ಇತ್ತೀಚೆಗೆ ಗಾಜಿಯಾಬಾದ್‌ನಲ್ಲಿ ಆನ್‌ಲೈನ್‌ ಗೇಮ್‌ ಚಟಕ್ಕೆ ಬಿದ್ದು 3 ಸೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಇಂಥದ್ದೇ ಘಟನೆ ಕರ್ನಾಟಕದ ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ನಡೆದಿದೆ. ಸೋದರಳಿಯನ ಆನ್‌ಲೈನ್‌ ಗೇಮ್‌ ಚಟಕ್ಕೆ ಇಡೀ ಕುಟುಂಬವೇ ನಾಮಾವಶೇಷವಾಗಿದೆ.

- ಸಾಲಕ್ಕೆ ಹೆದರಿ ನಾಲ್ವರು ನೇಣಿಗೆ ಶರಣು

- ಗುಬ್ಬಿಯಿಂದ ಬಿಹಾರಕ್ಕೆ ಹೋಗಿ ಆತ್ಮಹತ್ಯೆ

- ದಾರುಣ

--

ಆಗಿದ್ದೇನು?

- ಸೋದರಳಿಯ ಆನ್‌ಲೈನ್‌ ಗೇಮ್‌ ಆಡಿ ಸಾಲ ಮಾಡಿಕೊಂಡಿದ್ದ

- ಹೀಗಾಗಿ ಮಾವ ನಾಗಪ್ರಸಾದ್‌ ಆತನನ್ನು ಹತ್ಯೆ ಮಾಡಿದ್ದ

- ಬಳಿಕ ಬಂಧಿತನಾಗಿದ್ದ ಪ್ರಸಾದ್‌ ಇತ್ತೀಚೆಗೆ ಬಿಡುಗಡೆ ಆಗಿದ್ದ

- ಆದರೆ ವಿಪರೀತ ಸಾಲವಿತ್ತು. ಇದಕ್ಕೆ ಬೆಚ್ಚಿದ್ದ ಕುಟುಂಬ

- ಬಿಹಾರದ ಜೈನ ಕ್ಷೇತ್ರಕ್ಕೆ ಪ್ರವಾಸಕ್ಕೆ ಹೋಗಿ ನಾಲ್ವರು ನೇಣಿಗೆ

==

ಕನ್ನಡಪ್ರಭ ವಾರ್ತೆ ಗುಬ್ಬಿ (ತುಮಕೂರು)

ಇತ್ತೀಚೆಗೆ ಗಾಜಿಯಾಬಾದ್‌ನಲ್ಲಿ ಆನ್‌ಲೈನ್‌ ಗೇಮ್‌ ಚಟಕ್ಕೆ ಬಿದ್ದು 3 ಸೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಇಂಥದ್ದೇ ಘಟನೆ ಕರ್ನಾಟಕದ ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ನಡೆದಿದೆ. ಸೋದರಳಿಯನ ಆನ್‌ಲೈನ್‌ ಗೇಮ್‌ ಚಟಕ್ಕೆ ಇಡೀ ಕುಟುಂಬವೇ ನಾಮಾವಶೇಷವಾಗಿದೆ.

ಬಿಹಾರದ ನಳಂದ ಜಿಲ್ಲೆಯ ಪ್ರಸಿದ್ಧ ಜೈನ ಯಾತ್ರಾ ಕೇಂದ್ರ ಮತ್ತು ಸಿದ್ಧ ಕ್ಷೇತ್ರ ರಾಜಗೀರ್‌ನ ಜೈನ ಧರ್ಮಶಾಲೆಯಲ್ಲಿ ಶುಕ್ರವಾರ ನೇಣು ಬಿಗಿದ ಸ್ಥಿತಿಯಲ್ಲಿ ನಾಲ್ವರ ಶವ ಪತ್ತೆಯಾಗಿತ್ತು. ಮೃತರನ್ನು ಗುಬ್ಬಿಯ ಜಿ.ಆರ್.ಸುಮಂಗಲಾ (78), ಅವರ ಪುತ್ರ ಜಿ.ಆರ್.ನಾಗಪ್ರಸಾದ್ (50), ಆಕೆಯ ಇಬ್ಬರು ಪುತ್ರಿಯರಾದ ಜಿ.ಆ‌ರ್.ಶಿಲ್ಪಾ (48) ಮತ್ತು ಜಿ.ಆರ್.ಶ್ರುತಾ (43) ಎಂದು ಗುರುತಿಸಲಾಗಿದೆ.

ಸೋದರಳಿಯನ ಆನ್‌ಲೈನ್‌ ಗೇಮ್‌ ಚಟದಿಂದ ಕುಟುಂಬ ವಿಪರೀತ ಸಾಲಕ್ಕೆ ಈಡಾಗಿದ್ದು, ಈ ಸಾಲಕ್ಕೆ ಹೆದರಿ ಕುಟುಂಬಸ್ಥರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಪೊಲೀಸ್‌ ತನಿಖೆ ವೇಳೆ ತಿಳಿದು ಬಂದಿದೆ.ಪ್ರಕರಣವೇನು?:

