ರನ್ಯಾದು ರಾಜ್ಯದ 2ನೇ ಅತಿದೊಡ್ಡ ಚಿನ್ನ ಸ್ಮಗ್ಲಿಂಗ್‌ ಕೇಸ್‌! ಸ್ಮಗ್ಲಿಂಗ್ ಹಣ ಆಮೇಲೇನಾಗುತ್ತೆ ?

| N/A | Published : Mar 16 2025, 10:03 AM IST

Kannada Actress Ranya Rao Smuggling Gold

ಸಾರಾಂಶ

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೂ ಮುನ್ನ ದುಬೈಗೆ ತೆರಳಿದ್ದ ನಟಿ ರನ್ಯಾರಾವ್‌ ಅವರ ಪಿಕಪ್ ಆ್ಯಂಡ್ ಡ್ರಾಪ್‌ಗೆ ವಿಮಾನ ನಿಲ್ದಾಣಕ್ಕೆ ಅವರ ಪತಿ ಹಾಗೂ ವಾಸ್ತು ಶಿಲ್ಪಿ ಜತಿನ್‌ ಹುಕ್ಕೇರಿ ಅವರ ಕಾರು ಚಾಲಕ ಬಂದಿದ್ದ.

ಗಿರೀಶ್‌ ಮಾದೇನಹಳ್ಳಿ

 ಬೆಂಗಳೂರು : ಮೂವತ್ತೇಳು ವರ್ಷಗಳ ಹಿಂದೆ ದುಬೈನಿಂದ ಕಳ್ಳ ಮಾರ್ಗದಲ್ಲಿ ಬರೋಬ್ಬರಿ ಮೂರು ಕ್ವಿಂಟಲ್‌ ಚಿನ್ನವನ್ನು (2740 ಬಿಸ್ಕತ್‌ಗಳು) ಹಡಗಿನಲ್ಲಿ ಸಾಗಿಸುವಾಗ ಮಂಗಳೂರು ಸಮೀಪ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ದಾಳಿ ನಡೆಸಿ ಜಪ್ತಿ ಮಾಡಿದ್ದು ರಾಜ್ಯದ ಇತಿಹಾಸದಲ್ಲೇ ‘ಅತಿ ದೊಡ್ಡ ಚಿನ್ನದ ಬೇಟೆ’ ಎಂದು ದಾಖಲಾಗಿದೆ.

ಈಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುವಾಗ ಡಿಜಿಪಿ ರಾಮಚಂದ್ರರಾವ್‌ ಅವರ ಮಲಮಗಳು ಹಾಗೂ ನಟಿ ರನ್ಯಾರಾವ್‌ ಅವರಿಂದ ಜಪ್ತಿಯಾದ 14.02 ಕೆ.ಜಿ. ಚಿನ್ನ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಡಿಆರ್‌ಐನ 2ನೇ ದೊಡ್ಡ ಕಾರ್ಯಾಚರಣೆಯಾಗಿ ಚರಿತ್ರೆ ಬರೆದಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

