ಸಾರಿಗೆ ಬಸ್ ಡಿಕ್ಕಿ: ಬೈಕ್ ಸವಾರ ಸಾವು, ಹಿಂಬದಿ ಸವಾರನ ಕಾಲು ಮುರಿತ

| Published : Jun 09 2025, 12:02 AM IST / Updated: Jun 09 2025, 12:03 AM IST

ಸಾರಾಂಶ

ಬೈಕ್‌ ಹಿಂದಿಕ್ಕಲು ಹೋಗಿ ಸಾರಿಗೆ ಬಸ್ ಡಿಕ್ಕಿಯಾಗಿ ಚಕ್ರ ಸವಾರನ ತಲೆ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರನಿಗೆ ಕಾಲು ಮುರಿದಿರುವ ಶ್ರೀರಂಗಪಟ್ಟಣ ಪಟ್ಟದ ಚೆಕ್ ಪೋಸ್ಟ್ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯ ಶ್ರೀಸಾಯಿ ಆಶ್ರಮದ ಸೇತುವೆ ಬಳಿ ನಡೆದಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬೈಕ್‌ ಹಿಂದಿಕ್ಕಲು ಹೋಗಿ ಸಾರಿಗೆ ಬಸ್ ಡಿಕ್ಕಿಯಾಗಿ ಚಕ್ರ ಸವಾರನ ತಲೆ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರನಿಗೆ ಕಾಲು ಮುರಿದಿರುವ ಘಟನೆ ಪಟ್ಟದ ಚೆಕ್ ಪೋಸ್ಟ್ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯ ಶ್ರೀಸಾಯಿ ಆಶ್ರಮದ ಸೇತುವೆ ಬಳಿ ನಡೆದಿದೆ.

ಮೃತ ವ್ಯಕ್ತಿ ಮತ್ತು ಗಾಯಾಳು ಕಲ್ಕತ್ತಾ ಮೂಲದ ನಿವಾಸಿಗಳಾಗಿದ್ದು, ಮೈಸೂರು ಮಂಡಿ ಪೊಲೀಸ್ ಠಾಣೆ ಬಳಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ವ-ವಿವರಗಳ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರು ಕಡೆಯಿಂದ ಬರುತ್ತಿದ್ದ ಸಾರಿಗೆ ಬಸ್ ಬೈಕ್ ಹಿಂದಿಕ್ಕಲು ಹೋಗಿ ಡಿಕ್ಕಿ ಹೊಡೆದಿದೆ. ನಂತರ ಬಸ್ಸಿನ ಚಕ್ರ ಬೈಕ್ ಸವಾರನ ತಲೆ ಮೇಲೆ ಬಸ್ ಚಕ್ರ ಹರಿದು ಸವಾರ ಮೃತಪಟ್ಟಿದ್ದಾನೆ. ಬೈಕ್ ಹಿಂಬದಿ ಸವಾರನಿಗೆ ಕಾಲು ಮುರಿದು ಗಂಭೀರವಾಗಿ ಗಾಯಗೊಂಡಿದ್ದಾನೆ. ನಂತರ ಚಾಲಕ ಸಾರಿಗೆ ಬಸ್ ನಿಲ್ಲಿಸದೆ ಪರಾರಿಯಾಗಿದ್ದಾನೆ.

ಅದೇ ರಸ್ತೆ ಮಾರ್ಗದಲ್ಲಿ ಮೈಸೂರಿನಿಂದ- ಬೆಂಗಳೂರಿಗೆ ತೆರಳಲು ಬರುತ್ತಿದ್ದ ಕೃಷಿ ಹಾಗೂ ಮಂಡ್ಯ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸ್ಥಳಕ್ಕೆ ಆಗಮಿಸಿ ಭೀಕರ ಅಪಘಾತ ಕಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬರುವಂತೆ ಸೂಚನೆ ನೀಡಿದ್ದಾರೆ. ನಂತರ ಪೊಲೀಸರ ಸಹಾಯದಿಂದ ಅಂಬ್ಯುಲೆನ್ಸ್‌ ಮೂಲಕ ಗಾಯಾಳು ಮತ್ತು ಮೃತ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಸ್ಥಳಕ್ಕೆ ಪಟ್ಟಣ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಡಿಕ್ಕಿ ಹೊಡೆದು ಪರಾರಿಯಾಗಿರುವ ಬಸ್‌ನ ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಭೀಕರ ಅಪಘಾತದಿಂದಾಗಿ ಸ್ಥಳದಲ್ಲಿ ಕೆಲಕಾಲ ವಾಹನಗಳು ಜಮಾವಣೆಗೊಂಡಿದ್ದರಿಂದ ಪೊಲೀಸರು ಪರ್ಯಾಯ ಮಾರ್ಗವಾಗಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.