ದೇವಸ್ಥಾನಗಳಲ್ಲಿ ಕಳ್ಳತನ: ಆರೋಪಿ ಬಂಧನ, ಆಭರಣಗಳು ವಶ

| Published : Jan 10 2025, 12:45 AM IST

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಸಂತೇಚಾಚಳ್ಳಿ ಹೋಬಳಿಯ ಆಘಲಯ ಗ್ರಾಮದ ಪ್ರದೀಪ್ (35) ಬಂಧಿತ ಆರೋಪಿ. ಕಳ್ಳತನವಾಗಿದ್ದ ದೇವರ ಆಭರಣಗಳು ಹಾಗೂ ಪೂಜಾ ಸಾಮಗ್ರಿಗಳಾದ 3 ಹಿತ್ತಾಳೆ, 3 ಮಂಟಪಗಳು, 18 ಬಿರಡೆಗಳು, 3 ಛತ್ರಿಗಳು, ಒಂದು ರಥದ ಕಳಸವನ್ನು ವಶಕ್ಕೆ ಪಡೆಯಲಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಎರಡು ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಸಂತೇಚಾಚಳ್ಳಿ ಹೋಬಳಿಯ ಆಘಲಯ ಗ್ರಾಮದ ಪ್ರದೀಪ್ (35) ಬಂಧಿತ ಆರೋಪಿ. ಕಳ್ಳತನವಾಗಿದ್ದ ದೇವರ ಆಭರಣಗಳು ಹಾಗೂ ಪೂಜಾ ಸಾಮಗ್ರಿಗಳಾದ 3 ಹಿತ್ತಾಳೆ, 3 ಮಂಟಪಗಳು, 18 ಬಿರಡೆಗಳು, 3 ಛತ್ರಿಗಳು, ಒಂದು ರಥದ ಕಳಸವನ್ನು ವಶಕ್ಕೆ ಪಡೆಯಲಾಗಿದೆ.

ಜ.3ರಂದು ಪಟ್ಟಣದ ಕನಕಪುರ ರಸ್ತೆ ಪೇಟೆ ಮಂಚನಹಳ್ಳಿ ಮೂಗದೇವಮ್ಮ ದೇವಸ್ಥಾನದಲ್ಲಿ ಬೆಳ್ಳಿಯ ವಿವಿಧ ಸಾಮಗ್ರಿಗಳು ಹಾಗೂ ಹಿತ್ತಾಳೆಯ ಆಚರಣಗಳು ಕಳ್ಳತನವಾಗಿತ್ತು. ಜೊತೆಗೆ ಗೌಡಗೆರೆ ಗ್ರಾಮದ ಮುಖಂಡರು ತಮ್ಮ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಪರಿಶೀಲಿಸಿದ್ದಾಗ ಬೀರುವಿನಲ್ಲಿದ್ದ ದೇವಸ್ಥಾನದ ದೇವರ ಆಭರಣಗಳು ಹಾಗೂ ಪೂಜಾ ಸಾಮಗ್ರಿಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಗ್ರಾಮಾಂತರ ಪೊಲೀಸರು ಡಿವೈಎಸ್ಪಿ ವಿ.ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಸಿಪಿಐ ಬಿ.ಜಿ.ಮಹೇಶ್, ಪಿಎಸ್‌ಐ ಶ್ರವಣ ದಾಸರಡ್ಡಿ, ಸಿಬ್ಬಂದಿ ಮಣಿಕಂಠಸ್ವಾಮಿ, ಶಿವಕುಮಾರ್, ನಾಗೇಂದ್ರ, ಪರಮಾನಂದ, ಕೌಶಿಕ್, ಬಾನಪ್ಪ ರಾಥೋಡ್, ರವಿಕುಮಾರ, ಲೋಕೇಶ್ ಅವರ ತಂಡ ಆರೋಪಿಯನ್ನು ಬಂಧಿಸಿ 1.65 ಲಕ್ಷ ರು.ನಗದು ಸೇರಿದಂತೆ 5.5 ಲಕ್ಷ ರು.ಮೌಲ್ಯದ ದೇವಸ್ಥಾನದ ಆಭರಣ ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಗೌಡಗೆರೆ ಗ್ರಾಮದ ಅತ್ತೆ ಮನೆಯಲ್ಲಿ ವಾಸವಿದ್ದ ಆರೋಪಿ ಪ್ರದೀಪ್. ಮಾವ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದ ಅರ್ಚಕರಾಗಿದ್ದರು. ಕಳೆದ ಕೆಲ ವರ್ಷಗಳಿಂದ ಹಿಂದೆ ಮಾವ ಮೃತಪಟ್ಟ ನಂತರ ಪ್ರದೀಪ್ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಸದರಿಯಂತೆ ಆರೋಪಿ ಕೆಲ ತಿಂಗಳ ಹಿಂದೆ ಅರ್ಚಕ ಕೆಲಸ ಮಾಡಿ ಸ್ವಗ್ರಾಮ ಆಘಲಯ ಗ್ರಾಮಕ್ಕೆ ತೆರಳಿದ್ದನು ಎನ್ನಲಾಗಿದೆ. ಸಂಶಯಗೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದಾಗ ಈತನೆ 3 ಹಿತ್ತಾಳೆ, 3 ಮಂಟಪಗಳು, 18 ಬಿರಡೆಗಳು, 3 ಛತ್ರಿಗಳು, ಒಂದು ರಥದ ಕಳಸ ಮಾಡಿದ್ದನು. ಆರೋಪಿಯು ದೇವರ ಉತ್ಸವ ಸಂದರ್ಭದಲ್ಲಿ ಮಾತ್ರ ಹೊರಗೆ ತೆಗೆಯುತ್ತಿದ್ದ ವೇಳೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತನಿಖಾ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಭಿನಂದಿಸಿ ಪ್ರಶಂಶಿಸಿದ್ದಾರೆ.