1988ರ ಏಪ್ರಿಲ್‌ನಲ್ಲಿ ಮಂಗಳೂರು ಬಳಿಯ ಗಂಗೊಳ್ಳಿ ಸಮೀಪದ ಬಂದರಿನಲ್ಲಿ ನಡೆದಿದ್ದ ಡಿಆರ್‌ಐ ಕಾರ್ಯಾಚರಣೆ ಆಗಿನ ಕಾಲಕ್ಕೆ ದೇಶ ವ್ಯಾಪಿ ಗಮನಸೆಳೆದಿತ್ತು. ಈಗಲೂ ಡಿಆರ್‌ಐ ಇತಿಹಾಸದಲ್ಲಿ ಅದು ‘ಗಂಗೊಳ್ಳಿ ಪ್ರಕರಣ’ ಎಂದೇ ಪ್ರಸಿದ್ಧವಾಗಿದೆ. ಆ ಚಿನ್ನ ಕಳ್ಳ ಸಾಗಣೆ ಜಾಲದಲ್ಲಿ ಭೂಗತ ಜಗತ್ತಿನ ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂನ ‘ಡಿ ಗ್ಯಾಂಗ್‌’ ಸಕ್ರಿಯವಾಗಿತ್ತು. ವಿಶೇಷವೆಂದರೆ ಅಂದು ಈ ಬೃಹತ್ ಕಳ್ಳ ಸಾಗಣೆ ಜಾಲವನ್ನು ಗಾಂಧಿವಾದಿ ಹಾಗೂ ನಿವೃತ್ತ ನ್ಯಾಯಾಧೀಶ ದಿ.ನಿಟ್ಟೂರು ಶ್ರೀನಿವಾಸ್ ರಾವ್‌ ಅವರ ಅಳಿಯ ಹಾಗೂ ಕನ್ನಡಿಗ ಐಆರ್‌ಎಸ್ ಅಧಿಕಾರಿ ಮನೋಹರ್‌ ಭೇದಿಸಿದ್ದರು ಎಂದು ನಿವೃತ್ತ ಹಿರಿಯ ಡಿಆರ್‌ಐ ಅಧಿಕಾರಿ ನಂಜುಂಡಸ್ವಾಮಿ ನೆನಪಿಸಿಕೊಳ್ಳುತ್ತಾರೆ.

ಗಂಗೊಳ್ಳಿ ಕಾರ್ಯಾಚರಣೆ ಹೇಗಿತ್ತು?:

ಹಿಂದಿನಿಂದಲೂ ವಿದೇಶದಿಂದ ಕಳ್ಳ ಮಾರ್ಗದಲ್ಲಿ ದೇಶಕ್ಕೆ ಭಾರೀ ಪ್ರಮಾಣದಲ್ಲಿ ಚಿನ್ನ ತರಲಾಗುತ್ತಿದೆ. ಈ ಕಳ್ಳ ಸಾಗಣೆ ಜಾಲದ ಮೇಲೆ ಡಿಆರ್‌ಐ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಕಣ್ಗಾವಲಿಟ್ಟು ಆಗಾಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾಜ್ಯದ ಮಟ್ಟಿಗೆ 1988ರ ಗಂಗೊಳ್ಳಿ ಹಾಗೂ ಈಗಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಟಿ ರನ್ಯಾರಾವ್ ಬಂಧನ ಪ್ರಕರಣಗಳು ಡಿಆರ್‌ಐ ಇತಿಹಾಸದಲ್ಲೇ ಬೃಹತ್‌ ಕಾರ್ಯಾಚರಣೆಗಳಾಗಿವೆ ಎಂದು ನಂಜುಂಡಸ್ವಾಮಿ ಹೇಳಿದ್ದಾರೆ.

1988ರ ಏಪ್ರಿಲ್‌ ತಿಂಗಳಲ್ಲಿ ಮಂಗಳೂರಿನ ಕರಾವಳಿ ಡಿಆರ್‌ಐ ಪಡೆಯ ಕನ್ನಡಿಗ ಐಆರ್‌ಎಸ್ ಅಧಿಕಾರಿ ಮನೋಹರ್‌ ಅವರಿಗೆ ದುಬೈ ಮೂಲಕ ಕೋಟ್ಯಂತರ ರುಪಾಯಿ ಮೌಲ್ಯದ ಕ್ವಿಂಟಲ್‌ಗಟ್ಟಲೇ ಚಿನ್ನ ಕಳ್ಳ ಸಾಗಣೆ ಆಗುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಸುಳಿವು ತಿಳಿದ ಕೂಡಲೇ ಜಾಗೃತರಾದ ಅವರು, ತಕ್ಷಣ ಕಡಲಿನಲ್ಲಿ ಪಹರೆ ಹೆಚ್ಚಿಸಿ ಸ್ಮಗ್ಲರ್ಸ್‌ಗಳ ಮೇಲೆ ಕಣ್ಗಾವಲಿಟ್ಟಿದ್ದರು.

