ಪಶ್ಚಿಮ ಏಷ್ಯಾ ಸಂಘರ್ಷವು ಈಗ ದೂರದ ಭೂರಾಜಕೀಯ ಘಟನೆಯಾಗಿ ಉಳಿದಿಲ್ಲ. ಇದು ನಮ್ಮ ಆರ್ಥಿಕತೆ, ವ್ಯವಹಾರಗಳು ಮತ್ತು ಸಾಮಾನ್ಯ ನಾಗರಿಕರ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ.

 -ನಿರ್ಮಲಾ ಸೀತಾರಾಮನ್‌, ಕೇಂದ್ರ ಹಣಕಾಸು ಸಚಿವೆ

ಇರಾನ್‌ ಯುದ್ಧದಿಂದ ಸಂಕಷ್ಟ ಉಂಟಾಗಿದ್ದು ಜನರ ಹಿತಾಸಕ್ತಿ ಕಾಪಾಡಲು ಕೇಂದ್ರ ಕ್ರಮ । 

ಪಶ್ಚಿಮ ಏಷ್ಯಾ ಸಂಘರ್ಷವು ಈಗ ದೂರದ ಭೂರಾಜಕೀಯ ಘಟನೆಯಾಗಿ ಉಳಿದಿಲ್ಲ. ಇದು ನಮ್ಮ ಆರ್ಥಿಕತೆ, ವ್ಯವಹಾರಗಳು ಮತ್ತು ಸಾಮಾನ್ಯ ನಾಗರಿಕರ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈ ಸವಾಲನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು, 3 ಪ್ರಮುಖ ಕ್ಷೇತ್ರಗಳಾದ ಇಂಧನ (Fuel), ರಸಗೊಬ್ಬರ (Fertilisers) ಮತ್ತು ವಿದೇಶಿ ವಿನಿಮಯ (Forex) – ಎಂಬ 3Fಗಳ ಸೂತ್ರ ಇಲ್ಲಿದೆ.

ಪಶ್ಚಿಮ ಏಷ್ಯಾ ಸಂಘರ್ಷವು ಈಗ ದೂರದ ಭೂರಾಜಕೀಯ ಘಟನೆಯಾಗಿ ಉಳಿದಿಲ್ಲ. ಇದು ನಮ್ಮ ಆರ್ಥಿಕತೆ, ವ್ಯವಹಾರಗಳು ಮತ್ತು ಸಾಮಾನ್ಯ ನಾಗರಿಕರ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹಣಕಾಸು ಸಚಿವೆಯಾಗಿ, ನಾನು 3 ಪ್ರಮುಖ ಕ್ಷೇತ್ರಗಳಾದ ಇಂಧನ (Fuel), ರಸಗೊಬ್ಬರ (Fertilisers) ಮತ್ತು ವಿದೇಶಿ ವಿನಿಮಯ (Forex) – ಎಂಬ 3Fಗಳ ಕುರಿತು ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

ಈ ಸಂಕಷ್ಟದ ಸಮಯದಲ್ಲಿ ನಮ್ಮ ಸರ್ಕಾರವು ಆರ್ಥಿಕ ಬೆಳವಣಿಗೆಯನ್ನು ರಕ್ಷಿಸುವುದರೊಂದಿಗೆ ದುರ್ಬಲ ವರ್ಗಗಳನ್ನು ರಕ್ಷಿಸುವತ್ತ ಗಮನ ಹರಿಸಿದೆ. 3Fಗಳು ಈಗ ಏಕೆ ಮುಖ್ಯ ಎಂಬುದನ್ನು ನೋಡೋಣ. 80 ದಿನಗಳನ್ನು ಮೀರಿದ ಈ ಸಂಘರ್ಷವು ವಿಶ್ವದ ಕಚ್ಚಾ ತೈಲ ಬೆಲೆಗಳನ್ನು ತೀವ್ರವಾಗಿ ಏರಿಸಿದೆ. ಹೋರ್ಮುಜ್ ಜಲಸಂಧಿಯಂತಹ ಪ್ರಮುಖ ತೈಲ ಸಾಗಣಿಕೆ ಮಾರ್ಗಗಳಲ್ಲಿ ಅಡಚಣೆ ಉಂಟಾಗಿದೆ. ಇದು ಪೂರೈಕೆ ಸರಪಳಿಗಳ ಮೇಲೆ ಒತ್ತಡ ಹೇರಿದ್ದು, ಸಾಗಣಿಕೆ ವೆಚ್ಚಗಳನ್ನು ಹೆಚ್ಚಿಸಿದೆ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಇಂಧನ ಮತ್ತು ರಸಗೊಬ್ಬರದ ದೊಡ್ಡ ಆಮದುದಾರ ದೇಶವಾಗಿರುವ ಭಾರತ ಈ ವಾಸ್ತವವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ನಾವು ಈ ಆಘಾತವನ್ನು ಹೊರಲು ಸಿದ್ಧವಾಗಿದ್ದು, ದೀರ್ಘಕಾಲೀನ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುತ್ತಿದ್ದೇವೆ.

