ಸಾರಾಂಶ
ಇಂದು (ಜೂ.26) ತೆರೆಗೆ ಬರುತ್ತಿರುವ ಸತ್ಯಪ್ರಕಾಶ್ ನಿರ್ದೇಶನ, ನಟನೆಯ ‘ಎಕ್ಸ್ ಆ್ಯಂಡ್ ವೈ’ ಸಿನಿಮಾದ ನಾಯಕ ಅಥರ್ವ. ಸಿನಿಮಾ ಹಾಗೂ ಬದುಕಿನ ಬಗ್ಗೆ ಅವರ ಮಾತು.
ಎಕ್ಸ್ ಆ್ಯಂಡ್ ವೈ ಸಿನಿಮಾ ನಾಯಕ ಅಥರ್ವ ಪ್ರಕಾಶ್ ಮಾತು
ಇಂದು (ಜೂ.26) ತೆರೆಗೆ ಬರುತ್ತಿರುವ ಸತ್ಯಪ್ರಕಾಶ್ ನಿರ್ದೇಶನ, ನಟನೆಯ ‘ಎಕ್ಸ್ ಆ್ಯಂಡ್ ವೈ’ ಸಿನಿಮಾದ ನಾಯಕ ಅಥರ್ವ. ಸಿನಿಮಾ ಹಾಗೂ ಬದುಕಿನ ಬಗ್ಗೆ ಅವರ ಮಾತು.
- ಬಾಲ್ಯದಲ್ಲಿ ರಾಜ್ಕುಮಾರ್, ವಿಷ್ಣುವರ್ಧನ್ ಸಿನಿಮಾಗಳೆಂದರೆ ಬಹಳ ಇಷ್ಟ. ಅವರ ನಟನೆಯೇ ನನಗೆ ಸ್ಫೂರ್ತಿ. ನಾನು ಓದಿದ್ದು ಆರ್ಕಿಟೆಕ್ಚರ್. ಅದನ್ನೂ ಮೀರಿ ನಟನೆಯಲ್ಲಿ ಆಸಕ್ತಿ. ತುಳು ಸಿನಿಮಾ ‘ಚಾಲಿಪೋಲಿಲು’ನಲ್ಲಿ ಬಾಲನಟನಾಗಿ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟೆ. ಈವರೆಗೆ ಏಳೆಂಟು ತುಳು ಸಿನಿಮಾ, ನಾಲ್ಕು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದೇನೆ. ಕನ್ನಡ ಇಂಡಸ್ಟ್ರಿಗೆ ನನ್ನನ್ನು ಕರೆತಂದವರು ನಿರ್ದೇಶಕ ಸತ್ಯಪ್ರಕಾಶ್. ಅವರ ‘ಮ್ಯಾನ್ ಆಫ್ ದಿ ಮ್ಯಾಚ್’ ನನ್ನ ಮೊದಲ ಸಿನಿಮಾ. ನನ್ನ ನಗು ಇಷ್ಟ ಆಗಿ ಅವ್ರು ಆ ಸಿನಿಮಾಕ್ಕೆ ತಗೊಂಡರು. ನಟನೆ ಏನೋ ಓಕೆ ಆಯ್ತು, ಆದರೆ ಮಂಗಳೂರಿನ ಉಚ್ಚರಣೆ ತಲೆನೋವಾಯ್ತು. ಬೆಂಗಳೂರು ಭಾಷೆ ಕಲಿಯಲು ಪಾರ್ಕು ಮಾರ್ಕೆಟ್ಗಳಲ್ಲಿ ಜನರನ್ನು ಮಾತನಾಡಿಸುತ್ತ 3 ತಿಂಗಳು ಸರ್ಕಸ್ ಮಾಡಿದೆ. ಕೊನೆಗೂ ಬೆಂಗಳೂರು ಭಾಷೆ ಉಚ್ಚರಣೆ ಕಲಿತು ಆ ಪಾತ್ರ ಸಂಭಾಳಿಸಿದೆ. ಆದರೆ ಈ ಸಿನಿಮಾದಲ್ಲಿ ಮಾತಿನ ತಲೆನೋವು ಇಲ್ಲ. ಏಕೆಂದರೆ ಇದರಲ್ಲಿ ನನಗಿರೋದೇ ನಾಲ್ಕು ಮತ್ತೊಂದು ಡೈಲಾಗ್. ಹಾಗಿದ್ರೆ ಇಡೀ ಸಿನಿಮಾದಲ್ಲಿ ಮತ್ತೇನು ಮಾಡ್ತೀನಿ ಅನ್ನೋದಕ್ಕೆ ಉತ್ತರ ಸಿನಿಮಾದಲ್ಲಿದೆ.
- ಶೀರ್ಷಿಕೆಯೇ ಹೇಳುವಂತೆ ‘ಎಕ್ಸ್ ಆ್ಯಂಡ್ ವೈ’ ಸಿನಿಮಾ ಮನುಷ್ಯನ ಕ್ರೋಮೊಸೋಮ್ ಬಗೆಗಿನ ಕಥೆ. ಇದರಲ್ಲಿ ಹುಟ್ಟದಿರುವ ಆತ್ಮವಾಗಿ ನನ್ನ ಪಾತ್ರ. ನನಗೆ ಭೂಮಿ ನೋಡಬೇಕು, ಇಲ್ಲಿಗೆ ಬರಬೇಕು ಅಂತ ತುಂಬ ಆಸೆ ಇರುತ್ತೆ. ಆದರೆ ನಾನು ಹುಟ್ಟಲು ನಡೆಯಬೇಕಾದ ಪ್ರೊಸೆಸ್ ಆಗದೆ ನನ್ನ ಎಂಟ್ರಿ ವಿಳಂಬವಾಗುತ್ತೆ. ಕೊನೆಗೆ ದೇವರಲ್ಲಿ ರಿಕ್ವೆಸ್ಟ್ ಮಾಡಿ ಅಪ್ಪ ಅಮ್ಮನನ್ನು ಒಂದು ಮಾಡಲು ನಾನು ಭೂಮಿಗೆ ಬರುತ್ತೇನೆ. ಇದು ನಾಲ್ಕೈದು ದಿನದಲ್ಲಿ ನಡೆಯುವ ಕಥೆ. ನನಗೆ ತಿಳಿದಂತೆ ನಮ್ಮ ದೇಶದಲ್ಲಿ ಇಂಥಾದ್ದೊಂದು ವಿಶಿಷ್ಟ ಕಥೆ ಬಂದಿಲ್ಲ.
- ಸೊಗಸಾದ ಚಿತ್ರಕಥೆ, ಅದ್ಭುತ ಸಂಗೀತ, ಅನನ್ಯ ಅನಿಸೋ ನನ್ನ ಪಾತ್ರ ಈ ಸಿನಿಮಾದ ಹೈಲೈಟ್.
- ಇದಲ್ಲದೇ ಸೂರಜ್ ಶೆಟ್ಟಿ ನಿರ್ದೇಶನದ ‘ನಾನ್ವೆಜ್’ ಎಂಬ ಸಿನಿಮಾದಲ್ಲಿ ನಟಿಸಿದ್ದೇನೆ. ಅದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಪೃಥ್ವಿ ಅಂಬರ್ ನಿರ್ದೇಶನದ ತುಳು ಸಿನಿಮಾದಲ್ಲೂ ಮುಖ್ಯ ಪಾತ್ರವಿದೆ.