ಇಂದು ರಿಲೀಸ್‌ ಆಗ್ತಿರೋ ಮರ್ಯಾದೆ ಪ್ರಶ್ನೆ ಸಿನಿಮಾ ಬಗ್ಗೆ ನಿರ್ಮಾಪಕ ಆರ್‌ ಜೆ ಪ್ರದೀಪ ಮಾತು.

- ನನ್ನ ಎಷ್ಟೋ ವರ್ಷಗಳ ಕನಸು ಸಿನಿಮಾ ಮಾಡೋದು. ಆ ಕನಸಿನ ಧ್ಯಾನದಲ್ಲಿದ್ದಾಗ ಹೊಳೆದ ಕಥೆಯ ಎಳೆ ಇಂದು ಸಿನಿಮಾವಾಗಿ ಜನರನ್ನು ತಲುಪುತ್ತಿದೆ. ಖುಷಿ, ಭಯ, ಆತಂಕ ತುಂಬಿದ ಮನಸ್ಥಿತಿಯಲ್ಲಿ ಸಿನಿಮಾ ಯಶಸ್ವಿಯೇ ಆಗುತ್ತದೆ ಎಂದು ಭರವಸೆಯಲ್ಲಿದ್ದೇನೆ.

- ಬೆಳೆಯುತ್ತಲೇ ಇರುವ ಬೆಂಗಳೂರು ಮಹಾನಗರದ ಕ್ಯಾನ್ವಾಸ್‌ನಲ್ಲಿ ಸಿನಿಮಾ ಮಾಡಬೇಕು ಅನ್ನೋ ಆಸೆ ಇತ್ತು. ನಾನು ಆರ್‌ಜೆ ಆಗಿ ಕೆಲಸ ಶುರು ಮಾಡಿದಾಗ ಔಟರ್‌ ರಿಂಗ್‌ರೋಡೇ ಇರಲಿಲ್ಲ. ಅದೇ ನಾನು ಕೆಲಸ ಬಿಡುವ ಹೊತ್ತಿಗೆ ಔಟರ್‌ ರಿಂಗ್‌ರೋಡ್‌ ಹಳತಾಗಿ ಪೆರಿಫೆರಲ್‌ ರಿಂಗ್‌ರೋಡ್‌ ಬಂದಿತ್ತು. ಕ್ಯಾಬ್‌, ಮಾಲ್‌ ಅಂತೆಲ್ಲ ಆಗಿ ಅದೆಲ್ಲಿಂದಲೋ ಬಂದ ಲಕ್ಷಾಂತರ ಮಂದಿ ಇಲ್ಲಿ ಜೀವನದ ಜೊತೆ ಗುದ್ದಾಡತೊಡಗಿದರು. ಅವರ ಬದುಕು ನನ್ನನ್ನು ಕಾಡುತ್ತಲೇ ಇತ್ತು.

- ಸದಾಶಿವ ನಗರ ಪವರ್‌ಫುಲ್‌ ವ್ಯಕ್ತಿಗಳಿರುವ ಜಾಗ. ಅಲ್ಲಿಂದ ಎರಡು ಬೀದಿ ಆಚೆಯ ಗುಟ್ಟಳ್ಳಿ ಜನರ ಲೈಫೇ ಬೇರೆ. ಒಂದು ವೇಳೆ ಈ ಎರಡು ಪ್ರಾಂತ್ಯದ ಜನರ ನಡುವೆ ಘರ್ಷಣೆಯಾದರೆ, ಗುಟ್ಟಳ್ಳಿಯಂಥಾ ಕಿರಿದಾದ ಬೀದಿಗಳಲ್ಲಿ ವಾಸಿಸುವ ಮಂದಿ ಹೇಗೆ ರಿವೆಂಜ್‌ ಸಾಧಿಸಬಹುದು ಅನ್ನೋದನ್ನು ಸಿನಿಮಾದಲ್ಲಿ ರಿಯಲಿಸ್ಟಿಕ್‌ ಆಗಿ ಹೇಳಿದ್ದೇವೆ. ಇದೊಂದು ರಿಯಲಿಸ್ಟಿಕ್‌ ರಿವೆಂಜ್‌ ಡ್ರಾಮಾ.

- ಮಲಯಾಳಂನಲ್ಲಿರುವಂಥಾ ಗಿಮಿಕ್‌ ಇಲ್ಲದ ಗಟ್ಟಿ ಕಂಟೆಂಟ್‌ ಸಿನಿಮಾ ನಮ್ಮಲ್ಲಿ ಯಾಕಿಲ್ಲ ಅನ್ನೋರಿಗೆ ಉತ್ತರ ‘ಮರ್ಯಾದೆ ಪ್ರಶ್ನೆ’. ಇದರಲ್ಲಿ ಗಿಮಿಕ್‌ ಇಲ್ಲ. ಕ್ಯಾಂಡಿಡ್‌ ಆಗಿ ಬದುಕನ್ನು ಸೆರೆ ಹಿಡಿಯುವ ಪ್ರಾಮಾಣಿಕ ಪ್ರಯತ್ನ ಇದೆ.