ಕನ್ನಡಪ್ರಭ ವಾರ್ತೆ ಬೆಂಗಳೂರು
ಹಗಲು ಹೊತ್ತಿನಲ್ಲೇ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ರ ಪಿಡೋ ಕ್ಯಾಬ್ ಚಾಲಕನೊಬ್ಬನನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ರಾಮಮೂರ್ತಿ ನಗರದ ನಿವಾಸಿ ನಾಗರಾಜ್ ಬಂಧಿತನಾಗಿದ್ದು, ಆರೋಪಿಯಿಂದ 240 ಗ್ರಾಂ ಚಿನ್ನಾಭರಣ, 89 ಗ್ರಾಂ ಬೆಳ್ಳಿ ಹಾಗೂ ಬೈಕ್ ಸೇರಿದಂತೆ 35 ಲಕ್ಷ ರು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಜಯನಗರದ ಟಿ ಬ್ಲಾಕ್ ನಲ್ಲಿ ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ದೂರು ದಾಖಲಾಯಿತು. ಈ ಬಗ್ಗೆ ತನಿಖೆಗಿಳಿದ ಇನ್ಸ್ಪೆಕ್ಟರ್ ವಿಶ್ವನಾಥ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದೆ.
ಮಂಡ್ಯ ಜಿಲ್ಲೆ ಹೊಸಹಳ್ಳಿ ಗ್ರಾಮದ ನಾಗರಾಜ್ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ನಗರದಲ್ಲಿ ರ್ಯಾಪಿಡೋ ಕ್ಯಾಬ್ ಚಾಲಕನಾಗಿ ಆತ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹಣ ಸಂಪಾದನೆಗೆ ಆತ ದಾರಿ ತಪ್ಪಿದ್ದಾನೆ. ಈತನ ವಿರುದ್ಧ ರಾಮಮೂರ್ತಿ ನಗರ ಸೇರಿದಂತೆ ಇತರೆ ಪ್ರಕರಣಗಳು ದಾಖಲಾಗಿವೆ. ಹಗಲು ಹೊತ್ತಿನಲ್ಲಿ ಮನೆಗಳ್ಳತನ ಕೃತ್ಯಕ್ಕೆ ನಾಗರಾಜ್ ಕುಖ್ಯಾತನಾಗಿದ್ದ. ಮನೆ ಮುಂದಿನ ಗೇಟ್ ಅನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಹೋಗಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಆತ ಕಳ್ಳತನ ಕೃತ್ಯ ಎಸಗುತ್ತಿದ್ದ.ಅಂತೆಯೇ ಕಳೆದ ತಿಂಗಳು ಜಯನಗರದ 4ನೇ ಹಂತದಲ್ಲಿ ವಾಸವಾಗಿರುವ ದೂರುದಾರರು, ಮನೆ ಬಾಗಿಲನ್ನು ಚೀಲ ಹಾಕಿ ಗೇಟ್ ಬಂದ್ ಮಾಡಿಕೊಂಡು ದಿನಸಿ ಖರೀದಿಗೆ ತೆರಳಿದ್ದರು. ಆಗ ಅವರ ಮನೆಯೊಳಗೆ ನುಗ್ಗಿ ಚಿನ್ನಾಭರಣ ದೋಚಿ ಆರೋಪಿ ಪರಾರಿಯಾಗಿದ್ದ. ಕೆಲ ಹೊತ್ತಿನ ತರುವಾಯ ದಿನಸಿ ಖರೀದಿಸಿ ದೂರುದಾರರು ಮರಳಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೇಯಸಿ ಜತೆ ಲಿವಿಂಗ್ ಇನ್ ಟುಗೆದರ್!
ತನ್ನ ಪ್ರೇಯಸಿ ಜತೆ ಸಹಜೀವನವನ್ನು (ಲಿವಿಂಗ್ ಇನ್ ಟುಗೆದರ್) ಮಂಡ್ಯದ ನಾಗರಾಜ್ ನಡೆಸುತ್ತಿದ್ದ. ಕಳ್ಳತನ ಕೃತ್ಯದಲ್ಲಿ ಸಂಪಾದಿಸಿದ ಹಣದಲ್ಲಿ ಆತ ಮೋಜು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.ಮುಖ್ಯಾಂಶಗಳು
-ಬಂಧಿತ ಚಾಲಕನಿಂದ ₹ 35 ಲಕ್ಷದ 240 ಗ್ರಾಂ ಚಿನ್ನ, 89 ಗ್ರಾಂ ಬೆಳ್ಳಿ, ಬೈಕ್ ವಶ- ಮಂಡ್ಯ ಜಿಲ್ಲೆ ಮೂಲದವಾನ ಆರೋಪಿ ನಾಗರಾಜ್ ನಗರದಲ್ಲಿ ರ್ಯಾಪಿಡೋ ಕ್ಯಾಬ್ ಚಾಲಕನಾಗಿದ್ದ
- ಸುಲಭವಾಗಿ ಹಣ ಗಳಿಸಿ ಮೋಜು ಮಾಡಲು ಹಗಲು ಹೊತ್ತಿನಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ- ಮನೆ ಮುಂದಿನ ಗೇಟ್ ಅನ್ನು ಹೊರಗಿನಿಂದ ಲಾಕ್ ಮಾಡಿರುವ ಮನೆಗಳೇ ಈತನಿಗೆ ಟಾರ್ಗೆಟ್