ಸಾರಾಂಶ
ಸಹೋದ್ಯೋಗಿ ಗೆಳೆಯನೊಡನೆ ಅಕ್ರಮ ಸಂಬಂಧ ಇಟ್ಟುಕೊಂಡದ್ದನ್ನು ಕಣ್ಣಾರೆ ಕಂಡ ಪತಿ ಕೆರಳಿ ಮಚ್ಚಿನಿಂದ ಆಕೆಯ ರುಂಡ ಕಡಿದು ಬೈಕ್ನಲ್ಲಿಟ್ಟುಕೊಂಡು ಪೊಲೀಸ್ ಠಾಣೆಗೆ ತಂದ
ಆನೇಕಲ್ : ಪತ್ನಿಯು ತನ್ನ ಜತೆಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಗೆಳೆಯನೊಡನೆ ಅಕ್ರಮ ಸಂಬಂಧ ಇಟ್ಟುಕೊಂಡದ್ದನ್ನು ಕಣ್ಣಾರೆ ಕಂಡ ಪತಿ ಕೆರಳಿ ಮಚ್ಚಿನಿಂದ ಆಕೆಯ ರುಂಡ ಕಡಿದು ಬೈಕ್ನಲ್ಲಿಟ್ಟುಕೊಂಡು ಪೊಲೀಸ್ ಠಾಣೆಗೆ ತಂದು ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಸೂರ್ಯನಗರ ಠಾಣಾ ವ್ಯಾಪ್ತಿಯ ಹೀಲಲಿಗೆಯಲ್ಲಿ ನಡೆದಿದೆ.
ಹೆನ್ನಾಗರ ನಿವಾಸಿ ಶಂಕರ್ (28) ಪತ್ನಿ ರುಂಡ ಕಡಿದ ಆರೋಪಿ. ಹೆಬ್ಬಗೋಡಿ ನಿವಾಸಿ ಮಾನಸ (26) ಮೃತ ಮಹಿಳೆ. ಮೃತಳ ಸಹೋದ್ಯೋಗಿ ತಮಿಳುನಾಡು ಮೂಲದ ಮುಗಿಲನ್ (24) ಪರಾರಿಯಾಗಿದ್ದಾನೆ.
ಘಟನೆ ಹಿನ್ನೆಲೆ: ಮಾನಸ ಮತ್ತು ಶಂಕರ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರಿಗೂ ಮುದ್ದಾದ ಹೆಣ್ಣು ಮಗಳಿದ್ದಾಳೆ. ಜೂ.3 ರಂದು ಕೆಲಸದ ನಿಮಿತ್ತ ಪರ ಊರಿಗೆ ತೆರಳುವುದಾಗಿ ಹೆಂಡತಿ ಮಾನಸಳಿಗೆ ತಿಳಿಸಿದ ಶಂಕರ್ ಅದೇ ದಿನ ತಡರಾತ್ರಿ ಮನೆಗೆ ವಾಪಸ್ ಆಗಿದ್ದ. ಹೆಂಡತಿ ತನ್ನ ಸಹೋದ್ಯೋಗಿ ಮುಗಿಲನ್ ಜೊತೆ ಮನೆಯಲ್ಲಿದ್ದು, ರೆಡ್ ಹ್ಯಾಂಡ್ ಆಗಿ ಸಿಕ್ಕು ಬಿದ್ದಿದ್ದಾರೆ. ಆಕ್ರೋಶಗೊಂಡ ಶಂಕರ್ ಇಬ್ಬರ ಮೇಲೂ ಹಲ್ಲೆ ನಡೆಸಿ ನೀನು ನನಗೆ ಬೇಡ. ನಿನ್ನ ಪ್ರಿಯಕರನ ಜೊತೆಗೆ ಹೋಗು ಎಂದು ಬೈದು ಕಳುಹಿಸಿದ್ದಾನೆ. ಕೆಲದಿನ ಪಿಜಿಯಲ್ಲಿದ್ದ ಮಾನಸ ಪತಿ ಮನೆಗೆ ಬಂದು ತನ್ನಿಂದ ತಪ್ಪಾಯಿತು. ಇನ್ನು ಮುಂದೆ ಹೀಗೆ ನಡೆದುಕೊಳ್ಳುವುದಿಲ್ಲ ಎಂದು ಅಂಗಲಾಚಿದ್ದಾಳೆ.
ಮಚ್ಚಿನಿಂದ ತಲೆ ಕಡಿದ:
ಈ ವೇಳೆ ಅನೈತಿಕ ಸಂಬಂಧದ ಕುರಿತು ವಿವರ ಕೇಳಿದ ಗಂಡ ಶಂಕರ್ಗೆ ಮುಗಿಲನ್ ತನ್ನ ಸಹೋದ್ಯೋಗಿ ಎಂದೂ ಬಹಳ ದಿನಗಳಿಂದ ಒಡನಾಟ ಇರುವುದಾಗಿ ತಿಳಿಸಿದ್ದಾಳೆ. ಅವಳ ಮಾತಿನಿಂದ ಆಕ್ರೋಶಗೊಂಡ ಶಂಕರ್ ಮನೆಯಲ್ಲಿದ್ದ ಮಚ್ಚಿನಿಂದ ಆಕೆಯ ತಲೆ ಕಡಿದು ದೇಹದಿಂದ ಮುಂಡವನ್ನು ಬೆರ್ಪಡಿಸಿ ಠಾಣೆಗೆ ತಂದು ಶರಣಾಗಿದ್ದಾನೆ.
ಪೊಲೀಸರು ಶಂಕರ್ನನ್ನು ವಶಕ್ಕೆ ಪಡೆದಿದ್ದು, ಘಟನಾ ಸ್ಥಳಕ್ಕೆ ಕರೆದೋಯ್ದು ಪರಿಶೀಲಿಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ವಹಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಬಾಬಾ, ಡಿವೈಎಸ್ಪಿ ಮೋಹನ್, ಇನ್ಸ್ಪೆಕ್ಟರ್ ಮಹಾಜನ್ ಭೇಟಿ ನೀಡಿದ್ದರು.