ಪರಿಚಿತರ ಅಪ್ರಾಪ್ತರ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿ ಬಳಿಕ ಆ ಕೃತ್ಯದ ವಿಡಿಯೋವನ್ನು ಚಿತ್ರೀಕರಿಸಿ ಆನ್‌ಲೈನ್‌ಗೆ ಅಪ್‌ಲೋಡ್ ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು : ಪರಿಚಿತರ ಅಪ್ರಾಪ್ತರ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿ ಬಳಿಕ ಆ ಕೃತ್ಯದ ವಿಡಿಯೋವನ್ನು ಚಿತ್ರೀಕರಿಸಿ ಆನ್‌ಲೈನ್‌ಗೆ ಅಪ್‌ಲೋಡ್ ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಗ್ಗಲಿಪುರದ ಕೈದಳ್ಳಿ ಪಾಳ್ಯದ ಕಿರಣ್ ಕುಮಾರ್ ಹಾಗೂ ಚನ್ನಪಟ್ಟಣ ತಾಲೂಕು ಸೀಬನಹಳ್ಳಿಯ ಎಂ.ಕೆ.ಆದಿತ್ಯ ಬಂಧಿತರಾಗಿದ್ದು, ಆರೋಪಿಗಳಿಂದ ಮೊಬೈಲ್ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಎನ್‌ಸಿಆರ್‌ಪಿ ಪೋರ್ಟಲ್‌ನ ಟಿಫ್‌ಲೈನ್ ಮೂಲಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ದೃಶ್ಯಾವಳಿ (ಸಿಎಸ್‌ಎಎಂ) ಕುರಿತು ಸಿಐಡಿಗೆ ಮಾಹಿತಿ ಬಂದಿತ್ತು. ಈ ಸುಳಿವು ಆಧರಿಸಿ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಕೆ.ವಸಂತ್ ಕುಮಾರ್ ತಂಡ ಕಿಡಿಗೇಡಿಗಳನ್ನು ಬಂಧಿಸಿದೆ.

ಪರಿಚಿತರ ಸೋಗಿನಲ್ಲಿ ಕಿರುಕುಳ:

ಚಿತ್ರದುರ್ಗ ಜಿಲ್ಲೆ ಯಮ್ಮನಗಟ್ಟಿ ಗ್ರಾಮದ ಕಿರಣ್ ಕುಮಾರ್ ಕುರಿಗಾಯಿ ಆಗಿದ್ದು, ತನ್ನ 50 ಕುರಿಗಳ ಮೇಯಿಸಲು ಕಗ್ಗಲಿಪುರಕ್ಕೆ ಆತ ಬಂದಿದ್ದ. ಇನ್ನು ಕನಕಪುರ ರಸ್ತೆಯ ರೆಸಾರ್ಟ್‌ನಲ್ಲಿ ಆದಿತ್ಯ ಈಜುಕೊಳ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ. ಆರೋಪಿಗಳಿಬ್ಬರು ಸೋದರ ಸಂಬಂಧಿಗಳಾಗಿದ್ದಾರೆ. ಕುರಿ ಮೇಯಿಸುವಾಗ ಆತನಿಗೆ ಸಂತ್ರಸ್ತೆಯರ ಕುಟುಂಬದವರ ಸ್ನೇಹವಾಗಿದೆ. ಈ ಪರಿಚಯದ ನೆಪದಲ್ಲಿ 13 ಹಾಗೂ 15 ವರ್ಷ ಬಾಲಕಿಯರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕವಾಗಿ ಶೋಷಣೆ ಮಾಡಿದ್ದರು ಎಂದು ಮೂಲಗಳು ತಿಳಸಿವೆ.

ಗೂಗಲ್‌ನಲ್ಲಿ ಆಪ್‌ಲೋಡ್ :

ತಾವು ಅಪ್ರಾಪ್ತ ಬಾಲಕಿಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಕೃತ್ಯವನ್ನು ಮೊಬೈಲ್‌ನಲ್ಲಿ ಕಿರಣ್ ಹಾಗೂ ಆದಿತ್ಯ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಮೊಬೈಲ್‌ನ ಫೊಲ್ಡರ್‌ನಲ್ಲಿದ್ದ ಆ ವಿಡಿಯೋಗಳು ಗೂಗಲ್‌ ಅಪ್‌ಲೋಡ್ ಆಗಿವೆ. ತಕ್ಷಣವೇ ಆನ್‌ಲೈನಲ್ಲಿ ಆ ಆಶ್ಲೀಲ ವಿಡಿಯೋಗಳು ಹರಿದಾಡಿವೆ. ಈ ಬಗ್ಗೆ ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ವರದಿಯಾಗಿದೆ. ಆ ವಿಡಿಯೋಗಳನ್ನು ಪರಿಶೀಲಿಸಿದಾಗ ಕಗ್ಗಲಿಪುರ ಸರಹದ್ದಿನಲ್ಲಿ ನಡೆದಿರುವುದು ಗೊತ್ತಾಗಿದೆ. ಕೂಡಲೇ ಸಂತ್ರಸ್ತೆಯರ ಕುಟುಂಬದವರನ್ನು ಪೊಲೀಸರು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ಈ ಕೃತ್ಯ ಎಸಗಿದ ಬಳಿಕ ಅಲ್ಲೇ ಇದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪರೂಪದ ಪ್ರಕರಣ: ಡಿಜಿಪಿ ಸೈಬರ್ ಕಮಾಂಡ್

ಸಾಮಾನ್ಯವಾಗಿ ಸಿಎಸ್‌ಎಎಂ ಪ್ರಕರಣಗಳಲ್ಲಿ ಇಂಟರ್‌ನೆಟ್ ಅಥವಾ ಇತರೆ ಮೂಲಗಳಿಂದ ಮಕ್ಕಳ ಲೈಂಗಿಕ ದೌರ್ಜನ್ಯ ದೃಶ್ಯಾವಳಿಯನ್ನು ಡೌನ್‌ ಲೋಡ್‌ ಮಾಡಿ ಸಂಗ್ರಹಿಸಿಟ್ಟಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಿದ್ದರು. ಆದರೆ ಈ ಪ್ರಕರಣದಲ್ಲಿ ತಾವೇ ಆಶ್ಲೀಲ ವಿಡಿಯೋ ಸೃಷ್ಟಿಸಿ ಇಂಟರ್‌ನೆಟ್‌ಗೆ ಆಪ್‌ಲೋಡ್ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ಅಪರೂಪದ ಕೆಲವೇ ಪ್ರಕರಣಗಳಲ್ಲೊಂದಾಗಿದೆ ಎಂದು ಸೈಬರ್ ಕಮಾಂಡ್ ಹಾಗೂ ಡಿಜಿಪಿ ಡಾ.ಪ್ರಣವ ಮೊಹಂತಿ ತಿಳಿಸಿದ್ದಾರೆ.