ಹೀಗೆ ಹೇಳಿರುವುದು ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಪಕ, ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್. ‘ಆಹಾ’ ಓಟಿಟಿ ಮಾಲೀಕರೂ ಆಗಿರುವ ಅಲ್ಲು ಅರವಿಂದ್ ಅವರೇ ‘ಓಟಿಟಿ ಕಾಲ ಮುಗಿದಿದೆ’ ಎನ್ನುವ ಹೇಳಿಕೆ ಅಚ್ಚರಿ ಮತ್ತು ಚರ್ಚೆಗೆ ಕಾರಣವಾಗಿದೆ. ಬಹಳಷ್ಟು ಮಂದಿ ಅವರು ಮಾತಿಗೆ ಒಪ್ಪಿಗೆ ಸೂಚಿಸಿದರೆ, ಇನ್ನು ಕೆಲವರು ವಿರೋಧಿಸಿದ್ದಾರೆ. ಚರ್ಚಾರ್ಹವಾದ ಅವರ ಮಾತುಗಳು ಇಲ್ಲಿವೆ.
1. ಸಿನಿಮಾಗಳ ನಿರ್ಮಾಣಕ್ಕೆ ಹಾಕುವ ಅರ್ಧ ಹಣ ಓಟಿಟಿ ಬಿಸಿನೆಸ್ಗಳಿಂದ ಬರುತ್ತದೆ ಎನ್ನುವ ಆಸೆ ಇಟ್ಟುಕೊಳ್ಳುವುದು ಬೇಡ. ಈಗ ಕಾಲ ಬದಲಾಗಿದೆ. ಓಟಿಟಿಗಳ ಕಾಲವೂ ಮುಗಿದಿದೆ.
2. ಓಟಿಟಿಗಳು ಕೂಡ ತಮಗೆ ಯಾವ ರೀತಿಯ ಕಂಟೆಂಟ್ ಬೇಕು, ಬೇಡ ಎನ್ನುವ ಆಯ್ಕೆಯಲ್ಲಿ ತುಂಬಾ ಚ್ಯೂಸಿ ಅಥವಾ ಜಿಪುಣತನ ತೋರುತ್ತಿವೆ. ಹೀಗಾಗಿ ಮೊದಲಿನಂತೆ ನಿರ್ಮಾಪಕರು ಕೇಳಿದಷ್ಟು ಹಣ ಕೊಡಲು ಓಟಿಟಿಗಳು ರೆಡಿ ಇಲ್ಲ.
3. ಕೆಲ ನಿರ್ದೇಶಕ, ನಾಯಕ ನಟರ ಸಿನಿಮಾಗಳನ್ನು ಮಾತ್ರ ಯಾವುದೇ ಷರತ್ತುಗಳು ಇಲ್ಲದೆ ಸಿನಿಮಾಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಮೊದಲಿನಂತೆ ಎಲ್ಲಾ ರೀತಿಯ ಸಿನಿಮಾಗಳಿಗೆ ಹಣ ಕೊಟ್ಟು ಕೊಳ್ಳುತ್ತಿಲ್ಲ.
4. ನಾನೂ ಕೂಡ ನನ್ನ ನಿರ್ಮಾಣ ಸಂಸ್ಥೆಯ ಕ್ರಿಯೇಟಿವ್ ಹೆಡ್ಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದೇನೆ. ಚಿತ್ರಮಂದಿರಗಳಲ್ಲಿ ಯಶಸ್ಸು ಕಾಣುವ ನಿರ್ದೇಶಕ-ನಟರ ಕಾಂಬಿನೇಷನ್ನ ಸಿನಿಮಾಗಳ ಮೇಲೆ ಮಾತ್ರ ಬಂಡವಾಳ ಹೂಡುವಂತೆ ಹೇಳಿದ್ದೇನೆ. ಥಿಯೇಟರ್ಗಳಲ್ಲಿ ಯಶಸ್ಸು ಕಾಣದ ಸಿನಿಮಾಗಳಿಗೆ ಬೇರೆ ಯಾವುದೇ ಫ್ಲ್ಯಾಟ್ಫಾರ್ಮ್ಗಳಲ್ಲೂ ಜಾಗ ಸಿಗಲ್ಲ.
ಅದ್ದೂರಿ ಕನ್ನಡ ಚಿತ್ರಗಳಿಗೂ ಓಟಿಟಿ ಲಾಭವಿಲ್ಲ!
