ಬೈಕ್ ಸವಾರನ ಮೇಲೆ ಹಲ್ಲೆಗೈದ ವಿಂಗ್ ಕಮಾಂಡರ್ ವಿಚಾರಣೆ

| N/A | Published : Apr 29 2025, 01:46 AM IST / Updated: Apr 29 2025, 05:17 AM IST

ಸಾರಾಂಶ

ತನ್ನ ಕಾರಿಗೆ ಬೈಕ್ ಗುದ್ದಿಸಿದ್ದ ಕಾರಣಕ್ಕೆ ಬೈಕ್ ಸವಾರನ ಜತೆ ಜಗಳವಾಯಿತು. ದುರುದ್ದೇಶದಿಂದ ನಾನು ಗಲಾಟೆ ಮಾಡಿಲ್ಲ ಎಂದು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.

 ಬೆಂಗಳೂರು : ತನ್ನ ಕಾರಿಗೆ ಬೈಕ್ ಗುದ್ದಿಸಿದ್ದ ಕಾರಣಕ್ಕೆ ಬೈಕ್ ಸವಾರನ ಜತೆ ಜಗಳವಾಯಿತು. ದುರುದ್ದೇಶದಿಂದ ನಾನು ಗಲಾಟೆ ಮಾಡಿಲ್ಲ ಎಂದು ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ.

ಕನ್ನಡಿಗ ಬೈಕ್ ಸವಾರ ವಿಕಾಸ್ ಕುಮಾರ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅವರನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಮ್ಮ ಮೇಲಿನ ಹಲ್ಲೆ ಆರೋಪವನ್ನು ತಳ್ಳಿ ಹಾಕಿದ್ದ ಅವರು, ನಮ್ಮ ಕಾರಿಗೆ ಬೈಕ್ ಗುದ್ದಿಸಿದ್ದ ಕಾರಣಕ್ಕೆ ಗಲಾಟೆ ನಡೆದಿದೆ ಎಂದಿದ್ದಾರೆ. ಅಲ್ಲದೆ, ಕಾರಿನ ಡ್ಯಾಶ್‌ಬೋರ್ಡ್‌ ಕ್ಯಾಮೆರಾ ಫೆಬ್ರವರಿಯಲ್ಲಿ ಕೆಟ್ಟಿದ್ದು, ರಿಪೇರಿ ಮಾಡಲು ಕೊಟ್ಟಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ. 3 ದಿನಗಳ ಬಳಿಕ ವಿಚಾರಣೆಗೆ ಮತ್ತೆ ಬರುವಂತೆ ವಿಂಗ್ ಕಮಾಂಡರ್‌ಗೆ ಸೋಮವಾರ ಪೊಲೀಸರು ಸೂಚಿಸಿ ಕಳುಹಿಸಿದ್ದಾರೆ.

ನನ್ನ ತಂದೆ ಶಸ್ತ್ರ ಚಿಕಿತ್ಸೆ ಸಲುವಾಗಿ ಕೊಲ್ಕತ್ತಾಗೆ ತೆರಳಬೇಕಿತ್ತು. ಹಾಗಾಗಿ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಲು ಕಾರಿನಲ್ಲಿ ಪತ್ನಿ ಬಂದಿದ್ದಳು. ಆಗ ಹಳೇ ಮದ್ರಾಸ್ ರಸ್ತೆಯಲ್ಲಿ ನಮ್ಮ ಕಾರಿಗೆ ಬೈಕ್ ಸವಾರ ಅತಿವೇಗವಾಗಿ ಬಂದು ಡಿಕ್ಕಿ ಮಾಡಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಆತ ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾಗಿ ವಿಂಗ್ ಕಮಾಂಡರ್ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

ಹಲ್ಲೆ ಖಂಡಿಸಿದ್ದ ಸಿಎಂ:

ಬೈಕ್‌ ಸವಾರನ ಮೇಲೆ ಹಲ್ಲೆಯನ್ನು ತೀವ್ರ ಖಂಡಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಆರೋಪಿತ ಅಧಿಕಾರಿ ವಿರುದ್ಧ ಕಠಿಣ ಕ್ರಮ ಸೂಚಿಸಿದ್ದರು. ಅಲ್ಲದೆ ವಿಂಗ್ ಕಮಾಂಡರ್ ವಿರುದ್ಧ ಕನ್ನಡಪರ ಸಂಘಟನೆಗಳು ಸಹ ಆಕ್ರೋಶ ವ್ಯಕ್ತಪಡಿಸಿದ್ದವು. ಈ ಹಿನ್ನಲೆಯಲ್ಲಿ ಬಂಧನ ಭೀತಿಗೊಳಗಾಗಿದ್ದ ಅವರು, ರಕ್ಷಣೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಮನವಿ ಸ್ವೀಕರಿಸಿದ್ದ ನ್ಯಾಯಾಲಯವು, ವಿಂಗ್ ಕಮಾಂಡರ್ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಆದೇಶಿಸಿತ್ತು. ಈ ವಿನಾಯಿತಿ ಸಿಕ್ಕಿದ ಬೆನ್ನಲ್ಲೇ ಪೊಲೀಸರ ಮುಂದೆ ಹಾಜರಾಗಿ ಘಟನೆ ಕುರಿತು ವಿಂಗ್ ಕಮಾಂಡರ್ ಹೇಳಿಕೆ ದಾಖಲಿಸಿದ್ದಾರೆ.

ಸುಳ್ಳು ಆರೋಪಿಸಿದ್ದ ವಿಂಗ್ ಕಮಾಂಡರ್:

ಕಳೆದ ಬುಧವಾರ ವಾಹನ ಹಿಂದಿಕ್ಕುವ ವಿಚಾರವಾಗಿ ಸಿಟ್ಟಿಗೆದ್ದು ಬೈಕ್ ಸವಾರ ವಿಕಾಸ್ ಕುಮಾರ್ ಮೇಲೆ ವಿಂಗ್ ಕಮಾಂಡರ್ ಶಿಲಾದಿತ್ಯ ಭೀಕರವಾಗಿ ಹಲ್ಲೆ ನಡೆಸಿದ್ದರು. ಬಳಿಕ ತಮ್ಮ ಮೇಲೆ ಭಾಷೆ ಮುಂದಿಟ್ಟು ಹಲ್ಲೆ ನಡೆಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟು ಅವರು ಸುಳ್ಳು ಆರೋಪ ಮಾಡಿದ್ದರು.