ಕಿರೋಶ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಕಬಂಧ ಚಿತ್ರ ಆಗಸ್ಟ್ ತಿಂಗಳಲ್ಲಿ ತೆರೆಗೆ ಬರಲಿದೆ.

 ಸಿನಿವಾರ್ತೆ

ದುನಿಯಾ ಕಿಶೋರ್, ಅವಿನಾಶ್‍, ಪ್ರಸಾದ್‍ ವಸಿಷ್ಠ ನಟಿಸಿರುವ ‘ಕಬಂಧ’ ಸಿನಿಮಾ ಆಗಸ್ಟ್‌ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಶ್ರೇಯಸ್‌ ಬಿ ರಾವ್‌, ರಘೋತ್ತಮ ಎನ್‌ಎಸ್‌ ಸಂಗೀತ, ಕೆ ಕಲ್ಯಾಣ್‌ ಸಾಹಿತ್ಯ, ವಾಸುಕಿ ವೈಭವ್‌ ಧ್ವನಿ ಇದೆ.

ನಿರ್ದೇಶಕ ಸತ್ಯನಾಥ್‌, ‘ಇದೊಂದು ಹಾರರ್‌ ಚಿತ್ರ. ಹಾಗಾಗಿ, ಸ್ನೇಹದ ಸುತ್ತ ಮಾಂಟೇಜ್‌ ಹಾಡು ಮಾಡಿಕೊಂಡಿದ್ದೇವೆ. ಹಾಡು ಕೇಳಿದವರೆಲ್ಲ ಖುಷಿಪಟ್ಟಿದ್ದಾರೆ. ಈ ಸಿನಿಮಾದಲ್ಲಿ ವ್ಯವಸಾಯದ ಸುತ್ತ ಇರುವ ಸಮಸ್ಯೆ ಹೇಳುತ್ತಿದ್ದೇವೆ’ ಎಂದರು.ದುನಿಯಾ ಕಿಶೋರ್‌, ‘ನಾನು ಮೂಲತಃ ರೈತ. ಇದೇ ಮೊದಲ ಬಾರಿಗೆ ಈ ಚಿತ್ರದಲ್ಲೂ ರೈತನಾಗಿ ಹನುಮ ಹೆಸರಿನ ಪಾತ್ರ ಮಾಡಿದ್ದೇನೆ. ದೆವ್ವವನ್ನು ಬಳಸಿಕೊಂಡು ಒಂದು ಸಮಸ್ಯೆಯನ್ನು ಹೇಳುವ ಪ್ರಯತ್ನ ಇದು. ಸಾವಯವ ಕೃಷಿಯ ಬಗ್ಗೆ ಹೇಳಿದ್ದೇವೆ’ ಎಂದರು.

ನಿರ್ಮಾಣದ ಜತೆಗೆ ನಾಯಕನಾಗಿ ನಟಿಸಿರುವ ಪ್ರಸಾದ್‍ ವಸಿಷ್ಠ, ‘ಈ ಚಿತ್ರದಲ್ಲಿ ನಚಿಕೇತ ಎಂಬ ಜಮೀನ್ದಾರಿ ಕುಟುಂಬದವನ ಪಾತ್ರ ನನ್ನದು. ನಿಶ್ಯಕ್ತನಾದವನು ಶಕ್ತನಾಗುವುದು ಹೇಗೆ ಎನ್ನುವುದು ನನ್ನ ಪಾತ್ರದ ತಿರುಳು’ ಎಂದರು. ಪ್ರಿಯಾಂಕ ಮಳಲಿ, ಯೋಗರಾಜ್‌ ಭಟ್‍, ಪ್ರಶಾಂತ್‍ ಸಿದ್ದಿ, ಛಾಯಾಶ್ರೀ, ಶ್ರುತಿ ನಾಯಕ್‌ ನಟಿಸಿದ್ದಾರೆ.