ಕಾಡುಹಂದಿ ದಾಳಿಗೆ ವ್ಯಕ್ತಿ ಬಲಿ...!

| Published : May 18 2024, 12:40 AM IST / Updated: May 18 2024, 04:44 AM IST

ಸಾರಾಂಶ

ಕಾಡು ಹಂದಿ ದಾಳಿಯಿಂದ ವ್ಯಕ್ತಿ ಸಾವನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ಚಿಕ್ಕಯಗಟಿ ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ.

 ಮಂಡ್ಯ :  ಕಾಡು ಹಂದಿ ದಾಳಿಯಿಂದ ವ್ಯಕ್ತಿ ಸಾವನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ಚಿಕ್ಕಯಗಟಿ ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ.

ತಾಲೂಕಿನ ಚಿಂದಗಿರಿದೊಡ್ಡಿ ಗ್ರಾಮದ ಪುಟ್ಟಸ್ವಾಮಿ ಪುತ್ರ ಶಿವ (48) ಸಾವನಪ್ಪಿದ ದುರ್ದೈವಿ. ಶಿವ ಚಿಕ್ಕಯಗಟಿ ಗ್ರಾಮದ ಬಳಿಯ ಮಂಡ್ಯ- ನಾಗಮಂಗಲ ರಸ್ತೆಯಲ್ಲಿ ಬೈಕ್‌ನಲ್ಲಿ ಬರುತ್ತಿದ್ದಾಗ ಏಕಾಏಕಿ ಕಾಡು ಹಂದಿ ದಾಳಿ ಮಾಡಿದೆ. ಕೆಳಕ್ಕೆ ಬಿದ್ದ ಶಿವು ಎಡ ತೊಡೆ ಮತ್ತು ಮರ್ಮಾಂಗಕ್ಕೆ ಗುದ್ದಿದ ಪರಿಣಾಮ ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ನಾಗಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು.

ಸಂಬಂಧಿಕರು, ಗ್ರಾಮಸ್ಥರ ಪ್ರತಿಭಟನೆ:

ಮರಣೋತ್ತರ ಪರೀಕ್ಷೆ ನಡೆಯುವ ಮಿಮ್ಸ್ ಶವಗಾರದ ಬಳಿ ಶುಕ್ರವಾರ ಬೆಳಗ್ಗೆ ಸೇರಿದ ಮೃತನ ಸಂಬಂಧಿಕರು ಹಾಗೂ ಚಿಂದಗಿರಿ ದೊಡ್ಡಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದರು.

ಅಲೆಮಾರಿ ಸಮುದಾಯಕ್ಕೆ ಸೇರಿದ ಮೃತ ವ್ಯಕ್ತಿ ಕುಟುಂಬಕ್ಕೆ ಬೇರೆ ಯಾವುದೇ ಆಸ್ತಿ ಇಲ್ಲ. ಕೂಲಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಮನೆ ನಿರ್ವಹಣೆ ಮಾಡುತ್ತಿದ್ದ ಶಿವು ಸಾವನಪ್ಪಿರುವುದರಿಂದ ಕುಟುಂಬ ಬೀದಿಗೆ ಬಿದ್ದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮೃತನ ಕುಟುಂಬಕ್ಕೆ 25 ಲಕ್ಷ ರು.ಪರಿಹಾರ ನೀಡಬೇಕು, ಕುಟುಂಬದ ಜೀವನ ಭದ್ರತೆಗಾಗಿ ಮೃತರ ಪುತ್ರ ಶ್ರೀನಿವಾಸ್‌ಗೆ ಕಾಯಂ ಸರ್ಕಾರಿ ಉದ್ಯೋಗ ನೀಡಬೇಕು. ಮೃತನ ಪತ್ನಿ ಅನಾರೋಗ್ಯ ಪೀಡಿತರಾಗಿದ್ದು ಮಾಸಿಕ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

15 ಲಕ್ಷ ರು. ಪರಿಹಾರದ ಭರವಸೆ:

ಸುದ್ದಿ ತಿಳಿದು ಸ್ಥಳಕ್ಕೆ ಶಾಸಕ ರವಿಕುಮಾರ್ ಭೇಟಿ ನೀಡಿ, ಪ್ರತಿಭಟನಾಕರರ ಮನವಿ ಆಲಿಸಿ ಅರಣ್ಯ ಇಲಾಖೆಯಿಂದ 15

ಲಕ್ಷ ರು. ಪರಿಹಾರವನ್ನು ಮೂರ್‍ನಾಲ್ಕು ದಿನಗಳ ನಂತರ ನೀಡಲಾಗುತ್ತದೆ. ಕಾಯಂ ಸರ್ಕಾರಿ ಉದ್ಯೋಗ ನೀಡಲು ಅವಕಾಶ ಇಲ್ಲ. ಪರಿಣಾಮ ಯಾವುದಾದರೂ ಸರ್ಕಾರಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ದೊರಕಿಸಿಕೊಡುವ ಭರವಸೆ ನೀಡಿದರು.

ಇದೇ ವೇಳೆ ಶಾಸಕರು 50 ಸಾವಿರ ರು. ಪರಿಹಾರ ನೀಡಿದ ಬಳಿಕ ಮೃತನ ಮರಣೋತ್ತರ ಪರೀಕ್ಷೆಗೆ ಅವಕಾಶ ಕಲ್ಪಿಸಲಾಯಿತು.

ಈ ವೇಳೆ ಸಹಾಯಕ ಅರಣ್ಯ ಅಧಿಕಾರಿ ಶಿವರಾಮು ಹಾಜರಿದ್ದರು. ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ಗೌರವಾಧ್ಯಕ್ಷ ರಾಮ ಶೆಟ್ಟಿ ಹನಕೆರೆ, ರಾಜ್ಯ ಉಪಾಧ್ಯಕ್ಷ ವೆಂಕಟೇಶ್ ರಾಮನಗರ, ಕೃಷ್ಣಕುಮಾರ್ ಗಣಂಗೂರು, ರವಿ ಕೊಡಗಹಳ್ಳಿ, ಟೆಂಪೋ ರಾಮಕೃಷ್ಣ, ಸಂದೀಪ್ ಕೆ.ವಿ. ನೇತೃತ್ವ ವಹಿಸಿದ್ದರು.