ಅನಕ್ಷರಸ್ಥೆಗೆ ಸಹಾಯಕ ಪೋಸ್ಟ್‌ ಮಾಸ್ಟರ್‌ ಹುದ್ದೆ : 10 ಲಕ್ಷ ರು. ದೋಚಿದ ಮಗ ..!

| Published : Jan 19 2025, 02:15 AM IST / Updated: Jan 19 2025, 04:29 AM IST

ಸಾರಾಂಶ

ಅಂಚೆ ಅಧಿಕಾರಿಗಳ ಎಡವಟ್ಟಿನಿಂದ ಅನಕ್ಷರಸ್ಥೆ ಮಹಿಳೆಗೆ ಸಹಾಯಕ ಪೋಸ್ಟ್‌ ಮಾಸ್ಟರ್‌ ಹುದ್ದೆ ನೀಡಿದ್ದು, ತಾಯಿಯ ಸ್ಥಾನದಲ್ಲಿ ಕಚೇರಿಯ ಜವಾಬ್ದಾರಿ ವಹಿಸಿಕೊಂಡ ಮಗ 10 ಲಕ್ಷ ರು.ಗೂ ಹೆಚ್ಚು ಹಣವನ್ನು ವಂಚಿಸಿರುವ ಘಟನೆ ನಾಗಮಂಗಲ ತಾಲೂಕಿನ ಬಿದರಕೆರೆ ಗ್ರಾಮದ ಅಂಚೆ ಕಚೇರಿಯಲ್ಲಿ ನಡೆದಿದೆ.

 ನಾಗಮಂಗಲ : ಅಂಚೆ ಅಧಿಕಾರಿಗಳ ಎಡವಟ್ಟಿನಿಂದ ಅನಕ್ಷರಸ್ಥೆ ಮಹಿಳೆಗೆ ಸಹಾಯಕ ಪೋಸ್ಟ್‌ ಮಾಸ್ಟರ್‌ ಹುದ್ದೆ ನೀಡಿದ್ದು, ತಾಯಿಯ ಸ್ಥಾನದಲ್ಲಿ ಕಚೇರಿಯ ಜವಾಬ್ದಾರಿ ವಹಿಸಿಕೊಂಡ ಮಗ 10 ಲಕ್ಷ ರು.ಗೂ ಹೆಚ್ಚು ಹಣವನ್ನು ವಂಚಿಸಿರುವ ಘಟನೆ ತಾಲೂಕಿನ ಬಿದರಕೆರೆ ಗ್ರಾಮದ ಅಂಚೆ ಕಚೇರಿಯಲ್ಲಿ ನಡೆದಿದೆ.

ಗ್ರಾಮದ ದೊರೆಸ್ವಾಮಿ ಅಲಿಯಾಸ್‌ ರಾಜು ಹಣ ವಂಚಿಸಿ ಪರಾರಿಯಾಗಿರುವ ಆರೋಪಿಯಾಗಿದ್ದಾನೆ. ಐದನೇ ತರಗತಿ ಓದಿರುವ ಮಹಿಳೆ ಸುನಂದಮ್ಮ ಅವರಿಗೆ ಅಂಚೆ ಕಚೇರಿ ಕೆಲಸ ನಿರ್ವಹಿಸಲು ಬಾರದಿದ್ದರಿಂದ ತನ್ನ ಮಗನಿಗೆ ಅಂಚೆ ಕಚೇರಿಯ ಜವಾಬ್ದಾರಿ ವಹಿಸಿದ್ದರು. ಮಗ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಹಣವನ್ನು ಮಹಿಳಾ ಮತ್ತು ಪುರುಷ ವಯೋವೃದ್ಧರಿಗೆ ವಂಚಿಸಿ ನಾಪತ್ತೆಯಾಗಿರುವುದರಿಂದ ಹಣ ಕಳೆದುಕೊಂಡವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿದರಕೆರೆ ಗ್ರಾಮದ ಅಂಚೆ ಕಚೇರಿಯಲ್ಲಿ ಪುಟ್ಟಸ್ವಾಮಿ ಎಂಬುವರು ಮುಖ್ಯ ಪೋಸ್ಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ನಿಧನದ ನಂತರ ಐದನೇ ತರಗತಿ ಓದಿರುವ ಪತ್ನಿ ಸುನಂದಮ್ಮ ತಮ್ಮ ಪ್ರಭಾವ ಬಳಸಿ ಅನುಕಂಪದ ಆಧಾರದ ಮೇಲೆ ಸಹಾಯಕ ಪೋಸ್ಟ್ ಮಾಸ್ಟರ್ ಹುದ್ದೆಯನ್ನು ಪಡೆದಿದ್ದರು. ಓದಲು ಬರೆಯಲು ಬಾರದ ಇವರು ತನ್ನ ಮಗ ದೊರೆಸ್ವಾಮಿ ಅಲಿಯಾಸ್ ರಾಜುಗೆ ಅಂಚೆ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಬಿಟ್ಟಿದ್ದಾರೆ. ಇದನ್ನ ದುರುಪಯೋಗ ಮಾಡಿಕೊಂಡ ರಾಜು ಗ್ರಾಮಸ್ಥರಿಗೆ ಹಣ ವಂಚಿಸಿದ್ದಾನೆ.

