ಸಾರಾಂಶ
ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿನ ಭಾರೀ ವಿರೋಧದ ನಡುವೆಯೂ ವಾರಕ್ಕೆ ಆರು ದಿನಗಳ ಕೆಲಸವನ್ನು ಸಮರ್ಥಿಸಿಕೊಂಡಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ, ಕೆಲಸ- ಜೀವನದ ನಡುವಿನ ಸಮತೋಲನಕ್ಕಿಂತಲೂ ಮಿಗಿಲಾಗಿ ಪರಿಶ್ರಮವೇ ನನಗೆ ಮುಖ್ಯ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೂರ್ತಿ, ‘1986ರಲ್ಲಿ ವಾರಕ್ಕೆ 6 ದಿನಗಳ ಬದಲಾಗಿ 5 ದಿನಗಳ ಕೆಲಸ ನೀತಿ ಘೋಷಿಸಿದ್ದು ನನಗೆ ಬೇಸರ ತಂದಿತ್ತು. ನನ್ನ ನಿಲುವನ್ನು ನಾನು ಸಾಯುವವರೆಗೂ ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.
ಪರಿಶ್ರಮದಿಂದ ದುಡಿಯುವುದು ದೇಶದ ಪ್ರಗತಿಗೆ ಅಗತ್ಯವಾಗಿದೆ ಎಂದು ಪ್ರಧಾನಿ ಮೋದಿಯ ಬದ್ಧತೆಯನ್ನು ಹೊಗಳಿದರು. ಕಠಿಣ ವೃತ್ತಿಬದ್ಧತೆ ಇಲ್ಲದಿದ್ದರೆ ದೇಶವು ಇತರ ರಾಷ್ಟ್ರಗಳೊಂದಿಗೆ ಸ್ಪರ್ಧೆ ಮಾಡಲಾಗುವುದಿಲ್ಲ. ಪರಿಶ್ರಮಕ್ಕೆ ಪರ್ಯಾಯವಾದ ಸಂಗತಿ ಇಲ್ಲ ಎಂದು ತಿಳಿಸಿದರು.
ತಮ್ಮ ವೃತ್ತಿ ಜೀವನದ ಹಾದಿಯನ್ನು ಸ್ಮರಿಸಿದ ಅವರು, ದಿನಕ್ಕೆ 14 ಗಂಟೆ, ವಾರದಲ್ಲಿ ಆರೂವರೆ ದಿನ ಕೆಲಸ ಮಾಡುತ್ತಿದ್ದಾಗಿ ತಿಳಿಸಿದರು. ಅವರ ತಮ್ಮ ದಿನವನ್ನು 6.30ಗೆ ಶುರು ಮಾಡುತ್ತಿದ್ದು, ರಾತ್ರಿ 8.40ರವರೆಗೂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗಿ ತಿಳಿಸಿದರು.
ಪರಿಶ್ರಮ ವೈಯುಕ್ತಿಕ ಆಯ್ಕೆಯಲ್ಲ, ಬದಲಾಗಿ ಶಿಕ್ಷಣ ಪಡೆದ ಯಾರೊಬ್ಬರು ಮಾಡಬೇಕಾಗಿರುವ ಕರ್ತವ್ಯ. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಕೆಲಸದ ಬದ್ಧತೆ ಭಾರತೀಯ ಸಂಸ್ಕೃತಿಯ ಭಾಗವಾಗಿದೆ ಎಂದರು. ವಾರಕ್ಕೆ 70 ಗಂಟೆಗೆ ಕೆಲಸದ ಸಲಹೆ ಪರವಾಗಿ ಹಲವು ಉದ್ಯಮಿಗಳು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.