ಸಾರಾಂಶ
ಬೆಂಗಳೂರು : ಲಗೇಜ್ ತಪಾಸಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಸಿಟ್ಟಿಗೆದ್ದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮಹಿಳಾ ಪ್ರಯಾಣಿಕರೊಬ್ಬರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಲಹಂಕ ನಿವಾಸಿ ವ್ಯಾಸ ಹಿರಲ್ ಮೋಹನ್ ಬಾಯಿ ಬಂಧಿತರಾಗಿದ್ದು, ವಿಮಾನದಲ್ಲಿ ಸೀಟ್ ಬಳಿ ಲಗೇಜ್ ಇಡುವುದನ್ನು ಪ್ರಶ್ನಿಸಿದ್ದಕ್ಕೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಸಿಬ್ಬಂದಿ ಮೇಲೆ ಆಕೆ ಗಲಾಟೆ ಮಾಡಿದ್ದರು.
ಈ ಬಗ್ಗೆ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ವಿಮಾನದಲ್ಲಿ ವ್ಯಾಸ ಹಿರಲ್ ಮೋಹನ್ ಬಾಯಿ ಅವರು ಗುಜರಾತ್ ರಾಜ್ಯದ ಸೂರತ್ಗೆ ಮಂಗಳವಾರ ಹೊರಟಿದ್ದರು. ಆ ವೇಳೆ ವಿಮಾನದ ಬೋರ್ಡಿಂಗ್ ಆಗಿ ತಮ್ಮ ಬ್ಯಾಗೇಜ್ ಬಗ್ಗೆ ಕ್ಯಾಬಿನ್ ಕ್ರ್ಯೂರ್ ರವರು ವಿಚಾರಿಸಿದ್ದಾರೆ. ಆಗ ತನ್ನ ಬ್ಯಾಗ್ ಅನ್ನು ಸೀಟ್ ಬಳಿ ತೆಗೆದುಕೊಂಡು ಇಡುವಂತೆ ವ್ಯಾಸ ಸೂಚಿಸಿದ್ದಾರೆ. ಇದಕ್ಕೆ ವಿಮಾನ ಸಿಬ್ಬಂದಿ ಆಕ್ಷೇಪಿಸಿದ್ದಾರೆ.
ಆಗ ಮಾತಿಗೆ ಮಾತು ಬೆಳೆದು ಜೋರು ಗಲಾಟೆ ಮಾಡಿದ್ದಾರೆ. ಈ ರಂಪಾಟ ವಿಚಾರ ತಿಳಿದು ಬಂದ ಭದ್ರತಾ ಸಿಬ್ಬಂದಿ ಮೇಲೂ ವ್ಯಾಸ ಗಲಾಟೆ ಮಾಡಿದ್ದಾರೆ. ಈ ಹಂತದಲ್ಲಿ ಸಿಟ್ಟಿಗೆದ್ದು ಸಿಬ್ಬಂದಿ ಮೇಲೆ ಅವರು ಕೈ ಎತ್ತಿದ್ದಾರೆ. ಕೊನೆಗೆ ಆಕೆಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಸಿಐಎಸ್ಎಫ್ ಸಿಬ್ಬಂದಿ ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲೂ ಅವರು ಗದ್ದಲ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.