ಇಂಧನ:

ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವುದರೊಂದಿಗೆ ದೇಶದ ಮೇಲಿನ ಆರ್ಥಿಕ ಪ್ರಭಾವವನ್ನು ನಿಭಾಯಿಸುವುದು ಇವತ್ತಿನ ಅತಿ ದೊಡ್ಡ ಸವಾಲು. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಏರಿಕೆಯು ಹಂತಹಂತವಾಗಿ ವಿಸ್ತರಿಸುತ್ತಿದೆ. ಇಂದು ಪೆಟ್ರೋಲ್ ಬೆಲೆ ಲೀ.ಗೆ 2.61 ರು. ಮತ್ತು ಡೀಸಲ್ ಬೆಲೆ ಲೀ.ಗೆ 2.71 ರು. ಏರಿಕೆಯಾಗಿದೆ. ಇದು 11 ದಿನಗಳಲ್ಲಿ 4ನೇ ಏರಿಕೆಯಾಗಿದ್ದು, ಮೇ 15ರಿಂದ ಒಟ್ಟು ಸುಮಾರು 7.50 ರು. ಏರಿಕೆಯಾಗಿದೆ. ನಾಗರಿಕರ ಮೇಲಿನ ಹೊರೆಯನ್ನು ಕಡಿಮೆಗೊಳಿಸಲು ಸರ್ಕಾರವು ಪೆಟ್ರೋಲ್ ಮತ್ತು ಡೀಸಲ್‌ನ ಉತ್ಪಾದನಾ ತೆರಿಗೆಯನ್ನು ಕಡಿತಗೊಳಿಸಿದೆ. ಈ ಒಂದು ನಿರ್ಧಾರದಿಂದ ಸರ್ಕಾರಕ್ಕೆ ಸುಮಾರು 1 ಲಕ್ಷ ಕೋಟಿ ರು. ಆದಾಯ ನಷ್ಟವಾಗುತ್ತದೆ. ಮನೆಗಳು ಮತ್ತು ಸಣ್ಣ ವ್ಯವಹಾರಗಳ ಮೇಲೆ ಅತಿಯಾದ ಹಣದುಬ್ಬರದ ಒತ್ತಡವನ್ನು ತಡೆಯಲು ನಾವು ಈ ಮಾರ್ಗವನ್ನು ಆಯ್ಕೆ ಮಾಡಿದ್ದೇವೆ.

ಆದರೂ ಇಂಧನ ಬೆಲೆಗಳು ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ಒಟ್ಟಾರೆ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತವೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ಇಂಧನ ಸಂರಕ್ಷಣೆ ಕರೆಯನ್ನು ಪಾಲಿಸುವಂತೆ ನಾಗರಿಕರಲ್ಲಿ ಮನವಿ ಮಾಡುತ್ತೇನೆ. ಅಗತ್ಯವಿಲ್ಲದ ಪ್ರಯಾಣ ಕಡಿಮೆಗೊಳಿಸಿ. ಸಾಧ್ಯವಾದಲ್ಲಿ ಕಚೇರಿಗೆ ಬರದೆ ಮನೆಯಿಂದಲೇ ಕೆಲಸ ಮಾಡಿ.

ರಸಗೊಬ್ಬರ:

ವಿಶ್ವದ ಪೂರೈಕೆ ಅಡಚಣೆಗಳಿಂದಾಗಿ ರಸಗೊಬ್ಬರ ಬೆಲೆಗಳು ಕಲ್ಪನೆಗೂ ಮೀರಿ ಏರಿವೆ. ರೈತರಿಗೆ ಭಾರೀ ರಸಗೊಬ್ಬರ ಸಬ್ಸಿಡಿ ನೀಡುವ ದೇಶವಾಗಿರುವುದರಿಂದ ಇದು ನಮ್ಮ ಆರ್ಥಿಕ ಸ್ಥಿತಿಗೆ ದೊಡ್ಡ ಸವಾಲಾಗಿದೆ. 2026-27ರಲ್ಲಿ ಸಬ್ಸಿಡಿ ಹೊರೆ ಸುಮಾರು 70,000 ಕೋಟಿ ರು. ಹೆಚ್ಚಳವಾಗಬಹುದು ಮತ್ತು ಒಟ್ಟು ಸುಮಾರು 2.4 ಲಕ್ಷ ಕೋಟಿ ರು.ಗೆ ತಲುಪಬಹುದು. ಈ ವೆಚ್ಚದ ಒತ್ತಡದ ಹೊರತಾಗಿಯೂ, ಮುಂಬರುವ ಖಾರೀಫ್ ಋತುವಿಗೆ ಸಾಕಷ್ಟು ಸಂಗ್ರಹವನ್ನು ಖಚಿತಪಡಿಸಿದ್ದೇವೆ. ದೇಶೀಯ ಉತ್ಪಾದನೆ ಮುಂದುವರಿದಿದೆ ಮತ್ತು ಆಮದುಗಳನ್ನು ಅಂತಿಮಗೊಳಿಸಲಾಗಿದೆ. ನಮ್ಮ ರೈತರು ರಸಗೊಬ್ಬರದ ಕೊರತೆ ಎದುರಿಸುವುದಿಲ್ಲ ಎಂದು ಖಚಿತಪಡಿಸುತ್ತೇನೆ.

