ಸಾರಾಂಶ
ಬೆಂಗಳೂರು : ಇತ್ತೀಚೆಗೆ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿದ್ದ ಸಾಫ್ಟ್ವೇರ್ ಎಂಜಿನಿಯರ್ ವಿಪಿನ್ ಗುಪ್ತಾ(34)ಅವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಉತ್ತರಪ್ರದೇಶದ ನೋಯ್ಡಾದಲ್ಲಿ ಪತ್ತೆಹಚ್ಚಿ ನಗರಕ್ಕೆ ಕರೆತಂದಿದ್ದಾರೆ.
ಅಶ್ಚರ್ಯ ಸಂಗತಿ ಎಂದರೆ, ನನಗೆ ಪತ್ನಿ ಜತೆಗೆ ಸಂಸಾರ ಮಾಡಲು ಆಗುವುದಿಲ್ಲ. ನಾನು ಮನೆಗೆ ಹೋಗುವುದಿಲ್ಲ. ಜೈಲಿಗೆ ಕಳುಹಿಸಿ ಎಂದು ವಿಪಿನ್ ಗುಪ್ತಾ ಪೊಲೀಸರ ಎದುರು ಮನವಿ ಮಾಡಿದ್ದಾರೆ.
ಸ್ವಇಚ್ಛೆಯಿಂದ ನಾನು ಮನೆ ಬಿಟ್ಟು ಹೋಗಿದ್ದಾಗಿ ವಿಪಿನ್ ಗುಪ್ತಾ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಪತ್ನಿ ಶ್ರೀಪರ್ಣಾ ನನ್ನನ್ನು ಎರಡನೇ ಮದುವೆಯಾಗಿದ್ದು, ಮಾನಸಿಕ ಹಿಂಸೆ ನೀಡುತ್ತಿದ್ದಾಳೆ. ನನ್ನ ಮೇಲೆ ನಿಗಾ ವಹಿಸಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳಡಿಸಿದ್ದಾಳೆ. ಈಕೆಯ ವರ್ತನೆಯಿಂದ ಮಾನಸಿಕವಾಗಿ ಸಾಕಷ್ಟು ನೊಂದಿದ್ದೇನೆ. ಹೀಗಾಗಿ ನಾನು ಮತ್ತೆ ಆಕೆಯ ಜತೆಗೆ ಸಂಸಾರ ಮಾಡುವುದಿಲ್ಲ. ನನ್ನನ್ನು ಜೈಲಿಗೆ ಕಳುಹಿಸಿ ಎಂದು ವಿಪಿನ್ ಗುಪ್ತಾ ಪೊಲೀಸರ ಬಳಿ ಅಂಗಲಾಚಿದ್ದಾರೆ.
ನಿಯಮದ ಪ್ರಕಾರ ಪೊಲೀಸರು ವಿಪಿನ್ ಗುಪ್ತಾನಿಂದ ಹೇಳಿಕೆ ಪಡೆದು ನಾಪತ್ತೆ ಪ್ರಕರಣ ಇತ್ಯರ್ಥಪಡಿಸಿದ್ದಾರೆ. ವಿಪಿನ್ ವಯಸ್ಕನಾಗಿರುವುದರಿಂದ ಆತ ಎಲ್ಲಿಗೆ ಹೋಗಬೇಕು ಎನ್ನುವುದು ಆತನೇ ನಿರ್ಧರಿಸಬೇಕು. ಕೌಟುಂಬಿಕ ವಿಚಾರವನ್ನು ಅವರೇ ಬಗೆಹರಿಸಿಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ:
ಲಕ್ನೋ ಮೂಲದ ವಿಪಿನ್ ಗುಪ್ತಾ, ಪತ್ನಿ ಶ್ರೀಪರ್ಣಾ ಹಾಗೂ ಇಬ್ಬರು ಪುತ್ರಿಯರ ಜತೆಗೆ ನಗರದ ಟಾಟಾನಗರದ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ವಿಪಿನ್ ಗುಪ್ತಾ ಕಳೆದ ಜೂನ್ ತಿಂಗಳಲ್ಲಿ ಉದ್ಯೋಗ ತೊರೆದಿದ್ದರು. ಹೊಸ ಉದ್ಯೋಗಕ್ಕಾಗಿ ಹುಡುಕಾಟದಲ್ಲಿ ತೊಡಗಿದ್ದರು.