ರೂ.100+ ಕೋಟಿ ಬಜೆಟ್ ಇದ್ದರೆ ಓಟಿಟಿ ರೇಟು ರೂ.7 ಕೋಟಿ ಮಾತ್ರ
ಕನ್ನಡದ ಸ್ಟಾರ್ ಸಿನಿಮಾಗಳು, ಅದ್ದೂರಿ ಸಿನಿಮಾಗಳು ಹೇಗೋ ಬಚಾವ್ ಆಗಿಬಿಡುತ್ತಾರೆ ಎಂಬ ಮಾತು ಗಾಂಧಿನಗರದಲ್ಲಿ ಮೊದಲು ಚಾಲ್ತಿಯಲ್ಲಿತ್ತು. ಸ್ಯಾಟಲೈಟ್, ಓಟಿಟಿ ಹಕ್ಕು ಮಾರಾಟದಿಂದ ಜಾಸ್ತಿ ದುಡ್ಡು ಬರುತ್ತದೆ ಅನ್ನುತ್ತಿದ್ದರು. ಕೆಲವು ಸ್ಟಾರ್ಗಳು ಸ್ಯಾಟಲೈಟ್ ಹಕ್ಕು ಕೊಟ್ಟರೆ ಸಾಕು ಎನ್ನುವ ಕಾಲವೂ ಇತ್ತು. ಆದರೆ ಈಗ ಕಾಲ ಉಲ್ಟಾ ಆಗಿದೆ. ಸ್ಯಾಟಲೈಟ್, ಓಟಿಟಿಯಿಂದ ಕನ್ನಡದ ಬಿಗ್ ಬಜೆಟ್ ಸಿನಿಮಾಗಳಿಗೂ ಕಾಸು ಹುಟ್ಟುತ್ತಿಲ್ಲ.
ಮೊದಲನೇಯದಾಗಿ ಪ್ರಸಾರ ಮಾಡುವುದೇ ಕಷ್ಟ. ನೆಟ್ಫ್ಲಿಕ್ಸ್, ಹಾಟ್ಸ್ಟಾರ್ ಪ್ರಸಾರ ಮಾಡಲ್ಲ. ಅಮೆಜಾನ್ ಪ್ರೈಮ್ ‘ಪೇ ಪರ್ ವ್ಯೂ’ ಮಾದರಿಯಲ್ಲಿ ಪ್ರಸಾರ ಮಾಡಬಹುದು. ಸದ್ಯಕ್ಕೆ ಇರುವ ಒಂದೇ ಒಂದು ಆಶಾಕಿರಣವೆಂದರೆ ಜೀ5. ಅವರೂ ಬೆರಳೆಣಿಕೆ ಸಿನಿಮಾ ಮಾತ್ರ ಖರೀದಿಸುತ್ತಾರೆ.
ಇದೀಗ ಬಂದ ಸುದ್ದಿ ಪ್ರಕಾರ, ರೂ.100+ ಕೋಟಿ ಬಜೆಟ್ನ ‘ಕೆಡಿ’ ಸಿನಿಮಾದ ಸ್ಯಾಟಲೈಟ್ ಮತ್ತು ಓಟಿಟಿ ಹಕ್ಕು ರೂ.7 ಕೋಟಿಗೆ ಮಾರಾಟವಾಗಿದೆ. ಬಲ್ಲ ಮೂಲಗಳ ಪ್ರಕಾರ ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದ ಸ್ಯಾಟಲೈಟ್ ಮತ್ತು ಓಟಿಟಿ ಹಕ್ಕು ಕೂಡ ಅದೇ ರೇಟ್ಗೆ ಮಾರಾಟವಾಗಿದೆ. ಕಡಿಮೆಯಾದರೂ ನಿರ್ಮಾಪಕರು ಬಂದಿದ್ದು, ಬರಲಿ ಎಂಬ ನಿರ್ಧಾರವನ್ನು ತೆಗೆದುಕೊಂಡು ಇದಕ್ಕೆ ಒಪ್ಪಿದ್ದಾರೆ. ಅವರ ಬಳಿ ಬೇರೆ ದಾರಿಯಾದರೂ ಏನಿದೆ, ಅಲ್ಲವೇ!
ಇದಕ್ಕೆ ಪರಿಹಾರ ಏನು ಅನ್ನುವುದನ್ನು ಚಿತ್ರರಂಗ ಒಗ್ಗಟ್ಟಾಗಿ ಕುಳಿತು ಕಂಡುಕೊಳ್ಳಬೇಕಿದೆ. ಇಲ್ಲದಿದ್ದರೆ ಈ ಕಷ್ಟಗಳು ಮುಂದುವರಿಯುತ್ತವೆ.