ಆಗ ಮಂಗಳೂರು ಬಂದರು ಸಮೀಪದ ಗಂಗೊಳ್ಳಿ ಬಳಿಯ ಕಡಲತೀರದಲ್ಲಿ ಗುಡಿಸಲು ಹಾಕಿಕೊಂಡು ಸ್ಮಗ್ಲರ್ಸ್‌ಗಳು ಚಿನ್ನ ಸ್ವೀಕರಿಸಲು ಸಿದ್ದರಾಗಿದ್ದರು. ಮಂಗಳೂರು ಬಂದರಿಗೆ ಹೋಗುವಾಗ ಗಂಗೊಳ್ಳಿ ಬಳಿ ಹಡಗು ಲಂಗರು ಹಾಕಿದ ತಕ್ಷಣವೇ ಲ್ಯಾಂಟರ್ನ್‌ ತೋರಿಸಿ ಸಿಗ್ನಲ್ ಕೊಡುತ್ತಿದ್ದರು. ಈ ಸೂಚನೆ ಪಡೆದು ಹಡಗಿನಿಂದ ಚಿನ್ನ ಇಳಿಸಲಾಗುತ್ತಿತ್ತು. ಆಗ ಗಂಗೊಳ್ಳಿ ಬಳಿ ಮನೋಹರ್‌ ತಂಡ ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿ ದೆಹಲಿ ಮೂಲದ ಶ್ಯಾಮ್ ಖನ್ನಾ ಹಾಗೂ ಆತನ ಏಳು ಮಂದಿ ಸಹಚರರನ್ನು ಬಂಧಿಸಿತ್ತು. ಈ ವೇಳೆ ಸುಮಾರು 3 ಕ್ವಿಂಟಲ್ ತೂಕದ 2,740 ಚಿನ್ನದ ಬಿಸ್ಕತ್ತುಗಳು ಜಪ್ತಿಯಾದವು.

ವಾರದಲ್ಲೇ 400 ಕೆ.ಜಿ. ಚಿನ್ನ ಪತ್ತೆ:

ಗಂಗೊಳ್ಳಿ ಬಳಿಕ ಪಾತಕಿ ದಾವೂದ್ ಸಹಚರರು ಕಾರಿನಲ್ಲಿ ಚಿನ್ನ ಸಾಗಿಸುವಾಗ ಮಂಗಳೂರು ಬಳಿಯೂ ಸಿಕ್ಕಿಬಿದ್ದಿದ್ದರು. ಎರಡು ಕಾರುಗಳಲ್ಲಿ ತಲಾ 800 ಚಿನ್ನದ ಬಿಸ್ಕೆತ್‌ಗಳಂತೆ ಒಟ್ಟು 1,600 ಬಿಸ್ಕೆತ್‌ಗಳು ಅವರಿಂದ ಪತ್ತೆಯಾಗಿದ್ದವು. ಹೀಗೆ ಒಂದು ವಾರದ ಅಂತರದಲ್ಲಿ ಡಿಆರ್‌ಐ ಅಂದು ಸುಮಾರು 400 ಕೆ.ಜಿ.ಯ 4 ಸಾವಿರ ಚಿನ್ನದ ಬಿಸ್ಕತ್‌ಗಳನ್ನು ಚಿನ್ನ ಕಳ್ಳ ಸಾಗಣೆದಾರರಿಂದ ಜಪ್ತಿ ಮಾಡಿತ್ತು. ಗಂಗೊಳ್ಳಿ ಪ್ರಕರಣದ 8 ಮಂದಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯೂ ಆಯಿತು. ಈಗ ವಿಮಾನ ನಿಲ್ದಾಣ ಸ್ಥಾಪನೆಯಾದ ಬಳಿಕ ವಿದೇಶದಿಂದ ವಿಮಾನಗಳಲ್ಲಿ ಚಿನ್ನ ಸಾಗಣೆ ಹೆಚ್ಚಾಗಿದೆ ಎಂದು ನಂಜುಂಡಸ್ವಾಮಿ ಮಾಹಿತಿ ನೀಡಿದ್ದಾರೆ.

