ಸಾರಾಂಶ
ಪಾಂಡವಪುರ : ಸಾಲಭಾದೆಯಿಂದ ರೈತ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಅತ್ತಿಗಾನಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಗ್ರಾಮದ ನಿವಾಸಿ ಬಿ.ಕೃಷ್ಣ (40) ಆತ್ಯಹತ್ಯೆಗೆ ಶರಣಾದ ರೈತ.
ಮೃತರಿಗೆ ಭಾವನಾ ಹಾಗೂ ಧನುಷ್ ಇಬ್ಬರು ಮಕ್ಕಳಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆಯೇ ಜಮೀನುಗಳನ್ನು ಹಂಚಿಕೆ ಮಾಡಿದ್ದು ಕೃಷ್ಣನ ಪಾಲಿಗೆ ಬಂದಿರುವ ಜಮೀನಿನ ಜತೆಗೆ ಹೆಂಡತಿಯ ತಾಯಿ ಮನೆ ಹಳೇಬಿಡು ಗ್ರಾಮದ ಸರ್ವೆ ನಂ.31/4 ರಲ್ಲಿ., ಒಂದು ಎಕರೆ ಹತ್ತು ಗುಂಟೆ ಜಮೀನನ್ನು ಕೃಷ್ಣನ ಹೆಸರಿಗೆ ಮಾಡಿಕೊಟ್ಟಿದ್ದು ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದ. ಎಲ್ಲಾ ವ್ಯವಹಾರಗಳನ್ನು ಆತನೇ ನೋಡಿಕೊಳ್ಳುತ್ತಿದ್ದನು. ಈ ಜಮೀನುಗಳಲ್ಲಿ ಬಹಳ ವರ್ಷಗಳಿಂದ ತರಕಾರಿ ಬೆಳೆ ಮತ್ತು ಇತರೆ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಈ ಮಧ್ಯೆ ಬೇಸಾಯಕ್ಕೆಂದು ಸುಂಕಾತೊಣ್ಣೂರು ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ 2.44 ಲಕ್ಷ ರು. ಸಾಲ ಪಡೆದಿದ್ದನು. ಇದಲ್ಲದೇ, ಸಂಬಂಧಿಕರು ಮತ್ತು ಸ್ನೇಹಿತರ ಬಳಿ ಕೈ ಸಾಲ ಸುಮಾರು 10 ಲಕ್ಷ ರು.ಸಾಲ ಮಾಡಿದ್ದನು.
ಜಮೀನಿನಲ್ಲಿ ಬೆಳೆದ ಬೆಳೆ ಸರಿಯಾಗಿ ಕೈ ಸೇರದೆ ಮತ್ತು ಬೆಲೆ ಸಿಗದೆ ಸಾಲ ತೀರಿಸಲು ಹೆಂಡತಿ ಮನೆಯಿಂದ ನೀಡಿದ ಆಸ್ತಿಯನ್ನು ಸಹ ನಾಲ್ಕು ವರ್ಷಗಳ ಹಿಂದೆಯೇ ಮಾರಾಟ ಮಾಡಿದ್ದನು. ಹೀಗಿದ್ದರೂ ಸಹ ಸಾಲ ತೀರಿಸಲು ಆಗಿರಲಿಲ್ಲ. ಹೀಗಾಗಿ ಭಾನುವಾರ ಬೆಳಗ್ಗೆ ಮನೆ ಶೀಟಿಗೆ ಹಾಕಿರುವ ಕಬ್ಬಿಣದ ರಾಡಿಗೆ ಕೇಬಲ್ ವೈರ್ ನಿಂದ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ. ಈ ಸಂಬಂಧ ಮೇಲುಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.