ಸಾರಾಂಶ
ಸೂಳೆಕೆರೆ ಬೀಳು ನೀರಿನ ಹೆಬ್ಬಾಳ ಸೇತುವೆ ಬಳಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಹೂಳಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ಕ್ಯಾತಘಟ್ಟ ಸಮೀಪ ಶನಿವಾರ ಸಂಜೆ ಜರುಗಿದೆ. ಮದ್ದುರು ತಾಲೂಕಿನ ಆಲಬೂಜನಹಳ್ಳಿ ಪರಿಶಿಷ್ಟ ಜಾತಿ ಕಾಲೋನಿಯ ಸಿದ್ದರಾಜು ಪುತ್ರ ಎ.ಎಸ್.ಚೇತನ್ (16) ಹಾಗೂ ತಾಳೆಹಳ್ಳಿ ಸ್ವಾಮಿ ಪುತ್ರ ದರ್ಶನ್ (19) ಮೃತಪಟ್ಟ ದುರ್ದೈವಿಗಳು.
ಕನ್ನಡಪ್ರಭ ವಾರ್ತೆ ಮದ್ದೂರು/ಕೆ.ಎಂ.ದೊಡ್ಡಿ
ಸೂಳೆಕೆರೆ ಬೀಳು ನೀರಿನ ಹೆಬ್ಬಾಳ ಸೇತುವೆ ಬಳಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಹೂಳಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ಕ್ಯಾತಘಟ್ಟ ಸಮೀಪ ಶನಿವಾರ ಸಂಜೆ ಜರುಗಿದೆ.ತಾಲೂಕಿನ ಆಲಬೂಜನಹಳ್ಳಿ ಪರಿಶಿಷ್ಟ ಜಾತಿ ಕಾಲೋನಿಯ ಸಿದ್ದರಾಜು ಪುತ್ರ ಎ.ಎಸ್.ಚೇತನ್ (16) ಹಾಗೂ ತಾಳೆಹಳ್ಳಿ ಸ್ವಾಮಿ ಪುತ್ರ ದರ್ಶನ್ (19) ಮೃತಪಟ್ಟ ದುರ್ದೈವಿಗಳು.
ಚೇತನ್ ಮದ್ದೂರು ತಾಲೂಕು ಭಾರತಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರೆ, ದರ್ಶನ್ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದನು. ಇಬ್ಬರು ವಿದ್ಯಾರ್ಥಿಗಳು ತನ್ನ ಮತ್ತೋರ್ವ ಸ್ನೇಹಿತನೊಂದಿಗೆ ಸೂಳೆಕೆರೆ ಬೀಳು ನೀರಿನ ಹೆಬ್ಬಳ ಸೇತುವೆ ಹತ್ತಿರ ಶನಿವಾರ ಮಧ್ಯಾಹ್ನ ಈಜಲು ಹೋಗಿದ್ದಾರೆ. ಈ ವೇಳೆ ನೀರಿನ ಹೂಳಿನಲ್ಲಿ ಸಿಲುಕಿ ಸ್ಥಳದಲ್ಲೇ ಅಸುನೀಗಿದ್ದಾರೆ.ಚೇತನ್ ಮತ್ತು ದರ್ಶನ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಹೆದರಿದ ಸ್ನೇಹಿತ ಸ್ಥಳದಿಂದ ಪಲಾಯನ ಮಾಡಿದ್ದಾನೆ. ವಿಷಯ ತಿಳಿದು ಮದ್ದೂರಿನಿಂದ ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಗ್ರಾಮಸ್ಥರೇ ಶವಗಳನ್ನು ಹೊರ ತೆಗೆದಿದ್ದಾರೆ. ನಂತರ ಕೆ.ಎಂ.ದೊಡ್ಡಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತ ಇಬ್ಬರು ಬಾಲಕರ ಪೋಷಕರು ದೂರು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಶಾಸಕ ಡಿ.ಸಿ.ತಮ್ಮಣ್ಣ ಸಾಂತ್ವನ:ನೀರಿನಲ್ಲಿ ಮುಳುಗಿ ಮೃತಪಟ್ಟ ಬಾಲಕರ ಕುಟುಂಬಕ್ಕೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸಾಂತ್ವನ ಹೇಳಿದರು.
ಭಾನುವಾರ ಬೆಳಗ್ಗೆ ಆಲಭುಜನಹಳ್ಳಿಯ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಚಿವರು ಮೃತ ಬಾಲಕರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಚೇತನ್ ತಂದೆ ಸಿದ್ದರಾಜು ಹಾಗೂ ತಾಳೆ ಹಳ್ಳಿಯ ದರ್ಶನ್ ತಂದೆ ಸ್ವಾಮಿ ಮತ್ತು ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.