ಚಿನ್ನ ಸ್ಮಗ್ಲಿಂಗ್‌ನಿಂದ ಬಂದ ಹಣ ಡ್ರಗ್ಸ್ ಖರೀದಿಗೆ ಬಳಕೆ

ಚಿನ್ನ ಕಳ್ಳ ಸಾಗಣೆಯಿಂದ ಸಂಪಾದಿಸಿದ ಹಣ ಡ್ರಗ್ಸ್ ಖರೀದಿಗೆ ಬಳಕೆಯಾಗುತ್ತದೆ. ಇದೊಂದು ದೇಶದ ಅರ್ಥ ವ್ಯವಸ್ಥೆಗೆ ಮಾರಕವಾದ ಅಪರಾಧ ಕೃತ್ಯ. ಡ್ರಗ್ಸ್-ಚಿನ್ನ ಸ್ಮಗ್ಲಿಂಗ್‌ಗಳ ನಡುವೆ ಹಣಕಾಸಿನ ನಂಟಿದೆ.

-ನಂಜುಂಡಸ್ವಾಮಿ, ನಿವೃತ್ತ ಹಿರಿಯ ಅಧಿಕಾರಿ

ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೂ ಮುನ್ನ ದುಬೈಗೆ ತೆರಳಿದ್ದ ನಟಿ ರನ್ಯಾರಾವ್‌ ಅವರ ಪಿಕಪ್ ಆ್ಯಂಡ್ ಡ್ರಾಪ್‌ಗೆ ವಿಮಾನ ನಿಲ್ದಾಣಕ್ಕೆ ಅವರ ಪತಿ ಹಾಗೂ ವಾಸ್ತು ಶಿಲ್ಪಿ ಜತಿನ್‌ ಹುಕ್ಕೇರಿ ಅವರ ಕಾರು ಚಾಲಕ ಬಂದಿದ್ದ. ರನ್ಯಾ ಬಂಧನದ ಮಾಹಿತಿ ತಿಳಿಯದೆ ರಾತ್ರಿ 11.30ರವರೆಗೆ ಪಾರ್ಕಿಂಗ್‌ನಲ್ಲಿ ಕಾದು ಮರಳಿದ್ದ ಎಂದು ತಿಳಿದು ಬಂದಿದೆ.

15 ಬಾರಿ ಕಪಾಳಕ್ಕೆ ಬಾರಿಸಿದರು: ರನ್ಯಾ

ಬೆಂಗಳೂರು: ‘ನನ್ನ ಕಪಾಳಕ್ಕೆ 10-15 ಬಾರಿ ಹೊಡೆದು ಡಿಆರ್‌ಐ ಅಧಿಕಾರಿಗಳು ದಾಖಲೆಗಳಿಗೆ ಸಹಿ ಮಾಡುವಂತೆ ಹಿಂಸಿಸಿದರು. ನಾವು ಹೇಳಿದಂತೆ ಸಹಿ ಮಾಡದೆ ಹೋದರೆ ನಿಮ್ಮ ತಂದೆ (ಡಿಜಿಪಿ ರಾಮಚಂದ್ರರಾವ್‌)ಯನ್ನು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ಖಾಲಿ ಪತ್ರಗಳಿಗೂ ಸಹಿ ಪಡೆದರು’ ಎಂದು ನಟಿ ರನ್ಯಾರಾವ್ ಗಂಭೀರ ಆರೋಪ ಮಾಡಿದ್ದಾರೆ.