ಈ ಸಿನಿಮಾಕ್ಕಾಗಿ ನಾನು ಒಂದು ರೂಪಾಯಿಯೂ ಅಡ್ವಾನ್ಸ್‌ ತಗೊಂಡಿಲ್ಲ. ಇದನ್ನು ಕೆಜಿಎಫ್‌, ಕಾಂತಾರ ರೇಂಜ್‌ಗೆ ಬೆಳೆಸುವ ಆಸೆ ಇತ್ತು. ಶೂಟಿಂಗ್ ಮಾಡಬೇಕು ಅಂತ ಹೋದ್ರೆ ನಿರ್ದೇಶಕ ಆತ್ಮ*ತ್ಯೆ ಮಾಡ್ಕೊಂಡಿದ್ರು. ಅಲ್ಲಿಂದ ಜವಾಬ್ದಾರಿ ಜಾಸ್ತಿ ಆಯ್ತು.

ಸಿನಿವಾರ್ತೆ

‘ ಈ ಸಿನಿಮಾಕ್ಕಾಗಿ ನಾನು ಒಂದು ರೂಪಾಯಿಯೂ ಅಡ್ವಾನ್ಸ್‌ ತಗೊಂಡಿಲ್ಲ. ಇದನ್ನು ಕೆಜಿಎಫ್‌, ಕಾಂತಾರ ರೇಂಜ್‌ಗೆ ಬೆಳೆಸುವ ಆಸೆ ಇತ್ತು. ಶೂಟಿಂಗ್ ಮಾಡಬೇಕು ಅಂತ ಹೋದ್ರೆ ನಿರ್ದೇಶಕ ಆತ್ಮ*ತ್ಯೆ ಮಾಡ್ಕೊಂಡಿದ್ರು. ಅಲ್ಲಿಂದ ಜವಾಬ್ದಾರಿ ಜಾಸ್ತಿ ಆಯ್ತು. ಇಷ್ಟೆಲ್ಲ ಮಾಡಿ ಈ ಸಿನಿಮಾ ಶೂಟಿಂಗ್ ಶುರು ಆದಮೇಲೆ ನನ್ನ ಅಣ್ಣನಿಗೆ ಆಕ್ಸಿಡೆಂಟ್ ಆಯಿತು. ಮೂರು ವರ್ಷ ರಾತ್ರಿ ಹಗಲು ಕಣ್ಣೀರು ಹಾಕಿ ಸಿನಿಮಾ ಕಂಪ್ಲೀಟ್ ಮಾಡಿದ್ದೇವೆ’

‘ರೈಸ್‌ ಆಫ್‌ ಅಶೋಕ’ ಸಿನಿಮಾದ ಆಡಿಯೋ ಲಾಂಚ್‌

ಬೆಂಗಳೂರಿನ ಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ ನಡೆದ ‘ರೈಸ್‌ ಆಫ್‌ ಅಶೋಕ’ ಸಿನಿಮಾದ ಆಡಿಯೋ ಲಾಂಚ್‌ನಲ್ಲಿ ಸತೀಶ್‌ ನೀನಾಸಂ ಆಡಿರುವ ಭಾವುಕ ಮಾತುಗಳಿವು. ಈ ಚಿತ್ರದ ಏಳೋ ಏಳೋ ಮಹಾದೇವ ಹಾಡು ಲಹರಿ ಮ್ಯೂಸಿಕ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

‘ನನ್ನ ಶತ್ರುಗಳೂ ಈ ಸಿನಿಮಾ ನೋಡಿ ಹೆಮ್ಮೆ ಪಡ್ತಾರೆ. ಇದರ ಕೆಲಸ ಮಾಡುವ ಮೂರು ವರ್ಷಗಳಲ್ಲಿ 50 ಲಕ್ಷ ರೂ. ತಗೊಂಡು 6 ಸಿನಿಮಾ ಮಾಡಬಹುದಿತ್ತು. ಯಾಕೆ ಮಾಡಿಲ್ಲ ಅಂದರೆ ರೈಸ್ ಆಫ್ ಅಶೋಕ ಸಿನಿಮಾವೇ ನಮಗೆ ಸರ್ವಸ್ವವೂ ಆಗಿತ್ತು’ ಎಂದೂ ಸತೀಶ್‌ ಹೇಳಿದ್ದಾರೆ.

ನಾಯಕಿ ಸಪ್ತಮಿ ಗೌಡ

ನಾಯಕಿ ಸಪ್ತಮಿ ಗೌಡ ಮಾತನಾಡಿ, ‘ಈ ಸಿನಿಮಾ ತಂಡಕ್ಕೆ ನಾನು ಕೊನೆಯ ಕಲಾವಿದೆಯಾಗಿ ಸೇರ್ಪಡೆಗೊಂಡಿದ್ದು. ಇದರಲ್ಲಿ ಹೂ ಮಾರುವ ಹುಡುಗಿ ಅಂಬಿಕಾ ಎಂಬ ಪಾತ್ರ ಮಾಡಿದ್ದೇನೆ’ ಎಂದರು.

ಶಿವನ ಕುರಿತಾದ ಈ ಹಾಡಿಗೆ ಕೈಲಾಶ್ ಖೇರ್‌, ಸಾಧ್ವಿನಿ ಕೊಪ್ಪ , ಸಿದ್ದು ಧ್ವನಿಯಾಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ.

ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆ. ವರ್ಧನ್ ನರಹರಿ, ಜೈಷ್ಣವಿ ಹಾಗೂ ಸತೀಶ್ ನೀನಾಸಂ ನಿರ್ಮಾಪಕರು.