ವಿದೇಶಿ ವಿನಿಮಯ:

ಇಂಧನ ಬೆಲೆ ಏರಿಕೆ ಮತ್ತು ಜಾಗತಿಕ ಅನಿಶ್ಚಿತತೆಗಳು ನಮ್ಮ ವಿದೇಶಿ ವಿನಿಮಯ ಮೀಸಲು ಮತ್ತು ರುಪಾಯಿ ಮೌಲ್ಯದ ಮೇಲೆ ಒತ್ತಡ ಹೇರುತ್ತಿವೆ. ಸ್ಥಿರತೆ ಕಾಯ್ದುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಹಸ್ತಕ್ಷೇಪ ಮಾಡುತ್ತಿರುವುದರಿಂದ ಮೀಸಲುಗಳಲ್ಲಿ ಕೆಲವು ಕುಸಿತ ಕಂಡುಬಂದಿದೆ. ಆದರೂ ಭಾರತವು ವಿಶ್ವದ ಅತಿದೊಡ್ಡ ವಿದೇಶಿ ವಿನಿಮಯ ಮೀಸಲುಗಳಲ್ಲಿ ಒಂದನ್ನು ಹೊಂದಿದೆ. ಆದರೆ ಚಿನ್ನದ ಬೆಲೆ ಏರಿಕೆ ಮತ್ತು ಆಮದು ವೆಚ್ಚಗಳು ಬಾಹ್ಯ ಕ್ಷೇತ್ರದಲ್ಲಿ ಸವಾಲು ಸೃಷ್ಟಿಸುತ್ತಿವೆ. ಆದ್ದರಿಂದ ಅನಗತ್ಯ ಆಮದುಗಳನ್ನು ಕಡಿಮೆಗೊಳಿಸುವುದು ಮತ್ತು ಜಾಗರೂಕ ವೆಚ್ಚದ ಮೂಲಕ ವಿದೇಶಿ ವಿನಿಮಯವನ್ನು ಉಳಿಸುವುದು ಈ ಸಂದರ್ಭದಲ್ಲಿ ಅತ್ಯಗತ್ಯ.

ಸರ್ಕಾರದ ಆದ್ಯತೆಯ ಕ್ರಮಗಳು:

-ಸಾಮಾನ್ಯ ನಾಗರಿಕರನ್ನು ಅನಗತ್ಯ ಕಷ್ಟದಿಂದ ರಕ್ಷಿಸುವುದು

-ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಬೆಂಬಲ

-ಸರಳೀಕೃತ ಕಸ್ಟಮ್ಸ್ ಕಾರ್ಯವಿಧಾನಗಳ ಮೂಲಕ ರಫ್ತುದಾರರನ್ನು ರಕ್ಷಿಸುವುದು

-ಒಟ್ಟಾರೆ ಸಾಮೂಹಿಕ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದು

ನಮ್ಮ ಗುರಿ ಸ್ಪಷ್ಟ:

ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗಿರುವ ಅಡಚಣೆಗಳನ್ನು ಕನಿಷ್ಠಗೊಳಿಸಿ, ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ನಮ್ಮ ಪ್ರಮುಖ ಗುರಿ. ಇವತ್ತಿನ ಜಾಗತಿಕ ಸವಾಲು ನಮ್ಮ ಸಿದ್ಧತೆಯನ್ನು ಪರೀಕ್ಷಿಸುತ್ತಿದೆ. ನಮ್ಮ ಆಡಳಿತದ ಬದ್ಧತೆಯನ್ನು ಮತ್ತಷ್ಟು ದೃಢಪಡಿಸುತ್ತಿದೆ. ನಾವು ಜಾಗತಿಕ ಬೆಳವಣಿಗೆಗಳನ್ನು ನಿರಂತರವಾಗಿ ಗಮನಿಸುತ್ತಾ, ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಜನರು ಮತ್ತು ರೈತರ ಹಿತವನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ. ಭಾರತವು ಈ ಸವಾಲುಗಳನ್ನು ಶಕ್ತಿ, ಏಕತೆ ಮತ್ತು ಆರ್ಥಿಕ ಜಾಗರೂಕತೆಯೊಂದಿಗೆ ಹಿಮ್ಮೆಟ್ಟಿಸುತ್ತದೆ ಎಂಬ ವಿಶ್ವಾಸ ನನಗಿದೆ.