ಸಾರಾಂಶ
ಮಹಿಳೆಯರಿಗೆ ತಂತ್ರಜ್ಞಾನದ ಕುರಿತು ಸಾಕಷ್ಟು ಅರಿವು ಮೂಡಿಸಬೇಕು ಮತ್ತು ಬದಲಾಗುತ್ತಿರುವ ಸನ್ನಿವೇಶದಲ್ಲಿ ಅವರೂ ಕೂಡಾ ತಾಂತ್ರಿಕವಾಗಿ ಸಾಕಷ್ಟು ತಿಳುವಳಿಕೆ ಹೊಂದಬೇಕು.
ಬೆಂಗಳೂರು ದಕ್ಷಿಣ : ಮಹಿಳೆಯರಿಗೆ ತಂತ್ರಜ್ಞಾನದ ಕುರಿತು ಸಾಕಷ್ಟು ಅರಿವು ಮೂಡಿಸಬೇಕು ಮತ್ತು ಬದಲಾಗುತ್ತಿರುವ ಸನ್ನಿವೇಶದಲ್ಲಿ ಅವರೂ ಕೂಡಾ ತಾಂತ್ರಿಕವಾಗಿ ಸಾಕಷ್ಟು ತಿಳುವಳಿಕೆ ಹೊಂದಬೇಕು. ಇಲ್ಲವಾದಲ್ಲಿ ಅನಗತ್ಯ ಸಂಕಷ್ಟಗಳಿಗೆ ಸಿಕ್ಕಿ ಹಾಕಿಕೊಳ್ಳುವ ಪ್ರಸಂಗ ಎದುರಾಗಬಹುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ। ನಾಗಲಕ್ಷ್ಮಿ ಚೌಧರಿ ಹೇಳಿದರು.
ಎಎಂಸಿ ಸಂಸ್ಥೆಯ ಕ್ಯಾಂಪಸ್ನಲ್ಲಿ ಪ್ರತಿಷ್ಠಿತ ಸೈಬರ್ ಸೆಕ್ಯುರಿಟಿ ಸಂಸ್ಥೆಯಾದ ಜೆಸ್ಕೇಲರ್ ಪ್ರಾಯೋಜಕತ್ವದೊಂದಿಗೆ ಸೈಬರ್ ದಾಳಿಗಳಿಂದ ಪಾರಾಗಲು ವಿಶಿಷ್ಟ ತಂತ್ರಜ್ಞಾನದೊಂದಿಗೆ ರೂಪಿಸಿರುವ ದೇಶದಲ್ಲೇ ಮೊಟ್ಟಮೊದಲ ವ್ಯವಸ್ಥೆಯಾದ ಕಾಪ್ಕನೆಕ್ಟ್ (ಮಾಹಿತಿ ಹಂಚಿಕೆ ಮತ್ತು ವಿಶ್ಲೇಷಣೆ ಕೇಂದ್ರ) ಸೈಬರ್ ಸೆಕ್ಯುರಿಟಿ ಕೆಫೆಯನ್ನು ಡಾ। ನಾಗಲಕ್ಷ್ಮಿ ಚೌಧರಿ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ವೈಯಕ್ತಿಕ ವಿವರ, ಫೋಟೋಗಳನ್ನ ಹಂಚಿಕೊಳ್ಳುವ ಮೊದಲು ಗಂಭೀರವಾಗಿ ಯೋಚಿಸಬೇಕು. ಇಂದು ಅಂತರ್ಜಾಲವನ್ನು ದುರ್ಬಳಕೆ ಮಾಡಿಕೊಂಡು ಅನೇಕ ಮಹಿಳೆಯರು ಹಾಗೂ ಮಕ್ಕಳನ್ನು ಗುರಿ ಮಾಡಿಕೊಳ್ಳುವ ಜಾಲವೇ ಬೆಳೆದುಬಿಟ್ಟಿದೆ. ಈ ಕಾರಣದಿಂದ ಸೈಬರ್ ಕ್ರೈಂಗೆ ಗುರಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಎಂಸಿ ಸಂಸ್ಥೆಯ ನಿರ್ದೇಶಕ ಡಾ। ಜಿ.ಎನ್.ಮೋಹನ್ ಬಾಬು ಮಾತನಾಡಿ, ದಿನದಿಂದ ದಿನಕ್ಕೆ ಸೈಬರ್ ದಾಳಿಗಳು ಹೆಚ್ಚಾಗುತ್ತಿವೆ. ಜಾಗತಿಕವಾಗಿ ನೋಡಿದಾಗ ಕಳೆದ ಐದಾರು ವರ್ಷಗಳಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯೇ ಅತಿ ಹೆಚ್ಚಿರುವುದು. ಮುಂದಿನ ಇನ್ನೂ ಎರಡು ದಶಕಗಳ ಕಾಲ ಸೈಬರ್ ಕ್ರೈಂಗಳೇ ಅಪರಾಧಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತವೆ ಎಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲ ಡಾ। ಕೆ.ಕುಮಾರ್, ಕರ್ನಾಟಕ ಡಿಜಿಟಲ್ ಎಕಾನಮಿ ಸಿಇಒ ಸಂಜೀವ್ ಗುಪ್ತಾ, ಕಾಪ್ಕನೆಕ್ಟ್ನ ಸಂಸ್ಥಾಪಕ ನಿರ್ದೇಶಕ ಪಿ.ಆನಂದ ನಾಯ್ಡು, ಜ಼ಿಸ್ಕೇಲರ್ನ ಮಾರ್ಕೆಟಿಂಗ್ ವಿಭಾಗದ ಪ್ರಾದೇಶಿಕ ನಿರ್ದೇಶಕ ಕಾರ್ತಿಕ್ ಕಿಶೋರ್ ಉಪಸ್ಥಿತರಿದ್ದರು.ಚಿತ್ರ: ಎಎಂಸಿ ಸಂಸ್ಥೆಯ ಕ್ಯಾಂಪಸ್ನಲ್ಲಿ ಪ್ರತಿಷ್ಠಿತ ಸೈಬರ್ ಸೆಕ್ಯುರಿಟಿ ಸಂಸ್ಥೆಯಾದ ಜೆಸ್ಕೇಲರ್ ಪ್ರಾಯೋಜಕತ್ವದ ಕಾಪ್ಕನೆಕ್ಟ್ ಸೈಬರ್ ಸೆಕ್ಯುರಿಟಿ ಕೆಫೆಯನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ। ನಾಗಲಕ್ಷ್ಮಿ ಚೌಧರಿ ಉದ್ಘಾಟಿಸಿದರು. ಡಾ। ಜಿ.ಎನ್.ಮೋಹನ್, ಡಾ। ಕೆ.ಕುಮಾರ್, ಸಂಜೀವ್ ಗುಪ್ತಾ, ಪಿ.ಆನಂದ ನಾಯ್ಡು, ಕಾರ್ತಿಕ್ ಕಿಶೋರ್ ಉಪಸ್ಥಿತರಿದ್ದರು.