ಮೂಲತಃ ತುಮಕೂರು ಜಿಲ್ಲೆ ಗುಬ್ಬಿಯ ನಾಗಪ್ರಸಾದ್‌ ಕುಟುಂಬ ಕಳೆದ 20 ವರ್ಷಗಳಿಂದ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ವಾಸವಿತ್ತು. ನಾಗಪ್ರಸಾದ್‌ನ ಸೋದರಳಿಯ ಅಮೋಘ ಕೀರ್ತಿ ಎಂಬಾತ ಆನ್‌ ಲೈನ್‌ ಗೇಮ್‌ ಚಟಕ್ಕೆ ಈಡಾಗಿ ಮನೆಯವರಲ್ಲಿ ಪದೇ ಪದೇ ಹಣ ಕೇಳುತ್ತಿದ್ದ. ಅಲ್ಲದೆ, ಸಾಕಷ್ಟು ಸಾಲ ಕೂಡ ಮಾಡಿದ್ದ. ವಿಷಯ ತಿಳಿದ ನಾಗಪ್ರಸಾದ್‌, ಸ್ವಲ್ಪ ಸಾಲ ತೀರಿಸಿದ್ದ. ಕಳೆದ ಆಗಸ್ಟ್‌ ನಲ್ಲಿ ಈ ವಿಷಯವಾಗಿ ಮಾವ ನಾಗಪ್ರಸಾದ್‌ ಜೊತೆ ಜಗಳ ಮಾಡಿದ್ದ ಅಮೋಘ ಕೀರ್ತಿ, ಹಣ ಕೊಡದಿದ್ದಕ್ಕೆ ಕೋಪಗೊಂಡು ಮಾವ ನಾಗಪ್ರಸಾದ್‌ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ರೊಚ್ಚಿಗೆದ್ದ ನಾಗಪ್ರಸಾದ್‌ ಅಳಿಯನನ್ನು ಕತ್ತು ಸೀಳಿ ಕೊಂದು ಹಾಕಿದ್ದ. ಬಳಿಕ, ತಾನು ಕೆರೆಗೆ ಹಾರಿ ಆತ್ಮಹತ್ಯೆಗೆ ಎತ್ನಿಸಿದ್ದ. ಆದರೆ, ದಾರಿ ಹೋಕರು ನೋಡಿ ಈತನನ್ನು ಬಚಾವ್‌ ಮಾಡಿದ್ದರು. ನಂತರ, ಪೊಲೀಸರಿಗೆ ಶರಣಾಗಿದ್ದ.

ಈ ವೇಳೆ ಆತನ ತಂಗಿ ಶಿಲ್ಪಾ, ಅಣ್ಣನನ್ನು ಜಾಮೀನಿನ ಮೇಲೆ ಹೊರಗೆ ಕರೆ ತಂದಿದ್ದರು. ಆದರೆ, ಆ ವೇಳೆಗಾಗಲೇ ಕುಟುಂಬದ ಆರ್ಥಿಕ ಪರಿಸ್ಥಿತಿ ವಿಪರೀತ ಹದಗೆಟ್ಟಿತ್ತು. ಸಂಬಂಧಿಕರಿಂದ, ಇತರರಿಂದ ಸಾಲ ತೆಗೆದುಕೊಂಡಿದ್ದರು. ಕಳೆದ ತಿಂಗಳು ಸಹ ಗುಬ್ಬಿಯಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿದ್ದ ಮೃತ ಶಿಲ್ಪಾ ಹಾಗೂ ತಾಯಿ ಸುಮಂಗಲಾ, 4 ಲಕ್ಷ ಹಣ ಕೊಡುವಂತೆ ಕೇಳಿದ್ದರು. ಆದರೆ, ಹಣದ ವ್ಯವಸ್ಥೆಯಾಗಿರಲಿಲ್ಲ.

ಇದರಿಂದ ಕುಟುಂಬ ಸಾಕಷ್ಟು ಬೇಸತ್ತಿತ್ತು. ಈ ಮಧ್ಯೆ, ಪಾಪ ವಿಮೋಚನೆಗಾಗಿ ಕುಟುಂಬಸ್ಥರು ದೇವಾಲಯಗಳಿಗೆ ಯಾತ್ರೆ ಹೊರಟಿದ್ದರು. ಈ ನಾಲ್ವರೂ ನೇಪಾಳಕ್ಕೆ ಪ್ರವಾಸ ಹೋಗಿ ಜ.30ರಂದು ಬಿಹಾರದ ರಾಜಗೀರ್‌ಗೆ ಬಂದು ಧರ್ಮಶಾಲೆಯಲ್ಲಿ ಕೊಠಡಿ ಬುಕ್ ಮಾಡಿದ್ದರು. ಮುಂದೆ ನಳಂದದ ಪಾವಾಪುರಿಗೆ ಹೋಗಲು ಯೋಜಿಸಿದ್ದರು. ಆದರೆ, ತಾವು ಉಳಿದಿಕೊಂಡಿದ್ದ ರಾಜಗೀರ್ ಜೈನ ಧರ್ಮಶಾಲೆಯಲ್ಲೇ ಇವರು ನೇಣಿಗೆ ಶರಣಾಗಿದ್ದಾರೆ.

ಶುಕ್ರವಾರ ಬೆಳಗ್ಗೆ 9.40ರ ವೇಳೆ ಕೊಠಡಿಯಿಂದ ಕೊಳೆತ ವಾಸನೆ ಬಂದ ಹಿನ್ನೆಲೆಯಲ್ಲಿ ಧರ್ಮಶಾಲೆಯ ಮ್ಯಾನೇಜರ್ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೃತರಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ಇವರು ಗುಬ್ಬಿಯವರು ಎಂಬುದು ತಿಳಿದು ಬಂದಿದೆ.

ಮೃತದೇಹಗಳನ್ನು ನಾಳಂದ ಜಿಲ್ಲೆಯ ಬಿಹಾರ್ ಶರೀಫ್‌ನಲ್ಲಿರುವ ಸದರ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮೃತರಿಗೆ ಸೇರಿದ ಮೊಬೈಲ್ ಪೋನ್‌ ಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಸೇರಿ ಹಲವು ದಾಖಲೆಗಳು, 1.18 ಲಕ್ಷ ನಗದು ಹಾಗೂ ನಿದ್ರೆ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನಳಂದ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.