ಸಾರಾಂಶ
ಮ್ಯಾಟ್ನಿ
ನಿರ್ದೇಶನ: ಮನೋಹರ ಕಾಂಪಲ್ಲಿ
ತಾರಾಗಣ: ಸತೀಶ್ ನೀನಾಸಂ, ರಚಿತಾರಾಮ್, ಅದಿತಿ ಪ್ರಭುದೇವ, ಶಿವರಾಜ್ ಕೆಆರ್ ಪೇಟೆ, ನಾಗಭೂಷಣ್, ಪೂರ್ಣಚಂದ್ರ ಮೈಸೂರು , ದಿಗಂತ್ ದಿವಾಕರ್
ರೇಟಿಂಗ್: 3
ರಾಜೇಶ್ ಶೆಟ್ಟಿ
ನಾಲ್ವರು ಗೆಳೆಯರ ಫಜೀತಿಯ ತಮಾಷೆ, ಕಾಡುವ ದೆವ್ವದ ಭಯ, ಚುಚ್ಚುವ ನಂಬಿಕೆ ದ್ರೋಹ, ಸ್ನೇಹದ ಸೆಂಟಿಮೆಂಟು, ತಾಯಿಯ ಪ್ರೀತಿ, ಪ್ರೇಮದ ನೆರಳು ಎಲ್ಲವನ್ನೂ ಧರಿಸಿರುವ ಹಾರರ್ ಕಾಮಿಡಿ ಸಿನಿಮಾ.
ಬಹಳ ವರ್ಷಗಳಿಂದ ದೂರವೇ ಇದ್ದ ಗೆಳೆಯನೊಬ್ಬನನ್ನು ಭೇಟಿ ಮಾಡಲೆಂದು ನಾಲ್ವರು ಬಾಲ್ಯ ಗೆಳೆಯರು ಅವನ ಮನೆಗೆ ಬಂದು ಸೇರುವಲ್ಲಿಗೆ ಕಥೆ ಶುರುವಾಗುತ್ತದೆ. ಅಲ್ಲಿಂದ ಮುಂದೆ ಅವರು ಅನೀಕ್ಷಿತ ಘಟನೆಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಆ ಅಚ್ಚರಿಗಳೇ ಈ ಸಿನಿಮಾದ ಶಕ್ತಿ ಮತ್ತು ಹೆಗ್ಗಳಿಕೆ.
ಅವರೆಲ್ಲರೂ ಆ ಮನೆಯಲ್ಲಿ ಪಡುವ ಫಜೀತಿಗಳೇ ಈ ಸಿನಿಮಾದ ಮೂಲ ಶಕ್ತಿ. ಎಲ್ಲಾ ದೈತ್ಯ ಕಲಾವಿದರೇ ಆಗಿರುವುದರಿಂದ, ಅವರ ಅಪಾರ ನಟನಾ ಚಾತುರ್ಯದಿಂದ ದೆವ್ವದ ಕೈಯಲ್ಲಿ ಇವರೆಲ್ಲರೂ ಪಾರಾಗಿ ಬರಲಿ ಎಂದು ಅನ್ನಿಸುತ್ತದೆ. ಅಷ್ಟು ಹೊತ್ತಿಗೆ ಮತ್ತೊಂದು ತಿರುವು ಸಿಕ್ಕಿ ದಾರಿಯನ್ನು ಮತ್ತಷ್ಟು ಅನಿರೀಕ್ಷಿತಗೊಳಿಸುತ್ತದೆ. ಜಟಿಲಗೊಳಿಸುತ್ತದೆ. ನಿರ್ದೇಶಕರು ಕೊನೆಯವರೆಗೂ ಅಲ್ಲಲ್ಲಿ ತಿರುವುಗಳನ್ನು ಇಟ್ಟಿದ್ದಾರೆ. ಆ ಎಲ್ಲಾ ತಿರುವುಗಳೂ ಈ ಚಿತ್ರವನ್ನು ಕೈ ಹಿಡಿದು ಮುನ್ನಡೆಸುತ್ತಿರುತ್ತದೆ. ಸತೀಶ್ ನೀನಾಸಂ ಇಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಮಂತನ ಹುಡುಗನ ಏಕಾಕಿ ಭಾವವನ್ನು ಸಮರ್ಥವಾಗಿ ದಾಟಿಸುತ್ತಾರೆ. ಅದಿತಿ ಪ್ರಭುದೇವ ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ. ರಚಿತಾರಾಮ್ ಪಾತ್ರವೂ ವಿಶಿಷ್ಟವಾಗಿದೆ.
ಇದು ತಮಾಷೆ, ಭಯ, ಆಸೆ, ದುರಾಸೆಯ ಜೊತೆಗೆ ದ್ರೋಹದ ಕತೆಯನ್ನೂ ಹೇಳುತ್ತದೆ. ಆ ಎಲ್ಲಾ ಭಾವಗಳೂ ಸೇರಿ ಈ ಚಿತ್ರಕ್ಕೊಂದು ವಿಶಿಷ್ಟ ಕಳೆ ತಂದು ಕೊಟ್ಟಿದೆ.