ಸಾರಾಂಶ
ಪೀಣ್ಯ ದಾಸರಹಳ್ಳಿ : ವಿವಾಹಿತ ಶಿಕ್ಷಕಿಯೊಬ್ಬರು ಸಂಬಂಧ ಬೆಳೆಸಿ ಕೈಕೊಟ್ಟ ಕಾರಣ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಕಳಿ ಗ್ರಾಮದಲ್ಲಿ ನಡೆದಿದೆ.
ಮಾಕಳಿಯಲ್ಲಿ ಟ್ಯೂಷನ್ ಸೆಂಟರ್ ನಡೆಸುತ್ತಿದ್ದ ಆನಂದ (35) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ. ವಿವಾಹಿತ ಶಿಕ್ಷಕಿ ಹೇಮಲತಾ ವಿರುದ್ಧ ಮೃತ ಶಿಕ್ಷಕನ ಕುಟುಂಬಸ್ಥರು ದೂರು ನೀಡಿದ್ದು, ಶಿಕ್ಷಕಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಶಿಕ್ಷಕರಾದ ಆನಂದ ಮತ್ತು ಹೆಮಲತಾ ಇಬ್ಬರು ಕಳೆದ 8 ವರ್ಷದಿಂದ ಅಕ್ರಮ ಸಂಬಂಧದಲ್ಲಿದ್ದು, ಇಬ್ಬರೂ ಸೇರಿ ಮಾಕಳಿಯಲ್ಲಿ ಟ್ಯೂಷನ್ ಸೆಂಟರ್ ಆರಂಭಿಸಿದ್ದರು. ಆದರೆ, ಇತ್ತೀಚೆಗೆ ಹೇಮಲತಾ ಮತ್ತೊಬ್ಬನ ಜೊತೆಗೆ ಹೆಚ್ಚಿನ ಒಡನಾಟ ಹೊಂದಿದ್ದರಿಂದ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಆನಂದ ಟ್ಯೂಷನ್ ಸೆಂಟರ್ ಹಣದ ಜತೆಗೆ ತನ್ನ ಮನೆಯಿಂದಲೂ ಸುಮಾರು ₹5 ಲಕ್ಷ ನೀಡಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ಹೇಮಲತಾ ತನ್ನ ಪತಿ ತಿಮ್ಮಯ್ಯಗೆ ವಿಷಯ ತಿಳಿಸಿ ಬೆದರಿಕೆ ಹಾಕಿದ್ದರು. ಇದರಿಂದಾಗಿ ಆನಂದ ಟ್ಯೂಷನ್ ಸೆಂಟರ್ನಲ್ಲಿಯೇ ಪ್ಯಾನ್ಗೆ ನೇಣು ಬಿಗಿದುಕೊಂಡಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ವಾಟ್ಸಪ್ ಸ್ಟೇಟಸ್ನಲ್ಲಿ ಆರೋಪ:
ಆನಂದ ಆತ್ಮಹತ್ಯೆಗೂ ಮೊದಲು ಬರೆದ ಡೆತ್ ನೋಟ್, ವಾಟ್ಸಪ್ ಸ್ಟೇಟಸ್ನಲ್ಲಿ ಹೇಮಲತಾ ಕಿರುಕುಳದ ಬಗ್ಗೆ ಮಾಹಿತಿ ಹಾಕಿದ್ದಾನೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ. ಈ ಘಟನೆ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 108ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.