ನ್ಯಾಯಾಲಯದ ಆದೇಶ ಉಲ್ಲಂಘಿಸಿ ವಿವಾದಿತ ಜಮೀನಿಗೆ ಅತಿಕ್ರಮ ಪ್ರವೇಶ : ನಟ ಮಯೂರ್‌ ಪಟೇಲ್‌ ವಿರುದ್ಧ ಕೇಸ್‌

| Published : Oct 20 2024, 01:53 AM IST / Updated: Oct 20 2024, 04:44 AM IST

Mayur Patel

ಸಾರಾಂಶ

ವಿವಾದಿತ ಆಸ್ತಿಗೆ ಕೋರ್ಟ್ ಆದೇಶ ಮೀರಿ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ನಟ ಮಯೂರ್‌ ಪಟೇಲ್‌ ವಿರುದ್ಧ ದೂರು ದಾಖಲಾಗಿದೆ.

 ಬೆಂಗಳೂರು : ನ್ಯಾಯಾಲಯದ ಆದೇಶ ಉಲ್ಲಂಘಿಸಿ ವಿವಾದಿತ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್‌ ಉರುಳಿಸಿ ಅಕ್ರಮವಾಗಿ ಶೆಡ್‌ ನಿರ್ಮಿಸಿದ ಆರೋಪದಡಿ ನಟ ಮಯೂರ್‌ ಪಟೇಲ್‌ ಸೇರಿ ಇತರರ ವಿರುದ್ಧ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಚ್‌ಎಸ್‌ಆರ್‌ ಲೇಔಟ್‌ನ ಸೋಮಸುಂದ್ರಪಾಳ್ಯ ನಿವಾಸಿ ಶಾಲಿನಿ ಎಂಬುವವರು ನೀಡಿದ ದೂರಿನ ಮೇರೆಗೆ ನಟ ಮಯೂರ್‌ ಪಟೇಲ್‌, ಎನ್‌.ಆರ್‌.ಭಟ್ಟ, ಸುಬ್ರಹ್ಮಣ್ಯಂ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನ ವಿವರ:

ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿ ಹರಳಕುಂಟೆ ಗ್ರಾಮದ ಸರ್ವೆ ನಂಬರ್‌ 55/10ರಲ್ಲಿ 14 ಗುಂಟೆ ಜಮೀನು ನೋಂದಾಯಿತ ದಾನಪತ್ರದ ಮೂಲಕ ತನ್ನ ಪತಿ ಮಂಜುನಾಥ ರೆಡ್ಡಿಗೆ ಬಂದಿದೆ. ಈ ಜಮೀನಿನಲ್ಲಿ ಕಾಂಪೌಂಡ್‌ ಮತ್ತು ಖಾಲಿ ಜಾಗವಿದೆ. ಈ ಜಾಗದ ವಿಚಾರವಾಗಿ ಮಯೂರ್‌ ಪಟೇಲ್‌ ಮತ್ತು ಎನ್‌.ಆರ್‌.ಭಟ್ಟ ವಿರುದ್ಧ ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ನ್ಯಾಯಾಲಯವು ಸ್ವತ್ತಿನ ಯಥಾಸ್ಥಿತಿ ಕಾಯ್ದುಕೊಂಡು ಸ್ವಾಧೀನಕ್ಕೆ ತೊಂದರೆ ನೀಡದಂತೆ ಆದೇಶಿಸಿದೆ.

ಆದರೆ, ಆರೋಪಿಗಳು ನ್ಯಾಯಾಲಯದ ಆದೇಶ ಉಲ್ಲಂಘಿಸಿ, ಅ.18ರಂದು ಬೆಳಗ್ಗೆ ಸುಮಾರು 75 ಮಂದಿ ಅಪರಿಚಿತರೊಂದಿಗೆ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಜೆಸಿಬಿ ಮೂಲಕ ಕಾಂಪೌಂಡ್‌ ಉರುಳಿಸಿ, ಖಾಲಿ ಜಾಗದಲ್ಲಿ ಶೆಡ್‌ ನಿರ್ಮಿಸಿದ್ದಾರೆ. ಈ ಮೂಲಕ ಸುಮಾರು ₹10 ಲಕ್ಷ ನಷ್ಟವುಂಟು ಮಾಡಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಲಿನಿ ದೂರಿನಲ್ಲಿ ಮನವಿ ಮಾಡಿದ್ದಾರೆ.