ಸಾರಾಂಶ
- ಹೆಚ್ಚುವರಿ ಅಭಿವೃದ್ಧಿ ಆಯುಕ್ತೆ ಡಾ. ಇಶಿತಾ ಗಂಗೂಲಿ ತ್ರಿಪಾಠಿ
ಫೋಟೋ- 15ಎಂವೈಎಸ್ 8----ಕನ್ನಡಪ್ರಭ ವಾರ್ತೆ ಮೈಸೂರು
ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೋದ್ಯಮಿಗಳಿಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಬಾಂಕ್ ಗಳಿಂದ ಸೌಲಭ್ಯ ದೊರೆಯುತ್ತಿದ್ದು ಈ ಕುರಿತು ಹೆಚ್ಚಿನ ಮಾಹಿತಿ ಅವರಿಗೆ ತಲುಪಬೇಕು ಎಂದು ಭಾರತ ಸರ್ಕಾರದ ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯದ ಹೆಚ್ಚುವರಿ ಅಭಿವೃದ್ಧಿ ಆಯುಕ್ತೆ ಡಾ. ಇಶಿತಾ ಗಂಗೂಲಿ ತ್ರಿಪಾಠಿ ತಿಳಿಸಿದರು.ನಗರದ ಹೋಟೆಲ್ ಪೈ ವಿಸ್ತಾನಲ್ಲಿ ಸಿಡ್ಬಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಖಾಸಿಯಾ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ್ದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಅರಿವು ಕಾರ್ಯಕ್ರಮಗಳು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೋದ್ಯಮಿಗಳಿಗೆ ವಿಶೇಷ ರೀತಿಯಲ್ಲಿ ಸಹಾಯಕಾರಿ ಆಗಿದ್ದು, ಈ ರೀತಿಯ ಕಾರ್ಯಕ್ರಮಗಳ ಮೂಲಕ ಅವರಿಗಾಗಿ ರೂಪಿಸಿರುವ ಸವಲತ್ತುಗಳು, ಯೋಜನೆಗಳು ಹಾಗೂ ಹಣಕಾಸಿನ ನೆರವು ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೋದ್ಯಮಗಳಲ್ಲಿ ಆರ್ಥಿಕ ಸಾಕ್ಷರತೆ ತರುವುದು ಸರ್ಕಾರದ ಉದ್ದೇಶವಾಗಿದ್ದು, ದೇಶದಲ್ಲಿನ ಒಂದು ಕೋಟಿ ಅನೋಪಚಾರಿಕ ಕೈಗಾರಿಕೋದ್ಯಮಿಗಳನ್ನು ಔಪಚಾರಿಕ ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಡಿಯಲ್ಲಿ ತರಲಾಗಿದೆ ಎಂದರು.
2/3 ಕೈಗಾರಿಕೋದ್ಯಮಿಗಳು 10 ಲಕ್ಷಕ್ಕಿಂತ ಕಡಿಮೆ ಸಾಲವನ್ನು ಪಡೆಯುತ್ತಿದ್ದು, ಕೈಗಾರಿಕೋದ್ಯಮಗಳಿಗೆ ಕೈಗೆಟುಕುವ ಹಾಗೂ ಭರಿಸಲು ಸಾಧ್ಯವಾಗುವಂತೆ ಸಾಲ ಸೌಲಭ್ಯಗಳ ಅವಕಾಶವಿದೆ. ಈ ಬಾರಿಯ ಬಜೆಟ್ ನಲ್ಲಿ ಸಹ ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚು ಅಲೊಕೇಟ್ ಮಾಡಲಾಗಿದೆ. ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೋದ್ಯಮಿಗಳನ್ನು ಗುರುತಿಸುವುದು, ಸಾಲ ಸೌಲಭ್ಯ ನೀಡುವುದು ಹಾಗೂ ಉತ್ತೇಜಿಸುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.ಭಾರತದ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಹಾಗೂ ಪ್ರಾದೇಶಿಕ ಮುಖ್ಯಸ್ಥ ಸಾತ್ಯಕಿ ರಸ್ತೋಗಿ ಮಾತನಾಡಿ, ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಎಲ್ಲಾ ಜವಾಬ್ದಾರಿ ಒಬ್ಬ ವ್ಯಕ್ತಿ ಮೇಲೆ ಕೇಂದ್ರೀಕೃತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿಯನ್ನು ಕಾಣಬಹುದು ಎಂದರು.
ಜಾಗತಿಕ ಮಟ್ಟದ ಜಿಡಿಪಿಗೆ ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳು ಶೇ.60 ರಷ್ಟು ಕೊಡುಗೆ ನೀಡಿದೆ. ಭಾರತದಲ್ಲಿ ದೇಶದ ಜಿಡಿಪಿಗೆ ಶೇ.30 ರಷ್ಟು ಕೊಡುಗೆ ನೀಡುತ್ತಿದ್ದು, ಇದನ್ನು ಉತ್ತಮಗೊಳಿಸುವಲ್ಲಿ ಎಂಎಸ್ಎಂಇಗಳಿಗೆ ಮತ್ತಷ್ಟು ಪ್ರೋತ್ಸಾಹ ಉತ್ತೇಜನ ಹಾಗೂ ಹಣಕಾಸಿನ ನೆರವು ನೀಡಬೇಕಾಗುತ್ತದೆ ಎಂದು ಅವರು ಹೇಳಿದರು.ಖಾಸಿಯಾ ಅಧ್ಯಕ್ಷ ಶಶಿಧರ ಶೆಟ್ಟಿ, ಎಂಎಸ್ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿಯ ಜಂಟಿ ನಿರ್ದೇಶಕ ಡಾ.ಕೆ. ಸಾಕ್ರೆಟಿಸ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ್, ಸಿಡ್ಬಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಆಲ್ಬರ್ಟ್ ಜೆರ್ಮಿ ಮೊದಲಾದವರು ಇದ್ದರು.
-----------------eom/mys/shekar/