ಚಾರ್ಟರ್ಡ್‌ ಅಕೌಂಟೆಂಟ್‌ ಮನೆ ಕನ್ನ ಹಾಕಿದ ಕಿಡಿಗೇಡಿ ಬಂಧನ

| Published : Sep 28 2025, 02:00 AM IST

ಸಾರಾಂಶ

ಲೆಕ್ಕಪರಿಶೋಧಕರೊಬ್ಬರ ಮನೆಯಲ್ಲಿ ಚಿನ್ನ ಸೇರಿ ದುಬಾರಿ ವಸ್ತುಗಳನ್ನು ಕಳವು ಮಾಡಿದ್ದ ಕಳ್ಳನನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 1.66 ಲಕ್ಷ ರು. ಮೌಲ್ಯದ 10 ಗ್ರಾಂ ತೂಕದ ಚಿನ್ನದ ಸರ, ಹನುಮಾನ್‌ ಪೆಂಡೆಂಟ್‌ ಇರುವ ಬೆಳ್ಳಿ ಸರ, ಎರಡು ದುಬಾರಿ ವಾಚ್‌, ಹಿತ್ತಾಳೆ ದೀಪ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೆಕ್ಕಪರಿಶೋಧಕರೊಬ್ಬರ ಮನೆಯಲ್ಲಿ ಚಿನ್ನ ಸೇರಿ ದುಬಾರಿ ವಸ್ತುಗಳನ್ನು ಕಳವು ಮಾಡಿದ್ದ ಕಳ್ಳನನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 1.66 ಲಕ್ಷ ರು. ಮೌಲ್ಯದ 10 ಗ್ರಾಂ ತೂಕದ ಚಿನ್ನದ ಸರ, ಹನುಮಾನ್‌ ಪೆಂಡೆಂಟ್‌ ಇರುವ ಬೆಳ್ಳಿ ಸರ, ಎರಡು ದುಬಾರಿ ವಾಚ್‌, ಹಿತ್ತಾಳೆ ದೀಪ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಸೆ.17ರಂದು ಜೆ.ಪಿ.ನಗರ 3ನೇ ಹಂತದ ಲೆಕ್ಕಪರಿಶೋಧಕರೊಬ್ಬರ ಮನೆಯಲ್ಲಿ ದುಷ್ಕರ್ಮಿಗಳು ಕಳವು ಮಾಡಿದ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ಲೆಕ್ಕಪರಿಶೋಧಕರು ಸೆ.17ರಂದು ಬೆಳಗ್ಗೆ ಮನೆ ಬಾಗಿಲಿಗೆ ಬೀಗ ಹಾಕಿ ಬಳಿ ಬೀಗದ ಕೀ ಅನ್ನು ಕಿಟಕಿಯಲ್ಲಿಟ್ಟು ಕೆಲಸಕ್ಕೆ ತೆರಳಿದ್ದರು. ಬೆಳಗ್ಗೆ ಸುಮಾರು 11 ಗಂಟೆಗೆ ಮನೆಗೆಲಸದ ಮಹಿಳೆ ಕರೆ ಮಾಡಿದ್ದು, ಮನೆಯ ನೀರಿನ ನಲ್ಲಿಗಳು ಕಳ್ಳತನವಾಗಿವೆ ಎಂದು ತಿಳಿಸಿದ್ದಾರೆ. ಬಳಿಕ ದೂರುದಾರರು ಮನೆಗೆ ವಾಪಸ್‌ ಬಂದು ಪರಿಶೀಲಿಸಿದಾಗ ರೂಮ್‌ನ ಕಪಾಟಿನಲ್ಲಿದ್ದ ಚಿನ್ನದ ಸರ ಸೇರಿ ಕೆಲ ವಸ್ತುಗಳು ಕಳವಾಗಿರುವುದು ಕಂಡು ಬಂದಿದೆ.

ಈ ಕುರಿತು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಜಯನಗರದ ರಾಗೀಗುಡ್ಡದ ಕೊಳಗೇರಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆತನ ವಶದಲ್ಲಿದ್ದ ಚಿನ್ನದ ಸರ ಸೇರಿ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.