ಕೊಲೆ ಕೇಸಲ್ಲಿ ಬಿಜೆಪಿ ಶಾಸಕ ಬೈರತಿಗೆ ಪೊಲೀಸ್‌ ನೋಟಿಸ್‌

| N/A | Published : Jul 18 2025, 12:45 AM IST / Updated: Jul 18 2025, 06:49 AM IST

byrathi basavaraj

ಸಾರಾಂಶ

ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲ ಶಿವ ಕೊಲೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ, ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರಿಗೆ ಪೊಲೀಸರು ಗುರುವಾರ ನೋಟಿಸ್ ನೀಡಿದ್ದಾರೆ.

 ಬೆಂಗಳೂರು :  ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲ ಶಿವ ಕೊಲೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ, ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರಿಗೆ ಪೊಲೀಸರು ಗುರುವಾರ ನೋಟಿಸ್ ನೀಡಿದ್ದಾರೆ.

ಈ ನೋಟಿಸ್ ಬೆನ್ನಲ್ಲೇ ಶಾಸಕರಿಗೆ ಬಂಧನ ಭೀತಿ ಶುರುವಾಗಿದೆ. ಕೊಲೆ ಪ್ರಕರಣದ ತನಿಖಾಧಿಕಾರಿ ಆಗಿರುವ ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಥೋಡ್ ಅವರ ಎದುರು ಎರಡು ದಿನಗಳಲ್ಲಿ ಹಾಜರಾಗುವಂತೆ ಶಾಸಕರಿಗೆ ಪೊಲೀಸರು ಸೂಚಿಸಿದ್ದಾರೆ.

ಬೈರತಿಯಲ್ಲಿರುವ ಶಾಸಕರ ಮನೆಗೆ ಗುರುವಾರ ರಾತ್ರಿ ತೆರಳಿದ ಗೋವಿಂದಪುರ ಠಾಣೆ ಇನ್ಸ್‌ಪೆಕ್ಟರ್‌ ಗೋವಿಂದರಾಜು ನೇತೃತ್ವದ ತಂಡ, ಬೈರತಿ ಬಸವರಾಜು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಿದೆ.

ಕಿತ್ತಗನೂರು ಜಮೀನು ವಿವಾದ ಸಂಬಂಧ ಹಲಸೂರು ಕೆರೆ ಸಮೀಪ ರೌಡಿ ಶಿವಪ್ರಕಾಶ್ ಮೇಲೆ ಹಲ್ಲೆ ನಡೆಸಿ ಶಾಸಕರ ಬೆಂಬಲಿಗರು ಎನ್ನಲಾದ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗ ಹಾಗೂ ಆತನ ಸಹಚರರು ಹತ್ಯೆಗೈದಿರುವ ಆರೋಪವಿದೆ. ಈ ಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಶಾಸಕರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಇದೇ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದಾದ ಬಳಿಕ ಪ್ರಕರಣದ 5ನೇ ಆರೋಪಿ ಆಗಿರುವ ಶಾಸಕ ಬೈರತಿ ಬಸವರಾಜು ಅವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಇತ್ತ ಶಾಸಕರ ಮೇಲೆ ಆರೋಪ ಮಾಡಿದ್ದ ಮೃತನ ತಾಯಿ ಬೈರತಿ ಅವರ ವಿರುದ್ಧ ದೂರೇ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಹೀಗಿದ್ದರೂ ಹತ್ಯೆ ಪ್ರಕರಣದಲ್ಲಿ ಶಾಸಕರಿಗೆ ಸಂಕಷ್ಟ ತಪ್ಪಿಲ್ಲ.

Read more Articles on