ಬಂಗಾರಿ ದಂಪತಿಯಿಂದ ಐಷಾರಾಮಿ ಕಾರು, 29 ಕೆ.ಜಿ.ಬೆಳ್ಳಿ ವಶ - ಮನೆಯಿಂದ ಚಿನ್ನಾಭರಣ ಸಾಗಿಸಿದ ಆರೋಪಿ

| Published : Jan 02 2025, 09:35 AM IST

 Aishwarya

ಸಾರಾಂಶ

ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿ ಚಿನ್ನದ ವ್ಯಾಪಾರಿಗೆ 14 ಕೋಟಿ ರು. ವಂಚಿಸಿದ ಪ್ರಕರಣ ಸಂಬಂಧ ಆರೋಪಿ ಐಶ್ವರ್ಯ ಗೌಡಳ ಮನೆಗಳ ಮೇಲೆ ಬುಧವಾರ ಪೊಲೀಸರು ದಾಳಿ ನಡೆಸಿದ್ದು, ಆರೋಪಿ ಬಳಿ ಕೋಟ್ಯಂತರ ರು. ಮೌಲ್ಯದ ಐಷರಾಮಿ ಕಾರುಗಳು ಪತ್ತೆಯಾಗಿವೆ.

ಬೆಂಗಳೂರು  : ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿ ಚಿನ್ನದ ವ್ಯಾಪಾರಿಗೆ 14 ಕೋಟಿ ರು. ವಂಚಿಸಿದ ಪ್ರಕರಣ ಸಂಬಂಧ ಆರೋಪಿ ಐಶ್ವರ್ಯ ಗೌಡಳ ಮನೆಗಳ ಮೇಲೆ ಬುಧವಾರ ಪೊಲೀಸರು ದಾಳಿ ನಡೆಸಿದ್ದು, ಆರೋಪಿ ಬಳಿ ಕೋಟ್ಯಂತರ ರು. ಮೌಲ್ಯದ ಐಷರಾಮಿ ಕಾರುಗಳು ಪತ್ತೆಯಾಗಿವೆ.

ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಭರತ್‌ ರೆಡ್ಡಿ ನೇತೃತ್ವದಲ್ಲಿ ಐಶ್ವರ್ಯ ಗೌಡ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದು, ಬಿಎಂಡಬ್ಲ್ಯು, ಆಡಿ ಕಾರುಗಳು ಹಾಗೂ 29 ಕೆ.ಜಿ. ಬೆಳ್ಳಿ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆದರೆ, ವಂಚನೆ ಕೃತ್ಯಗಳು ಬಯಲಾದ ಬೆನ್ನಲ್ಲೇ ಎಚ್ಚೆತ್ತು ತನ್ನ ಮನೆಯಿಂದ ಬಂಗಾರದ ಒಡವೆಗಳನ್ನು ಸಾಗಿಸಿದ್ದಾಳೆ. ಹೀಗಾಗಿ 150 ಗ್ರಾಂ. ಮಾತ್ರ ಚಿನ್ನದ ಆಭರಣ ಸಿಕ್ಕಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಜಿ ಸಂಸದ ಡಿ.ಕೆ,ಸುರೇಶ್ ಅವರ ಹೆಸರನ್ನು ಬಳಸಿಕೊಂಡು ಚಿನ್ನದ ವ್ಯಾಪಾರಿ ವನಿತಾ ಐತಾಳ್‌ ಅವರಿಗೆ 14 ಕೋಟಿ ರು. ಮೌಲ್ಯದ ಚಿನ್ನ ಖರೀದಿಸಿ ವಂಚಿಸಿದ ಆರೋಪದ ಮೇರೆಗೆ ಐಶ್ವರ್ಯ ಗೌಡ ದಂಪತಿಯನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು, ಆರೋಪಿ ಮನೆ ಶೋಧನೆಗೆ ನಗರದ ಎಸಿಎಂಎಂ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಹಾಗೂ ತಲಘಟ್ಟಪುರದಲ್ಲಿರುವ ಐಶ್ವರ್ಯಗೌಡಳಿಗೆ ಸೇರಿದ ಎರಡು ಮನೆಗಳ ಮೇಲೆ ಬುಧವಾರ ದಿಢೀರ್ ದಾಳಿ ನಡೆಸಿ ಪೊಲೀಸರು ತಪಾಸಣೆ ನಡೆಸಿದರು. ಆ ವೇಳೆ ಐಷರಾಮಿ ಕಾರುಗಳು ಹಾಗೂ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.