ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೂರೂವರೆ ವರ್ಷದ ಮಗುವಿನ ಮೇಲೆ ಮನಬಂದಂತೆ ಹಲ್ಲೆಗೈದು ಮನೆಯಲ್ಲಿ ಒಂಟಿಯಾಗಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣ ಸಂಬಂಧ ಮಗುವಿನ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವೀರಭದ್ರನಗರ ನಿವಾಸಿ ಶಾರೀನ್ ಮತ್ತು ಆಕೆಯ ಪ್ರಿಯಕರ ದಿನೇಶ್ ಬಂಧಿತ. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ನಾಗರತ್ನ ಹಾಗೂ ರಾಜೇಶ್ವರಿ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಡನಿಂದ ಪ್ರತ್ಯೇಕವಾಗಿರುವ ಶಾರೀನ್ ತನ್ನ ಮೂರುವರೆ ವರ್ಷದ ಗುಂಡು ಮಗುವಿನ ಜತೆಗೆ ವೀರಭದ್ರನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದಳು. ಈಕೆಗೆ ದಿನೇಶ್ ಎಂಬ ಬಾಯ್ಫ್ರೆಂಡ್ ಇದ್ದಾನೆ.
ಈಕೆ ಮಗುವನ್ನು ಮನೆಯಲ್ಲಿ ಒಂಟಿಯಾಗಿ ಕೂಡಿ ಹಾಕಿ ಹೊರಗೆ ಹೋಗುತ್ತಿದ್ದಳು. ಸಂಜೆ ಮನೆಗೆ ಬರುತ್ತಿದ್ದಳು. ಬಾಯ್ ಫ್ರೆಂಡ್ ಜತೆ ಸೇರಿಕೊಂಡು ಮಗುವಿಗೆ ಚಿತ್ರ ಹಿಂಸೆ ನೀಡುತ್ತಿದ್ದಳು.
ಮಗುವಿಗೆ ಕುಕ್ಕರ್ನಿಂದ ಸಹ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಮಗುವಿನ ಮರ್ಮಾಂಗ ಸೇರಿದಂತೆ ದೇಹದ ಹಲವೆಡೆ ಗಾಯದ ಗುರುತುಗಳಿವೆ.
ಇದನ್ನು ಗಮನಿಸಿದ ಸ್ಥಳೀಯರು ಮಗುವನ್ನು ರಕ್ಷಿಸಿ, ಗಿರಿನಗರ ಠಾಣೆ ಪೊಲೀಸರ ಮುಖಾಂತರ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು.
ಕಲ್ಯಾಣ ಸಮಿತಿ ಮಗುವನ್ನು ಮಾತನಾಡಿಸಿದಾಗ ತಾಯಿ ಮತ್ತು ಆಕೆಯ ಬಾಯ್ ಫ್ರೆಂಡ್ ನೀಡುತ್ತಿದ್ದ ಹಿಂಸೆಯ ಬಗ್ಗೆ ಹೇಳಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.