ಸಾರಾಂಶ
ಅನಿಲ ಸೋರಿಕೆಯಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದಾಸರಹಳ್ಳಿ : ಅನಿಲ ಸೋರಿಕೆಯಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಡಕಮಾರನಹಳ್ಳಿಯ ಓವರ್ ಟ್ಯಾಂಕ್ ಬಳಿಯ ನಿವಾಸಿ ನಾಗರಾಜ್ (50) ಮತ್ತು ಪಕ್ಕದ ಮನೆಯ ನಿವಾಸಿ ಶ್ರೀನಿವಾಸ್ (50) ಮೃತರು. ಅಡಕಿಮಾರನಹಳ್ಳಿ ನಿವಾಸಿ ಗಂಗಯ್ಯ ಎಂಬುವವರಿಗೆ ಸೇರಿದ ಮನೆಯಲ್ಲಿ ಬಳ್ಳಾರಿ ಮೂಲದ ಮೃತ ನಾಗರಾಜ್ ಎರಡು ವರ್ಷದ ಹಿಂದೆ ಬಾಡಿಗೆ ಮನೆ ಪಡೆದು ಪತ್ನಿ ಲಕ್ಷ್ಮೀದೇವಿ, ಮಕ್ಕಳು ಬಸನಗೌಡ, ಅಭಿಷೇಕ್ ಗೌಡ ವಾಸವಿದ್ದರು.
ದುರಂತ ನಡೆದ ದಿನ ಬೆಳಗ್ಗೆ ಕೆಲಸಕ್ಕೆಂದು ತೆರಳುತ್ತಿದ್ದ ನಾಗರಾಜ್ ದೇವರಿಗೆ ದೀಪ ಹಚ್ಚಿದ್ದರು. ಖಾಲಿಯಾಗಿದ್ದ ಸಿಲಿಂಡರ್ ಬದಲಾಯಿಸಲು ಎರಡನೇ ಮಗ ಅಭಿಷೇಕ್ ಮುಂದಾಗಿದ್ದ. ಅಜಾಕಗರೂಕತೆಯಿಂದ ಸಿಲಿಂಡರ್ ಫಿಟ್ ಮಾಡುತ್ತಿದ್ದ ವೇಳೆ ಸಿಲಿಂಡರ್ನಿಂದ ಗ್ಯಾಸ್ ಸೋರಿಕೆ ಆಗಿದೆ. ಕೆಲಸ ಸಮಯದ ಬಳಿಕ ಬೆಂಕಿ ತಗುಲಿ ಮನೆ ಹೊತ್ತಿ ಉರಿದಿದೆ.
ಇದರಿಂದ ನಾಗರಾಜ್, ಲಕ್ಷ್ಮಿದೇವಿ, ಬಸವನಗೌಡ, ಅಭಿಷೇಕ್ ಬೆಂಕಿಯಲ್ಲಿ ಸಿಲುಕಿದರು. ಈ ವೇಳೆ ಲಕ್ಷ್ಮಿದೇವಿ, ಬಸನಗೌಡ ಮನೆಯಿಂದ ಓಡಿ ಬಂದರೆ, ನಾಗರಾಜ್ ಹಾಗೂ ಅಭಿಷೇಕ್ ಬೆಂಕಿಗೆ ಸಿಲುಕಿದರು. ಈ ವೇಳೆ ಪಕ್ಕದ ಮನೆಯಲ್ಲಿದ್ದ ಶ್ರೀನಿವಾಸ್ ಹಾಗೂ ಮನೆ ಮಾಲೀಕ ಶಿವಶಂಕರ್ ಬೆಂಕಿ ಆರಿಸಲು ಮುಂದಾದರು. ನಾಗರಾಜ್ ಮತ್ತು ಅಭಿಷೇಕ್ ಪ್ರಾಣ ಉಳಿಸಲು ಹೋಗಿದ್ದ ಶ್ರೀನಿವಾಸ್ ಹಾಗೂ ಶಿವಶಂಕರ್ಗೆ ಬೆಂಕಿ ತಗುಲಿದೆ.
ಲಕ್ಷ್ಮಿದೇವಿ, ಬಸವನಗೌಡ, ಅಭಿಷೇಕ್ ಬೆಂಕಿಯಿಂದ ಗಾಯಗೊಂಡಿದ್ದಾರೆ. ಬೆಂಕಿ ನಂದಿಸಲು ನೆರವಿಗೆ ಬಂದ ಪಕ್ಕದ ಮನೆಗಳ ನಿವಾಸಿಗಳಾದ ಶ್ರೀನಿವಾಸ್ ಹಾಗು ಶಿವಶಂಕರ್ಗೂ ಸುಟ್ಟ ಗಾಯಗಳಾಗಿದ್ದವು.
ಕೂಡಲೇ ಸ್ಥಳೀಯರು ಎಲ್ಲರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದರು. ಚಿಕಿತ್ಸೆ ಫಲಿಸದೆ ನಾಗರಾಜ್, ಶ್ರೀನಿವಾಸ್ ಕೊನೆಯುಸಿರೆಳೆದಿದ್ದಾರೆ. ಅಭಿಷೇಕ್, ಶಿವಶಂಕರ್, ಲಕ್ಷ್ಮೀದೇವಿ ಹಾಗೂ ಬಸವನಗೌಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.