ಮೂವರು ಕಳ್ಳರ ಬಂಧಿಸಿ 27 ಲಕ್ಷದ ಚಿನ್ನ, ಬೈಕ್‌ ಜಪ್ತಿ

| Published : Feb 26 2025, 01:34 AM IST

ಸಾರಾಂಶ

ನಗರದಲ್ಲಿ ವಾಹನ ಕಳ್ಳತನದಲ್ಲಿ ತೊಡಗಿದ್ದ ಮೂವರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ವಾಹನ ಕಳ್ಳತನದಲ್ಲಿ ತೊಡಗಿದ್ದ ಮೂವರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರದ ಶ್ರೀನಿವಾಸ್‌ ಅಲಿಯಾಸ್ ಕರಾಟೆ ಸೀನ, ಆಂದ್ರಹಳ್ಳಿಯ ವೆಂಕಟೇಶ್ ಅಲಿಯಾಸ್ ವೆಂಕಟ್‌ ಹಾಗೂ ಸಾಗರ್ ಬಂಧಿತರಾಗಿದ್ದು, ಆರೋಪಿಗಳಿಂದ 16 ಬೈಕ್‌ಗಳು ಹಾಗೂ 70 ಗ್ರಾಂ ಚಿನ್ನಾಭರಣ ಸೇರಿದಂತೆ ₹26 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕಾಳಸ್ತಿನಗರದಲ್ಲಿ ಬೈಕ್ ಕಳ್ಳತನವಾಗಿದ್ದವು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಮೂವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೀನ, ವೆಂಕಟ್ ಹಾಗೂ ಸಾಗರ್ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ನಗರದ ವಿವಿಧ ಠಾಣೆಗಳಲ್ಲಿ ಅವರ ಮೇಲೆ ಪ್ರಕರಣಗಳು ದಾಖಲಾಗಿವೆ. ವಾಹನ ಕಳ್ಳತನಕ್ಕೆ ಈ ಮೂವರು ಕುಖ್ಯಾತಿ ಪಡೆದಿದ್ದಾರೆ. ಹಲವು ಬಾರಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮುದ್ದೆ ಊಟ ಸವಿದು ಬಂದಿದ್ದಾರೆ. ಹೀಗಿದ್ದರೂ ಪಾಠ ಕಲಿಯದೆ ಮತ್ತೆ ಕಳ್ಳತನಕ್ಕಳಿದು ಮೂವರು ಜೈಲು ಪಾಲಾಗಿದ್ದಾರೆ.

ಮನೆ ಮುಂದೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲುತ್ತಿದ್ದ ವಾಹನ ಹ್ಯಾಂಡಲ್ ಬ್ರೇಕ್ ಮಾಡಿ ಕಳವು ಮಾಡುತ್ತಿದ್ದರು. ಬಳಿಕ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಆರೋಪಿಗಳು ಮೋಜು ಮಸ್ತಿ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.