊಬೈಲ್ಗೆ ಸಿಮ್ ಕಾರ್ಡ್ ಹಾಕಿ ಆ್ಯಕ್ಟಿವೇಟ್ ಮಾಡುತ್ತಿದ್ದಂತೆ ಸೈಬರ್ ವಂಚಕರು ಆ ಮೊಬೈಲ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ದೇಬಾಶಿಷ್ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.