ಕಿಚ್ಚ ಸುದೀಪ್‌ ತಮ್ಮ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರ ಜೊತೆಗೆ ಕೇಕ್‌ ಕಟ್‌ ಮಾಡುವ ಮೂಲಕ ಸರಳವಾಗಿ ತಮ್ಮ 54ನೇ ಹುಟ್ಟುಹಬ್ಬವನ್ನು ಬುಧವಾರ (ಸೆ.2) ಆಚರಿಸಿಕೊಂಡರು. ಈ ಬಾರಿ ಅಭಿಮಾನಿಗಳ ಜೊತೆಗೆ ಅದ್ದೂರಿ ಹುಟ್ಟುಹಬ್ಬ ಸಂಭ್ರಮ ಇಲ್ಲವೆಂದು ಸ್ವತಃ ಸುದೀಪ್‌ ಅವರೇ ಮೊದಲೇ ತಿಳಿಸಿದ್ದರು

ಸಿನಿವಾರ್ತೆ

ಕಿಚ್ಚ ಸುದೀಪ್‌ ತಮ್ಮ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರ ಜೊತೆಗೆ ಕೇಕ್‌ ಕಟ್‌ ಮಾಡುವ ಮೂಲಕ ಸರಳವಾಗಿ ತಮ್ಮ 54ನೇ ಹುಟ್ಟುಹಬ್ಬವನ್ನು ಬುಧವಾರ (ಸೆ.2) ಆಚರಿಸಿಕೊಂಡರು. ಈ ಬಾರಿ ಅಭಿಮಾನಿಗಳ ಜೊತೆಗೆ ಅದ್ದೂರಿ ಹುಟ್ಟುಹಬ್ಬ ಸಂಭ್ರಮ ಇಲ್ಲವೆಂದು ಸ್ವತಃ ಸುದೀಪ್‌ ಅವರೇ ಮೊದಲೇ ತಿಳಿಸಿದ್ದರು ಕೂಡ ಬುಧವಾರ ರಾತ್ರಿ ಒಂದು ಗಂಟೆಯ ಹೊತ್ತಿಗೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸುದೀಪ್‌ ಅವರ ನಿವಾಸಕ್ಕೆ ಆಗಮಿಸಿದ್ದರು.

ಈ ಬಾರಿಯ ವಿಶೇಷವಾಗಿ ಕಿಚ್ಚ ಸುದೀಪ್ ಅವರ ಸಾಲು ಸಾಲು ಹೊಸ ಸಿನಿಮಾಗಳು ಘೋಷಣೆಯಾಗಿವೆ ಮತ್ತು ಸಿನಿಮಾ ಪೋಸ್ಟರ್‌ಗಳು ಬಿಡುಗಡೆಯಾಗಿವೆ.

ದೇವರಾಯನಾದ ಕಿಚ್ಚ

ಸುದೀಪ್‌ ನಟನೆಯ ಹೊಸ ಸಿನಿಮಾ ‘ದೇವರಾಯ’ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಶ್ರೀಕೃಷ್ಣ ದೇವರಾಯನ ಜೀವನ ಚರಿತ್ರೆಯನ್ನು ಹೇಳುವ ಐತಿಹಾಸಿಕ ಚಿತ್ರವಿದು. ಸದ್ಯಕ್ಕೆ ಯಾರು ನಿರ್ದೇಶಕರು ಎನ್ನುವುದು ಘೋಷಣೆಯಾಗಿಲ್ಲ. ಈ ಚಿತ್ರವನ್ನು ಪೀಪಲ್‌ ಮೀಡಿಯಾ ಫ್ಯಾಕ್ಟರಿ ಹಾಗೂ ಪ್ರಿಯಾ ಸುದೀಪ್‌ ಒಡೆತನದ ಸುಪ್ರಿಯಾನ್ವಿ ಪಿಕ್ಚರ್‌ ಸ್ಟುಡಿಯೋಸ್‌ ಜಂಟಿಯಾಗಿ ನಿರ್ಮಿಸುತ್ತಿದೆ.

ಬಿಆರ್‌ಬಿ ಹೊಸ ಪೋಸ್ಟರ್‌, ಸ್ಕೂಲ್‌ ಬಸ್‌ ಪ್ರೋಮೋ

ಅನೂಪ್ ಭಂಡಾರಿ ನಿರ್ದೇಶನದ ‘ಬಿಲ್ಲ ರಂಗ ಬಾಷಾ’ ಚಿತ್ರದ ಹೊಸ ಪೋಸ್ಟರ್‌ ಕೂಡ ಬಿಡುಗಡೆ ಆಗಿದ್ದು, ಈ ಪೋಸ್ಟರ್‌ನ ಲುಕ್ಕು ಹೊಸದಾಗಿದೆ. ಇದರ ಜೊತೆಗೆ ತಮಿಳಿನ ಸಮುದ್ರಖನಿ ನಿರ್ದೇಶನ, ನಟನೆಯ ‘ಸ್ಕೂಲ್‌ ಬಸ್‌’ ಚಿತ್ರದಲ್ಲಿ ಸುದೀಪ್ ಗೆಸ್ಟ್‌ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದರ ಪ್ರೋಮೋ ಬಿಡುಗಡೆ ಆಗಿದೆ.

ಸುದೀಪ್‌ ಹೊಸ ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನ

ನಿರ್ದೇಶಕ ಜೋಗಿ ಪ್ರೇಮ್‌ ಹಾಗೂ ಕಿಚ್ಚ ಸುದೀಪ್‌ ‘ದಿ ವಿಲನ್‌’ ಚಿತ್ರದ ನಂತರ ಮತ್ತೆ ಹೊಸ ಸಿನಿಮಾ ಮೂಲಕ ಜೊತೆಯಾಗುತ್ತಿದ್ದಾರೆ. ಸ್ವತಃ ಜೋಗಿ ಪ್ರೇಮ್‌ ಅವರು ಈ ಹೊಸ ಪ್ರಾಜೆಕ್ಟ್‌ ಘೋಷಣೆ ಮಾಡಿದ್ದಾರೆ. ಅಕ್ಟೋಬರ್‌ 20ಕ್ಕೆ ಈ ಚಿತ್ರಕ್ಕೆ ಮುಹೂರ್ತ ನಡೆಯಲಿದ್ದು, ಶೀರ್ಷಿಕೆ ಬಿಡುಗಡೆಯಾಗಲಿದೆ.

ಈ ಕುರಿತು ಪ್ರೇಮ್‌, ‘ನಾನು ಮತ್ತು ಸುದೀಪ್‌ ಸಿನಿಮಾ ಮಾಡಬೇಕು ಎಂಬುದು ಬಹು ದಿನಗಳ ಯೋಚನೆ. ಇದು ರೌಡಿಸಂ, ಭೂಗತ ಲೋಕ ಇತ್ಯಾದಿ ರೆಗ್ಯುಲರ್‌ ಮಾಸ್‌ ಫಾರ್ಮುಲಾ ಅಂಶಗಳಿಂದ ದೂರ ಇರುವ ಪಕ್ಕಾ ಫ್ಯಾಮಿಲಿ ಸಿನಿಮಾ. ಇದು ನಮ್ಮಿಬ್ಬರಿಗೂ ಇದು ಬೇರೆ ರೀತಿಯ ಸಿನಿಮಾ ಆಗಲಿದೆ’ ಎನ್ನುತ್ತಾರೆ.