ಬಿದರಕೆರೆ ಅಂಚೆ ಕಚೇರಿ ವ್ಯಾಪ್ತಿಗೆ ಹತ್ತಾರು ಹಳ್ಳಿಗಳು ಒಳಪಡುತ್ತವೆ. ವಂಚನೆಗೆ ಒಳಗಾದ ವೃದ್ಧ ಮಹಿಳೆಯರು ತಿಳಿಸುವಂತೆ ಆರ್.ಡಿ., ಎಫ್‌.ಡಿ., ಓ.ಎ.ಪಿ., ವಿಧವಾ ವೇತನ ಈ ಎಲ್ಲಾ ಹಣದಲ್ಲಿ ನಮಗೆ ವಂಚಿಸಲಾಗಿದೆ ಎನ್ನಲಾಗಿದೆ.

ಬಣ್ಣದ ಮಾತುಗಳಾಡುತ್ತಾ ಹಣವನ್ನು ಪಡೆದು ಪಾಸ್ ಪುಸ್ತಕ ಮತ್ತು ರಶೀದಿ ನಂತರ ಕೊಡುತ್ತೇನೆ ಎಂದು ಹೇಳಿತಿದ್ದನು. ಈಗ ನೋಡಿದರೆ ಹಣವೂ ಇಲ್ಲ, ದಾಖಲೆಯೂ ಇಲ್ಲ ಎಂದು ಕಣ್ಣೀರು ಹಾಕುತ್ತಾ ಈ ವಂಚನೆಗೆ ಮುಖ್ಯ ಅಂಚೆ ಕಚೇರಿ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಎಂದು ಹಣ ಕಳೆದುಕೊಂಡ ವಯೋವೃದ್ಧರು ಆರೋಪಿಸಿದ್ದಾರೆ.

ಹಣ ಕಳೆದುಕೊಂಡವರು:

ಬಿದರಕೆರೆ ಗ್ರಾಮದ ಮಂಜಮ್ಮ 4 ಲಕ್ಷ ರು., ಕೆಂಪಮ್ಮ 1.50 ಲಕ್ಷ ರು., ಜಯಮ್ಮ 22 ಸಾವಿರ ರು., ನಿಂಗಪ್ಪ 50 ಸಾವಿರ ರು, ಪಂಕಜ 25 ಸಾವಿರ ರು., ಲಕ್ಷ್ಮಮ್ಮ 20 ಸಾವಿರ ರು., ಶಾಂತಮ್ಮ 40 ಸಾವಿರ ರು., ವರಲಕ್ಷ್ಮಿ 14 ಸಾವಿರ ರು., ಬಸವರಾಜು 40 ಸಾವಿರ ರು., ಲೈಲಾ 10 ಸಾವಿರ ರು., ಕೆಂಪಣ್ಣ 45 ಸಾವಿರ ರು.

ಗ್ರಾಮೀಣ ಪ್ರದೇಶ ಜನರಿಗೆ ವಂಚನೆ ಆಗಿರುವುದು ಗೊತ್ತಿದ್ದರೂ ಕೂಡ ಕಣ್ಮುಚ್ಚಿ ಕುಳಿತಿರುವ ಪ್ರಧಾನ ಅಂಚೆ ಕಚೇರಿಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ವಯೋವೃದ್ಧರಿಗೆ ಹಣದ ವಹಿವಾಟು ನಡೆಸಲು ಹಳ್ಳಿಗಳಲ್ಲಿರುವ ಅಂಚೆ ಕಚೇರಿಗಳು ಆಧಾರ ಸ್ಥಂಭವಿದ್ದಂತೆ. ಸುರಕ್ಷತೆ ಮತ್ತು ಭದ್ರತೆಯ ನಂಬಿಕೆ ಮೇಲೆ ವಯೋವೃದ್ಧರು ಅಂಚೆ ಕಚೇರಿಯನ್ನು ಅವಲಂಬಿಸಿರುತ್ತಾರೆ. ಇಂತಹ ಮುಗ್ಧ ಜನರಿಗೆ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಹಣ ವಂಚಿಸಿರುವುದು ಆಘಾತ ಉಂಟುಮಾಡಿದೆ. ಗ್ರಾಮೀಣ ಪ್ರದೇಶದ ಅಂಚೆ ಕಚೇರಿಗಳು ಜನರ ನಂಬಿಕೆ ಕಳೆದುಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.