ದರ್ಶನ್‌ಗೆ ಜಾಮೀನು ಸಿಗುತ್ತಾ? : ಇಂದು ಮಧ್ಯಾಹ್ನ 7 ಆರೋಪಿಗಳ ತೀರ್ಪು ಹೈಕೋರ್ಟ್‌ನಿಂದ ಪ್ರಕಟ

| Published : Dec 13 2024, 11:32 AM IST

Actor Darshan

ಸಾರಾಂಶ

ಚಿತ್ರುದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಮತ್ತು ನಟಿ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗಳ ತೀರ್ಪನ್ನು ಹೈಕೋರ್ಟ್‌ ಶುಕ್ರವಾರ ಪ್ರಕಟಿಸಲಿದೆ.

ಬೆಂಗಳೂರು : ಚಿತ್ರುದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಮತ್ತು ನಟಿ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗಳ ತೀರ್ಪನ್ನು ಹೈಕೋರ್ಟ್‌ ಶುಕ್ರವಾರ ಪ್ರಕಟಿಸಲಿದೆ.

ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್‌, ಆತನ ಗೆಳತಿ ಪವಿತ್ರಾ ಗೌಡ, ಮ್ಯಾನೇಜರ್‌ ಆರ್‌.ನಾಗರಾಜು, ದರ್ಶನ್‌ ಕಾರು ಚಾಲಕ ಎಂ.ಲಕ್ಷ್ಮಣ್‌, ಆಪ್ತರಾದ ಅನುಕುಮಾರ್‌, ಜಗದೀಶ್‌ ಮತ್ತು ಪ್ರದೋಷ್‌ ರಾವ್‌ ಅವರ ಜಾಮೀನು ಅರ್ಜಿಗಳ ಅರ್ಜಿಗಳ ವಿಚಾರಣೆಯನ್ನು ಸೋಮವಾರ (ಡಿ.9ರಂದು) ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಪೀಠ, ಶುಕ್ರವಾರ ಮಧ್ಯಾಹ್ನ 2.30ಕ್ಕೆ ತೀರ್ಪು ಪ್ರಕಟಿಸಲಿದೆ.

ಇದರಿಂದ ದರ್ಶನ್‌ಗೆ ಜೈಲೋ ಮತ್ತು ಬೈಲೋ ಎಂಬುದು ಶುಕ್ರವಾರ ಮಧ್ಯಾಹ್ನ ನಿರ್ಧಾರವಾಗಲಿದೆ.

ದರ್ಶನ್‌ ಹಾಗೂ ಇತರೆ ಅರ್ಜಿದಾರರಿಗೆ ಜಾಮೀನು ನಿರಾಕರಿಸಿ ಕಳೆದ ಅ.14ರಂದು ನಗರದ 57ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಎಲ್ಲಾ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಮಧ್ಯೆ ಬೆನ್ನುಹುರಿ ಸಮಸ್ಯೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ದರ್ಶನ್‌ಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿ ಹೈಕೊರ್ಟ್‌ ಅ.30ರಂದು ಆದೇಶಿಸಿತ್ತು. ದರ್ಶನ್‌ ಆಸ್ಪತ್ರೆಗೆ ದಾಖಲಾಗಿದ್ದು, ಡಿ.11ರಂದು (ಬುಧವಾರ) ದರ್ಶನ್‌ಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ ಎಂಬುದಾಗಿ ಅವರ ಪರ ವಕೀಲರು ಡಿ.9ರಂದು ಕೋರ್ಟ್‌ಗೆ ತಿಳಿಸಿದ್ದರು. ಅಂದೇ ಜಾಮೀನುಗಳ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸುವವರೆಗೆ ಮಧ್ಯಂತರ ಜಾಮೀನನ್ನು ನ್ಯಾಯಾಲಯವು ವಿಸ್ತರಿಸಿತ್ತು. ಶುಕ್ರವಾರ ಜಾಮೀನು ಅರ್ಜಿಗಳ ತೀರ್ಪು ಪ್ರಕಟವಾಗಲಿದೆ.

ಒಂದೊಮ್ಮೆ ದರ್ಶನ್‌ ಜಾಮೀನು ಅರ್ಜಿ ವಜಾಗೊಂಡರೆ, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ. ಜಾಮೀನು ದೊರೆತರೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮನೆಗೆ ಹೋಗಬಹುದು.