ಮದರಸದಲ್ಲಿ ಅಪ್ರಾಪ್ತ ಬಾಲಕನೊಂದಿಗೆ ಸೆಕ್ಸ್‌ ಕೇಸ್‌ ರದ್ದುಗೊಳಿಸಲು ಹೈಕೊರ್ಟ್‌ ನಿರಾಕರಣೆ

| Published : Dec 13 2024, 02:00 AM IST / Updated: Dec 13 2024, 04:13 AM IST

Highcourt

ಸಾರಾಂಶ

ಅಪ್ರಾಪ್ತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದ ಮದರಸಾವೊಂದರ ಶಿಕ್ಷಕರಿಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡದಿರುವುದಕ್ಕೆ ಮದರಸಾ ಸ್ಥಾಪಕ ಟ್ರಸ್ಟಿ ವಿರುದ್ಧದ ದಾಖಲಾದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

 ಬೆಂಗಳೂರು : ಅಪ್ರಾಪ್ತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದ ಮದರಸಾವೊಂದರ ಶಿಕ್ಷಕರಿಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡದಿರುವುದಕ್ಕೆ ಮದರಸಾ ಸ್ಥಾಪಕ ಟ್ರಸ್ಟಿ ವಿರುದ್ಧದ ದಾಖಲಾದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣ ಸಂಬಂಧ ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಾಗೂ ಪ್ರಕರಣದ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ನಗರದ ಮಾಣಿಕ್ ಮಸ್ತಾನ್ ಮದರಸದ ಟ್ರಸ್ಟಿ ಮೊಹಮ್ಮದ್ ಅಮೀರ್ ರಾಜಾ (33) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಸೆಕ್ಷನ್ 21 ಪ್ರಕಾರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಡೆಸಿದ ಕುರಿತ ಮಾಹಿತಿ ಗಮನಕ್ಕೆ ಬಂದ ತಕ್ಷಣ ದೂರು ದಾಖಲಿಸಬೇಕಿರುತ್ತದೆ. ಪ್ರಕರಣದ ದೋಷಾರೋಪ ಪಟ್ಟಿಯನ್ನು ಪರಿಶೀಲಿಸಿದರೆ, ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಶಿಕ್ಷಕರ ಕೃತ್ಯ ಅತ್ಯಂತ ಭಯಾನಕವಾಗಿದೆ. ಮಾಹಿತಿಯ ಕೊರತೆಯಿರುವ ಮತ್ತು ನಿಯಂತ್ರಣ ಮಾಡದೇ ಇರುವುದರಿಂದ ಇಂತಹ ಹಲವು ಕೃತ್ಯಗಳು ಬೆಳಕಿಗೆ ಬರುವುದಿಲ್ಲ. ಸಂತ್ರಸ್ತರು ಸಹ ದೂರು ದಾಖಲಿಸುವುದಕ್ಕೆ ಮುಂದಾಗುವುದಿಲ್ಲ. ಆರೋಪಿಗಳ ಕೃತ್ಯದ ಬಗ್ಗೆ ಮಾಹಿತಿಯಿದ್ದರೂ ದೂರು ದಾಖಲಿಸದ ಅರ್ಜಿದಾರ ನಡೆ ಗಂಭೀರವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. 

ಪ್ರಕರಣವೇನು?: ಪ್ರಕರಣದ ದೂರುದಾರರ (ಸಂತ್ರಸ್ತರ ತಂದೆ) ಸುಮಾರು 11 ವರ್ಷದ ಅಪ್ರಾಪ್ತ ಬಾಲಕ ಮಾಣಿಕ್ ಮಸ್ತಾನ್ ಮದರಸದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ದಿಢೀರ್‌ ಆಗಿ ಬಾಲಕ ಮದರಸಾಗೆ ಹೋಗುವುದಕ್ಕೆ ನಿರಾಕರಿಸಿದ್ದ. ಈ ಬಗ್ಗೆ ವಿಚಾರಣೆ ನಡೆಸಿದಾಗ, ಆತನ ಮೇಲೆ ಮದರಸದ ಶಿಕ್ಷಕರಿಬ್ಬರು 2023ರ ಜೂನ್‌ಯಿಂದ ಸೆಪ್ಟಂಬರ್ ತಿಂಗಳ ನಡುವೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿರುವ ಸಂಗತಿ ಬೆಳಕಿಗೆ ಬಂದಿತ್ತು. ಇದರಿಂದ ಸಂಪಿಗೆಹಳ್ಳಿಗೆ ರಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದಲ್ಲಿ ಘಟನೆಯ ಮಾಹಿತಿಯಿದ್ದರೂ ದೂರು ದಾಖಲಿಸಿಲ್ಲ ಎಂದು ಆರೋಪ ಅರ್ಜಿದಾರರ ಮೇಲಿದೆ. ಇದರಿಂದ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ಮದರಸ ಶಿಕ್ಷಕರ ಕೃತ್ಯ ಕ್ಷಮಿಸಲಾಗುವುದಿಲ್ಲ. ಆದರೆ, ತಮಗೆ ಘಟನೆ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.

ಈ ವಾದವನ್ನು ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ಅರ್ಜಿದಾರರು ಮದರಸದ ಸಂಸ್ಥಾಪಕ ಟ್ರಸ್ಟಿ. ಅವರಿಗೆ ಮದರಸದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಿರಲಿದೆ. ಆದರೂ, ಪ್ರಕರಣ ಸಂಬಂಧ ಪೊಲೀಸರಿಗೆ ದೂರು ನೀಡಿಲ್ಲ. ಇದೇ ಕಾರಣದಿಂದ ಆರೋಪಿ ಶಿಕ್ಷಕರು ಸಂತ್ರಸ್ತ ಬಾಲಕನಿಗೆ ಪದೇ ಪದೇ ಕಿರುಕುಳ ನೀಡಿದ್ದಾರೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.