ಬೈಕ್‌ಗೆ ಹಿಂದಿನಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ : ಕೇರಳ ಮೂಲದ ಸವಾರ ಸಾವು

| Published : Dec 09 2024, 01:18 AM IST / Updated: Dec 09 2024, 05:49 AM IST

ಸಾರಾಂಶ

ಬೈಕ್‌ಗೆ ಹಿಂದಿನಿಂದ ಲಾರಿ  ಡಿಕ್ಕಿ ಹೊಡೆದ ಪರಿಣಾಮ ಸವಾರ  ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ಥಾಮಸ್‌ ಆಂಟೋನಿ(70) ಮೃತ ಸವಾರ. ಘಟನೆಯಲ್ಲಿ ಇವರ ಮೊಮ್ಮಗಳು ಸಣ್ಣ ಪ್ರಮಾಣದ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ 

 ಬೆಂಗಳೂರು :  ಬೈಕ್‌ಗೆ ಹಿಂದಿನಿಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ಥಾಮಸ್‌ ಆಂಟೋನಿ(70) ಮೃತ ಸವಾರ. ಘಟನೆಯಲ್ಲಿ ಇವರ ಮೊಮ್ಮಗಳು ಸಣ್ಣ ಪ್ರಮಾಣದ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಶನಿವಾರ ಮಧ್ಯಾಹ್ನ ಸುಮಾರು 1.30ಕ್ಕೆ ದೊಡ್ಡಮರ ರಸ್ತೆ ಶಾಲೆಯೊಂದರ ಎದುರು ಈ ಘಟನೆ ನಡೆದಿದೆ.

ಮೃತ ಸವಾರ ಥಾಮಸ್‌ ಆಂಟೋನಿ ಕೇರಳ ನಿವಾಸಿಯಾಗಿದ್ದು, ಕೆಲ ದಿನಗಳ ಹಿಂದೆ ನಗರದ ರಾಯಸಂದ್ರದಲ್ಲಿ ನೆಲೆಸಿರುವ ಮಗಳ ಮನೆಗೆ ಬಂದಿದ್ದರು. ಶನಿವಾರ ಮಧ್ಯಾಹ್ನ ಬೈಕ್‌ನಲ್ಲಿ ಮೊಮ್ಮಗಳನ್ನು ಕೂರಿಸಿಕೊಂಡು ಅಂಗಡಿಗೆ ಹೋಗಿ ವಾಪಾಸ್‌ ಮನೆಗೆ ಬರುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್‌ ಸಮೇತ ಥಾಮಸ್‌ ಹಾಗೂ ಮೊಮ್ಮಗಳು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಥಾಮಸ್‌ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ರಾತ್ರಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಮೊಮ್ಮಗಳು ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಅಪಘಾತದ ಸುದ್ದಿ ತಿಳಿದು ಸಂಚಾರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಎಸೆಗಿದ ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.