ಪರಿಚಯಸ್ಥರ ಮಾತು ಕೇಳಿ ಬೆಂಗಳೂರಿನ ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್‌ ದೋಚಿ ಜೈಲು ಸೇರಿದ!

| Published : Sep 04 2024, 01:56 AM IST / Updated: Sep 04 2024, 05:23 AM IST

Man in Jail

ಸಾರಾಂಶ

ಪರಿಚಯಸ್ಥರ ಮಾತು ಕೇಳಿದ ಆಂಧ್ರ ಮೂಲದ ರವಿತೇಜ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್‌ ಕದ್ದು ಜೈಲು ಪಾಲಾಗಿದ್ದಾನೆ.

  ಬೆಂಗಳೂರು :  ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕನ ಸೋಗಿನಲ್ಲಿ ತೆರಳಿ ಮೊಬೈಲ್ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬ ಪರಪ್ಪನ ಅಗ್ರಹಾರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಆಂಧ್ರಪ್ರದೇಶ ಮೂಲದ ಎನ್‌.ರವಿತೇಜ ಬಂಧಿತನಾಗಿದ್ದು, ಆರೋಪಿಯಿಂದ ₹10 ಲಕ್ಷ ಮೌಲ್ಯದ 60 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಬಿಎಂಟಿಸಿ ಬಸ್‌ಗಳಲ್ಲಿ ಸರಣಿ ಮೊಬೈಲ್ ಕಳ್ಳತನ ದೂರುಗಳ ಹಿನ್ನೆಲೆಯಲ್ಲಿ ಎಚ್ಚೆತ್ತ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ತಮ್ಮ ಠಾಣಾ ಸರಹದ್ದಿನ ಬಸ್‌ ನಿಲ್ದಾಣಗಳಲ್ಲಿ ಮಫ್ತಿಯಲ್ಲಿ ಕಾರ್ಯಾಚರಣೆಗಿಳಿದರು. ಆಗ ಕೋನಪ್ಪನ ಅಗ್ರಹಾರ ಬಸ್‌ ನಿಲ್ದಾಣದಲ್ಲಿ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಶಂಕಾಸ್ಪದ ಓಡಾಡುತ್ತಿದ್ದ ರವಿತೇಜನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯವನ್ನು ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಸ್‌ಗಳಲ್ಲಿ ಸುಲಭವಾಗಿ ಕಳವು:

ಆಂಧ್ರಪ್ರದೇಶದ ರವಿತೇಜ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹೀಗಿರುವಾಗ ಆತನಿಗೆ ಬೆಂಗಳೂರಿನಲ್ಲಿ ಸುಲಭವಾಗಿ ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್ ಕಳವು ಮಾಡಿ ಹಣ ಸಂಪಾದಿಸಬಹುದು ಎಂದು ಪರಿಚಯಸ್ಥರು ಸಲಹೆ ನೀಡಿದ್ದರಂತೆ. ಈ ಮಾತು ನಂಬಿದ ರವಿತೇಜ, ನಗರಕ್ಕೆ ಬಂದು ಬಸ್‌ಗಳಲ್ಲಿ ಪ್ರಯಾಣಿಕನಂತೆ ತೆರಳಿ ಜನರಿಂದ ಮೊಬೈಲ್ ಕಳವು ಮಾಡುತ್ತಿದ್ದ. ಹೀಗೆ ಕಳವು ಮಾಡಿದ ಮೊಬೈಲ್‌ಗಳನ್ನು ಸೆಕೆಂಡ್ಸ್‌ನಲ್ಲಿ ಮಾರುತ್ತಿದ್ದ.ಅದೇ ರೀತಿ ಆ.22 ರಂದು ಮೆಜೆಸ್ಟಿಕ್‌ನಿಂದ ಅತ್ತಿಬೆಲೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಕೂಡ ರವಿತೇಜ ಕೈ ಚಳಕ ತೋರಿಸಿದ್ದ. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ಮೊಬೈಲ್ ಕಳ್ಳನ ಪತ್ತೆಗೆ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದರು. ಇದಾದ ನಂತರ ಆ.26ರಂದು ಕೋನಪ್ಪನ ಅಗ್ರಹಾರ ಬಸ್‌ ನಿಲ್ದಾಣದಲ್ಲಿ ಆತ ಕಳ್ಳತನಕ್ಕೆ ಹೊಂಚು ಹಾಕಿದ್ದಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಆರೋಪಿಗೆ ಎಲ್ಲೆಂದರಲ್ಲಿ ಅಲ್ಲೇ ಮಲಗುತ್ತಿದ್ದ. ಮೊಬೈಲ್ ಕಳ್ಳತನಕ್ಕೆ ಸಲಹೆ ನೀಡಿದವರ ಕುರಿತು ರವಿತೇಜ ಬಾಯ್ಬಿಡುತ್ತಿಲ್ಲ. ಇನ್ನು ದುಬಾರಿ ಮೊಬೈಲ್‌ಗಳ ಬಿಡಿ ಭಾಗಗಳನ್ನು ತೆಗೆದು ಆತ ಮಾರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.