ಗೌರಿ ಸಿನಿಮಾ ಟ್ರೇಲರ್ ಲಾಂಚ್ ಮಾಡಿದ ಸುದೀಪ್ ಸಮರ್ಜಿತ್ ಮುಗ್ಧತೆಗೆ ಮಾರುಹೋದರು.

 ಸಿನಿವಾರ್ತೆ

ಹಿರಿಯ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಪುತ್ರ ಸಮರ್ಜಿತ್‌ ಲಂಕೇಶ್‌ ನಟನೆಯ ‘ಗೌರಿ’ ಸಿನಿಮಾದ ಟ್ರೇಲರ್‌ ಅನ್ನು ಕಿಚ್ಚ ಸುದೀಪ್‌ ಬಿಡುಗಡೆ ಮಾಡಿದರು. ಈ ವೇಳೆ ಸುದೀಪ್ ಅವರು ಸಮರ್ಜಿತ್‌ ಮುಗ್ಧತೆ ಮಾರುಹೋಗಿ ಅವರನ್ನು ತಬ್ಬಿಕೊಂಡರು.

ಈ ಸಂದರ್ಭ ಕಿಚ್ಚ ಸುದೀಪ್, ‘ಸಮರ್ಜಿತ್ ಮಾತನಾಡುವಾಗ ಸಾನ್ಯಾ ಬಗ್ಗೆ ಮುಗ್ಧವಾಗಿ ಮಾತನಾಡಿದರು. ಇನ್ನು ಕೆಲ ಸಮಯದ ಬಳಿಕ ಅವರ ಇಂಥಾ ಮಾತು ಕೇಳಲು ಸಿಗಲ್ಲ. ಹೇಗೆ ಮಾತಾಡಿದ್ರೆ ಉಲ್ಟಾ ಆಗುತ್ತೆ, ಹೇಗೆ ಮಾತಾಡ್ಬೇಕು ಅಂತೆಲ್ಲ ತಿಳ್ಕೊಂಡು ಮಾತನಾಡ್ತಾರೆ. ಆಗ ಈ ಮುಗ್ಧತೆ ಮಾಯ ಆಗುತ್ತೆ. ಹೊಸ ನಟರ ಜೀವನೋತ್ಸಾಹ, ಮುಗ್ಧತೆ ನನಗಿಷ್ಟ’ ಎಂದರು.

‘ಗೌರಿ ಸಿನಿಮಾದ ಟ್ರೇಲರ್‌ ನೋಡಿ ನಮ್ಮ ವಿಮರ್ಶೆ, ಅಭಿಪ್ರಾಯ ಏನೇ ಇರಲಿ. ಆದರೆ ಇದನ್ನು ನೋಡಿ ತಂದೆ ಇಂದ್ರಜಿತ್‌ ಹಾಗೂ ಮಗ ಸಮರ್ಜಿತ್‌ಗೆ ಆಗುವಷ್ಟು ಸಂತೋಷ, ಈ ಪ್ರಪಂಚದಲ್ಲಿ ಬೇರೆ ಯಾರಿಗೂ ಆಗೋದಕ್ಕೆ ಸಾಧ್ಯವೇ ಇಲ್ಲ. ಸಮರ್ಜಿತ್‍ನ ಯಶಸ್ಸು ಅವನೊಬ್ಬನ ಯಶಸ್ಸು ಆಗಿರುವುದಿಲ್ಲ. ಅದರಲ್ಲಿ ಇಂದ್ರಜಿತ್‍ ಯಶಸ್ಸೂ ಇದೆ’ ಎಂದು ಹೇಳಿದರು.ಸಮರ್ಜಿತ್‌ ಲಂಕೇಶ್, ಸುದೀಪ್‌ ಅಕ್ಕರೆಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಇಂದ್ರಜಿತ್‌ ಲಂಕೇಶ್‌, ಸುದೀಪ್‌ ಅವರಿಗೆ ಇಂಗ್ಲೆಂಡ್‌ನಿಂದ ತರಿಸಿದ ವಿಶೇಷ ಬ್ಯಾಟ್‌ ಅನ್ನು ಗಿಫ್ಟ್‌ ನೀಡಿದರು. ಪ್ರಿಯಾಂಕಾ ಉಪೇಂದ್ರ, ನಿರ್ಮಾಪಕ ರಮೇಶ್‌ ರೆಡ್ಡಿ, ಆನಂದ್‌ ಆಡಿಯೋದ ಶ್ಯಾಮ್‌ ಹಾಜರಿದ್ದರು.