ಕ್ರೈಮ್‌ ಥ್ರಿಲ್ಲರ್‌ ಟೆನೆಂಟ್ ಸಿನಿಮಾ ನಿರ್ದೇಶಕ ಶ್ರೀಧರ ಶಾಸ್ತ್ರಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

- ನಮ್ಮ ಸಿನಿಮಾ ಟೀಸರ್‌ ನೋಡಿ ನಿಮ್ಮ ಮನಸ್ಸಲ್ಲಿ ಈಗಾಗಲೇ ಒಂದು ಇಮೇಜ್‌ ಬಂದಿರಬಹುದು. ಆದರೆ ಸಿನಿಮಾ ಈ ಕಲ್ಪನೆಗಳನ್ನು ತಲೆ ಕೆಳಗಾಗಿಸುತ್ತದೆ.

- ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಡೆಯುವ ಕ್ರೈಮ್‌ ಕಥೆ ಇದು. ನಾನಾ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಈ ಸಿನಿಮಾ ಮಾಡಿದ್ದೇನೆ. ಒಂದು ಕೊಲೆ, ಅದರ ಹಿನ್ನೆಲೆ, ಈ ಪ್ರಕರಣವನ್ನು ಭೇದಿಸುತ್ತಾ ಹೋಗುವಾಗ ಹೊರಬರುವ ಸತ್ಯಗಳು ಇವನ್ನೆಲ್ಲ ನಾನ್‌ ಲೀನಿಯರ್‌ ಕ್ರಮದಲ್ಲಿ ನಿರೂಪಿಸಿದ್ದೇನೆ. ಇದೊಂದು ಮಾಮೂಲಿ ಕ್ರೈಮ್‌ ಸಿನಿಮಾವಲ್ಲ. ಹೊಸತನದಿಂದ ಸಿನಿಮಾ ಕಟ್ಟುವ ಪ್ರಯತ್ನ ಮಾಡಿದ್ದೇವೆ.

- ನನ್ನ ಊರು ರಾಯಚೂರು. ಮೂಲತಃ ನಾನೊಬ್ಬ ವಿಎಫ್‌ಎಕ್ಸ್‌ ಆರ್ಟಿಸ್ಟ್‌. ಆದರೆ ನನಗೆ ಆರಂಭದಿಂದಲೂ ಸಿನಿಮಾ ಮೇಲೆ ಪ್ರೀತಿ. ಕ್ರೈಮ್‌ ಕಥೆಗಳೆಂದರೆ ರೋಮಾಂಚನ. ಬಹಳ ರಿಯಲಿಸ್ಟಿಕ್‌ ಆಗಿ ಮಾನವನ ಸಹಜ ಎಮೋಶನ್‌ಗಳನ್ನಿಟ್ಟು ಇಲ್ಲಿ ಕಥೆ ಹೇಳಬಹುದು ಅನ್ನೋದು ನನ್ನ ಯೋಚನೆ.

- ನಮ್ಮ ಕಲಾವಿದರು ಬಿಗ್‌ಬಾಸ್‌ ಮನೆಯಲ್ಲಿರುವಾಗ ಸಿನಿಮಾ ರಿಲೀಸ್‌ ಮಾಡಿದ್ದು ನಿರ್ಮಾಣ ಸಂಸ್ಥೆಯ ನಿರ್ಧಾರ. ಮನೆಯೊಳಗಿನ ಅವರ ಆಟ ಸಿನಿಮಾಕ್ಕೆ ಸ್ಟ್ರೆಂಥ್‌ ಆಗಲಿದೆ ಅನ್ನೋದು ನಮ್ಮ ವಿಶ್ವಾಸ. ಉಳಿದಂತೆ ಗಟ್ಟಿಕಥೆ, ಉತ್ತಮ ಪ್ರಸ್ತುತಿ, ಎಲ್ಲರೂ ತಿಳಿದುಕೊಳ್ಳಬೇಕಾದ ಅಂಶಗಳು ಸಿನಿಮಾದ ಗೆಲುವಿನ ಕೀಲಿಗೈಯಾಗಲಿವೆ ಎಂದು ನಂಬಿದ್ದೇನೆ.