ಆ.4ರಂದು ಮಧ್ಯಾಹ್ನ 12.42ಕ್ಕೆ ಮನೆಯಿಂದ ದ್ವಿಚಕ್ರ ವಾಹನ ತೆಗೆದುಕೊಂಡು ಹೊರಗೆ ಹೋಗಿದ್ದರು. ಇದಾದ 25 ನಿಮಿಷಕ್ಕೆ ಖಾತೆಯಿಂದ ₹1.80 ಲಕ್ಷ ಡ್ರಾ ಮಾಡಿದ್ದಾರೆ. ಬಳಿಕ ಕರೆ ಮಾಡಿದರೆ ಮೊಬೈಲ್ ಸ್ವಿಚ್ಡ್ ಆಫ್ ಬಂದಿದೆ. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಹೀಗಾಗಿ ತಮ್ಮ ಪತಿಯನ್ನು ಹುಡುಕಿ ಕೊಡಿ ಎಂದು ಶ್ರೀಪರ್ಣಾ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಪಿನ್ ಗುಪ್ತಾ ಪತ್ತೆಗೆ ತನಿಖೆ ಕೈಗೊಂಡಿದ್ದರು.
2ನೇ ಬಾರಿ ಹುಡುಕಿಕರೆತಂದ ಪೊಲೀಸರು
ಟೆಕ್ಕಿ ವಿಪಿನ್ ಗುಪ್ತಾ ಅವರು ಎಂಟು ತಿಂಗಳ ಹಿಂದೆ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ಒಂಟಿಯಾಗಿ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಬಳಿಕ ಪತ್ನಿ ನೀಡಿದ ದೂರಿನ ಮೇರೆಗೆ ಕೊಡಿಗೇಹಳ್ಳಿ ಠಾಣೆ ಪೊಲೀಸರು ಗೋವಾದಲ್ಲಿ ವಿಪಿನ್ನನ್ನು ಪತ್ತೆಹಚ್ಚಿ ನಗರಕ್ಕೆ ಕರೆತಂದು ಕುಟುಂಬಕ್ಕೆ ಒಪ್ಪಿಸಿದ್ದರು. ಇದೀಗ ಆ.4ರಂದು ಮತ್ತೆ ವಿಪಿನ್ ನಾಪತ್ತೆಯಾಗಿದ್ದರು. ಇದೀಗ ಮತ್ತೆ ಪೊಲೀಸರು ಹುಡುಕಿ ಕರೆತಂದಿದ್ದಾರೆ.
ತಿರುಪತಿಯಲ್ಲಿ ಮುಡಿ ಕೊಟ್ಟ ವಿಪಿನ್!
ಆ.4ರಂದು ನಗರದಿಂದ ತಿರುಪತಿ ಬಸ್ ಏರಿ ಹೊರಟ್ಟಿದ್ದ ವಿಪಿನ್ ಬಳಿಕ ತಿರುಪತಿಯಲ್ಲಿ ಮುಡಿ ಕೊಟ್ಟು ಅಲ್ಲಿಂದ ಬಸ್ನಲ್ಲೇ ವಿಶಾಖಪಟ್ಟಣ, ಒಡಿಶಾ, ಕೋಲ್ಕತ್ತಕ್ಕೆ ಪ್ರಯಾಣ ಬೆಳೆಸಿ ಬಳಿಕ ಉತ್ತರಪ್ರದೇಶದ ನೋಯ್ಡಾದಲ್ಲಿ ತಂಗಿದ್ದರು. ಮತ್ತೊಂದೆಡೆ ವಿಪಿನ್ ಜಾಡು ಹಿಡಿದ ಕೊಡಿಗೇಹಳ್ಳಿ ಠಾಣೆ ಪೊಲೀಸರು, ನೋಯ್ಡಾಗೆ ತೆರಳಿ ವಿಪಿನ್ನನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ನಗರಕ್ಕೆ ಕರೆತಂದಿದ್ದಾರೆ.