ಸಾರಾಂಶ
ಈ ತಿಂಗಳಾಂತ್ಯಕ್ಕೆ ಅನಂತನಾಗ್ ಅವರು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅನಂತನಾಗ್ ಅವರು ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸುವುದನ್ನು ನೋಡಲು ಇಡೀ ಕರ್ನಾಟಕ ಕಾತರದಿಂದ ಕಾಯುತ್ತಿದೆ
ಅನಂತನಾಗ್ ಅವರು ಕನ್ನಡಿಗರ ಮೇಲೆ, ಕನ್ನಡದ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡವರು. ಅದೇ ಪ್ರಮಾಣದಲ್ಲಿ ಕನ್ನಡಿಗರ ಪ್ರೀತಿಯನ್ನು ಗಳಿಸಿಕೊಂಡವರು. ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಆದಾಗ ಎಲ್ಲಾ ಕನ್ನಡಿಗರೂ ತಮ್ಮ ಮನೆಯವರಿಗೇ ಪ್ರಶಸ್ತಿ ಸಿಕ್ಕಷ್ಟು ಆನಂದ ಪಟ್ಟಿದ್ದರು.
ಇದೀಗ ಆ ಸಂಭ್ರಮಕ್ಕೆ ಮತ್ತಷ್ಟು ಕಳೆಗಟ್ಟುವ ಸಮಯ ಬಂದಿದೆ. ಈ ತಿಂಗಳಾಂತ್ಯಕ್ಕೆ ಅನಂತನಾಗ್ ಅವರು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅನಂತನಾಗ್ ಅವರು ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸುವುದನ್ನು ನೋಡಲು ಇಡೀ ಕರ್ನಾಟಕ ಕಾತರದಿಂದ ಕಾಯುತ್ತಿದೆ.
ಕೆಲವರ್ಷಗಳಿಂದ ಪದ್ಮ ಪ್ರಶಸ್ತಿಯನ್ನು ಎರಡು ಕಂತುಗಳಲ್ಲಿ ನೀಡುವ ಪದ್ಧತಿ ಆರಂಭವಾಗಿದೆ. ಒಂದೇ ದಿನ ಎಲ್ಲರಿಗೂ ಪ್ರಶಸ್ತಿ ಪ್ರದಾನ ಮಾಡುವುದು ಕೊಂಚ ದೀರ್ಘ ಸಮಯ ಬೇಡುವುದರಿಂದ ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಕೆಲವರಿಗೆ ಈ ಮಾಹಿತಿ ಇಲ್ಲದ್ದರಿಂದ ಗೊಂದಲ ಉಂಟಾಗಿತ್ತು. ಆದರೆ ಇದೀಗ ಮೇ ತಿಂಗಳಾಂತ್ಯಕ್ಕೆ ಅನಂತನಾಗ್ ಅವರು ಪ್ರಶಸ್ತಿ ಸ್ವೀಕರಿಸುವುದು ಖಚಿತವಾಗಿದೆ. ಆದರೆ ದಿನಾಂಕ ಇನ್ನೂ ನಿಶ್ಚಿತವಾಗಿಲ್ಲ.
‘ಕನ್ನಡಿಗರು ನನ್ನ ಮೇಲೆ ಇಟ್ಟಿರುವ ನಿಸ್ವಾರ್ಥ ಪ್ರೀತಿಗೆ ಏನು ಹೇಳಲಿ. ಅಗಾಧ ಪ್ರೀತಿ ತೋರಿಸುತ್ತಾರೆ. ಅದಕ್ಕಾಗಿ ನಾನು ಋಣಿ’ ಎನ್ನುತ್ತಾರೆ ಅನಂತನಾಗ್. ಕನ್ನಡಿಗರು ಆಸೆಯಿಂದ, ಕಾತರದಿಂದ, ಕುತೂಹಲದಿಂದ ಕಾಯುತ್ತಿರುವ ದಿನ ಇನ್ನೇನು ಹತ್ತಿರ ಬರುತ್ತಿದೆ.