ಸಾರಾಂಶ
ಸಿನಿವಾರ್ತೆ
ಶ್ರುತಿ ನಾಯ್ಡು ನಿರ್ಮಾಣ, ರಮೇಶ್ ಇಂದಿರಾ ನಿರ್ದೇಶನದ ಹೊಸ ಧಾರಾವಾಹಿ ‘ನನ್ನ ದೇವ್ರು’. ಜುಲೈ8 ರಿಂದ ಸೋಮವಾರದಿಂದ ಶನಿವಾರ ಸಂಜೆ 6.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.
ಈ ಕುರಿತು ನಿರ್ಮಾಪಕಿ ಶ್ರುತಿ ನಾಯ್ಡು, ‘ಧಾರಾವಾಹಿಗಳಲ್ಲೂ ಇದೀಗ ರಿಮೇಕ್ ಹಾವಳಿ ಹೆಚ್ಚಾಗುತ್ತಿದೆ. ಎಲ್ಲರೂ ಸ್ವಂತ ಕಥೆ ಇರುವ ಧಾರಾವಾಹಿಗಳನ್ನು ಬೆಂಬಲಿಸಬೇಕು. ನನ್ನ ದೇವ್ರು ನಮ್ಮ ನೆಲದ ಕಥೆ ಎನ್ನಲು ಹೆಮ್ಮೆ ಇದೆ’ ಎಂದರು.
ನಿರ್ದೇಶಕ ರಮೇಶ್ ಇಂದಿರಾ, ‘ನನಗೆ ಸಿನಿಮಾ, ಸೀರಿಯಲ್ ನಡುವೆ ಭೇದ ಇಲ್ಲ. ಹೆಸರು, ಹಣ, ಕೀರ್ತಿ ಎರಡರಲ್ಲೂ ಸಿಗುತ್ತದೆ. ನನ್ನ ದೇವ್ರು ಧಾರಾವಾಹಿ ನಿರೂಪಣೆಯಲ್ಲಿ ಹೊಸತನ ಇದೆ. ಇದನ್ನು ಜನ ಮೆಚ್ಚುವ ಭರವಸೆ ಇದೆ’ ಎಂದರು. ನಾಯಕಿ ಮಯೂರಿಗೆ ಧಾರಾವಾಹಿಯಲ್ಲಿ ಮಯೂರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕ ಅವಿನಾಶ್ ಮನೆಯವರಿಗೂ ಹೇಳದೇ ಈ ಸೀರಿಯಲ್ಗೆ ಬಂದ ಕಥೆ ಹೇಳಿದರೆ, ಹಿರಿಯ ನಟಿ ರೇಖಾ ದಾಸ್, ಕಳೆದ ಆರು ವರ್ಷಗಳಿಂದ ಕೆಲಸವಿಲ್ಲದೇ ಒದ್ದಾಡಿದ್ದನ್ನು ನೆನೆಸಿ ಭಾವುಕರಾದರು. ಕೆಲಸ ಕೊಟ್ಟ ಶ್ರುತಿ ನಾಯ್ಡು ಅವರಿಗೆ ಕಣ್ಣೀರಿನ ಕೃತಜ್ಞತೆ ಸಲ್ಲಿಸಿದರು. ಸಂಗೀತ ನಿರ್ದೇಶಕ ವಿ ಮನೋಹರ್ ಅವರ ಮೊದಲ ಧಾರಾವಾಹಿ ಇದು. ಹಿರಿಯ ರಂಗಭೂಮಿ ಕಲಾವಿದೆ ಮಾಲತಿ ಸುಧೀರ್ ಈ ಧಾರಾವಾಹಿಯಲ್ಲಿದ್ದಾರೆ.ಬಾಕ್ಸ್
ಇದು ಅಪ್ಪಟ ಕನ್ನಡ ಕತೆ
ಟೀವಿಗಳಲ್ಲಿ ರೀಮೇಕ್ ಸೀರಿಯಲ್ಲುಗಳ ಸಂಖ್ಯೆಯೇ ಹೆಚ್ಚು. ಈಗ ಪ್ರಸಾರವಾಗುತ್ತಿರುವ ಬಹುತೇಕ ಧಾರಾವಾಹಿಗಳು ಬೇರೆ ಭಾಷೆಯಲ್ಲಿ ಬಂದು ಜನಪ್ರಿಯತೆ ಗಳಿಸಿದವು. ಅಂಥವುಗಳ ನಡುವೆ, ಶ್ರುತಿ ನಾಯ್ಡು ತಾವೇ ಕತೆ ಬರೆದು, ಕನ್ನಡನೆಲದ ಧಾರಾವಾಹಿಯೊಂದನ್ನು ನಿರ್ಮಿಸುತ್ತಿದ್ದಾರೆ.
ಆರಂಭದಿಂದಲೂ ಸ್ವಂತಿಕೆಯನ್ನು ಮೆಚ್ಚು ಶ್ರುತಿ ನಾಯ್ಜು ಅನೇಕ ತಿಂಗಳುಗಳಿಂದ ಧಾರಾವಾಹಿ ಮಾಡಬಹುದಾದ ಕಾದಂಬರಿಗಾಗಿ ಹುಡುಕಾಟ ನಡೆಸಿದ್ದರು. ಇದೀಗ ತಾವೇ ಕತೆಗಾರರಾಗಿ ಧಾರಾವಾಹಿಯನ್ನು ಮುನ್ನಡೆಸಲು ಮುಂದಾಗಿದ್ದಾರೆ.